ಮೈಸೂರಿನಲ್ಲಿ ಮರುಕಳಿಸಲಿದೆ ಗತಕಾಲದ ರಾಜವೈಭವ
ಮೈಸೂರು, ಮೇ 26 : ಅರಮನೆ ನಗರಿ, ಸಾಂಸ್ಕೃತಿಕ ನಗರಿ ಎಂದೆಲ್ಲಾ ಕರೆಯಿಸಿಕೊಳ್ಳುವ ಮೈಸೂರು ಮತ್ತೆ ಗತಕಾಲದ ರಾಜವೈಭವದ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ರಾಜಾಡಳಿತದಲ್ಲಿ ನಡೆಯುತ್ತಿದ್ದ ಪಟ್ಟಾಭಿಷೇಕದ ಬಗ್ಗೆ ಇತಿಹಾಸದ ಪುಟದಲ್ಲಿ ಓದಿ, ಕೇಳಿ ತಿಳಿದಿದ್ದ ಮಂದಿಗೆ ಅದನ್ನು ನೋಡುವ ಸದಾವಕಾಶ ಒದಗಿ ಬಂದಿದೆ.
ಮೈಸೂರು ಸಂಸ್ಥಾನದ ಉತ್ತರಾಧಿಕಾರಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಯದುವಂಶದ ಶಾಸ್ತ್ರ ಸಂಪ್ರದಾಯದಂತೆ ಮೇ 28ರಂದು ಬೆಳಗ್ಗೆ 9.30ರಿಂದ 10.30ರವರೆಗೆ ಸಲ್ಲುವ ಶುಭ ಕರ್ಕಾಟಕ ಲಗ್ನದಲ್ಲಿ ಪಟ್ಟಾಭಿಷೇಕ ಮಾಡಲಾಗುತ್ತಿದೆ.
ಸುಮಾರು 41 ವರ್ಷಗಳ ಬಳಿಕ ನಡೆಯುತ್ತಿರುವ ಪಟ್ಟಾಭಿಷೇಕ ಜನತೆಯ ಕುತೂಹಲಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ಜಗದ್ವಿಖ್ಯಾತ ಅಂಬಾವಿಲಾಸ ಅರಮನೆಯೂ ಸಾಕ್ಷಿಯಾಗಲಿದೆ. ಇದೇ ಅರಮನೆಯಲ್ಲಿ 1974ರ ಅಕ್ಟೋಬರ್ 16ರಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪಟ್ಟಾಭಿಷೇಕ ನಡೆದಿತ್ತು. ಇದೀಗ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಪಟ್ಟಾಭಿಷೇಕ ಮಾಡಲಾಗುತ್ತಿದ್ದು, ಕ್ಷಣಗಣನೆ ಆರಂಭವಾಗಿದೆ. [ಯುವರಾಜ ಯದುವೀರ್ ಪರಿಚಯ]
ಹಾಗೆ ನೋಡಿದರೆ ಸ್ವಾತಂತ್ರ್ಯ ಪೂರ್ವದವರೆಗಿನ ಮೈಸೂರು ರಾಜಾಡಳಿತದ ದಿನಗಳನ್ನು ಇತಿಹಾಸದ ಪುಟಗಳಲ್ಲಿ ನೋಡುವುದಾದರೆ ಸುಮಾರು 550 ವರ್ಷಗಳ ಕಾಲ ಸುಮಾರು 25ಕ್ಕೂ ಹೆಚ್ಚು ಮಹಾರಾಜರು ಮೈಸೂರು ಸಂಸ್ಥಾನವನ್ನು ಆಳಿದ ಬಗ್ಗೆ ತಿಳಿದು ಬರುತ್ತದೆ. [550 ವರ್ಷಗಳ ಭವ್ಯ ಇತಿಹಾಸ]
ಮೈಸೂರು ರಾಜಮನೆತನದ ಆಳ್ವಿಕೆ, ಪೌರಾಣಿಕ ಹಿನ್ನೆಲೆಯನ್ನು ಗಮನಿಸುವುದಾದರೆ, ಕೆಲವೆಡೆ ಸಿಗುವ ಮಾಹಿತಿ ಆಧಾರದಲ್ಲಿ ಚಂದ್ರವಂಶಕ್ಕೆ ಸೇರಿದ ಗೌತಮ ಗೋತ್ರದ ರಾಜಭೂಪ ಎಂಬ ರಾಜ ಹಿಂದಿನಿಂದಲೂ ಆಡಳಿತ ನಡೆಸುತ್ತಿದ್ದನೆಂದು ಹೇಳಲಾಗುತ್ತಿದೆ. ಆದರೆ ಚರಿತ್ರೆಯಲ್ಲಿ ಇದಕ್ಕೆ ಆಧಾರ ಸಿಗುವುದಿಲ್ಲ. ಆದರೆ 1399ರಿಂದ ಈಚೆಗೆ ಚರಿತ್ರೆಯ ಸ್ಪಷ್ಟ ಚಿತ್ರಣವನ್ನು ನಾವು ಕಾಣಬಹುದಾಗಿದೆ. [ಪಟ್ಟಾಭಿಷೇಕ ಕಾರ್ಯಕ್ರಮ ವಿವರ]
ಮೈಸೂರನ್ನಾಳಿದ ಮಹಾರಾಜರ ಬಗ್ಗೆ ತಿಳಿಯುವುದಾದರೆ ಇಲ್ಲಿನ ರಾಜ ಮಹಾರಾಜರು ಮೇಧಾವಿಗಳೂ, ಶೂರರೂ, ಸ್ವತಃ ಸಾಹಿತಿಗಳು, ಕವಿಗಳು, ದೇಶಭಕ್ತರೂ, ಮಹಾದಕ್ಷರೂ ಆಗಿದ್ದರಲ್ಲದೆ, ಸಾಹಿತ್ಯ, ಸಂಗೀತ, ನಾಟಕ, ನೃತ್ಯಕಲೆಗಳಿಗಾಗಿ ಶ್ರಮಿಸಿದವರು ಎಂಬುದರಲ್ಲಿ ಎರಡು ಮಾತಿಲ್ಲ.
ಭಾರತದ ಚರಿತ್ರೆಯಲ್ಲಿ ಸುಮಾರು 300 ವರ್ಷಕ್ಕೆ ಹೆಚ್ಚು ಕಾಲ ಆಡಳಿತವನ್ನು ಬೇರೆ ಯಾವ ರಾಜವಂಶವೂ ನಡೆಸಿಲ್ಲ. ಮೈಸೂರು ಮಹಾರಾಜರು ಸುಮಾರು 550 ವರ್ಷಗಳ ಕಾಲ ಚರಿತ್ರೆಯಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿದ ಹೆಗ್ಗಳಿಕೆಯನ್ನು ಪಡೆದಿದ್ದಾರೆ. [ಮೈಸೂರಿನ ಭವ್ಯ ಇತಿಹಾಸದ ಅನಾವರಣ ಬುಧವಾರ]