ದೇವರಾಜ ಮಾರುಕಟ್ಟೆ ಕೆಡವಲು ಕೋರ್ಟ್ ಆದೇಶಿಸಿಲ್ಲ: ಯದುವೀರ್ ಒಡೆಯರ್
Recommended Video
ಮೈಸೂರು, ಜುಲೈ 17: ಮೈಸೂರಿನ ಪಾರಂಪರಿಕ ಕಟ್ಟಡ ದೇವರಾಜ ಮಾರುಕಟ್ಟೆಯನ್ನು ಕೆಡವಲು ನ್ಯಾಯಾಲಯ ಆದೇಶಿಸಿಲ್ಲ, ಬದಲಿಗೆ ಅದರ ಸಂರಕ್ಷಣೆ ಮಾಡಲು ಚಿಂತನೆ ನಡೆಸಿದೆ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಮೇಯರ್ ಪುಷ್ಪಲತಾ ಹೇಳಿಕೆ ಹಾಗೂ ಮಾಧ್ಯಮದ ವರದಿ ಹಿನ್ನೆಲೆ ದೇವರಾಜ ಮಾರುಕಟ್ಟೆಗೆ ಪತ್ನಿ ತ್ರಿಷಿಕಾ ಅವರೊಂದಿಗೆ ತೆರಳಿ ಪರಿಶೀಲಿಸಿದರು. ಇದಕ್ಕಿಂತ ಮುಂಚಿತವಾಗಿ ತಮ್ಮ ಟ್ಬಿಟರ್ ಖಾತೆಯಲ್ಲೂ ಈ ವಿಷಯದ ಕುರಿತು ಸ್ಪಷ್ಟನೆ ನೀಡಿದ್ದರು. ನ್ಯಾಯಾಲಯದ ಆದೇಶವನ್ನು ತಪ್ಪಾಗಿ ಅರ್ಥೈಸಲಾಗಿದೆ. ಈ ಕಟ್ಟಡಗಳನ್ನು ಸಂರಕ್ಷಿಸುವ ಕೆಲಸ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ. ಎಲ್ಲರೂ ಪಾರಂಪರಿಕ ಕಟ್ಟಡಗಳನ್ನು ಉಳಿಸೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ದೇವರಾಜ ಮಾರುಕಟ್ಟೆ ಕೆಡವಲು ಕೋರ್ಟ್ ಆದೇಶ
ಯಾವುದೇ ಕಾರಣಕ್ಕೂ ಮಾರುಕಟ್ಟೆಯನ್ನು ಕೆಡವಿ ಹೊಸತಾಗಿ ನಿರ್ಮಿಸಕೂಡದು. ಮಾರುಕಟ್ಟೆಯನ್ನು ನವೀಕರಿಸಿದರೆ ಕನಿಷ್ಠ 100 ವರ್ಷ ಕಾಲ ಬಾಳಿಕೆ ಬರುತ್ತದೆ. ಪಾರಂಪರಿಕ ತಜ್ಞರು ಕಟ್ಟಡವನ್ನು ಸೂಕ್ತವಾಗಿ ಪರಿಶೀಲನೆ ನಡೆಸಬೇಕು. ಮಾರುಕಟ್ಟೆ ಮೈಸೂರಿನ ಪ್ರಮುಖ ಗುರುತು. ಹಾಗಾಗಿ, ಉಳಿಸಿಕೊಳ್ಳಬೇಕು. ಸರ್ಕಾರದ ತೀರ್ಮಾನದ ಬಳಿಕ ನಮ್ಮ ನಿರ್ಧಾರ ಪ್ರಕಟಿಸುತ್ತೇವೆ. ಪಾರಂಪರಿಕ ಸಮಿತಿ ಸದಸ್ಯರು ಮಾರುಕಟ್ಟೆಗೆ ಭೇಟಿ ನೀಡುವಾಗ ನಾನೂ ಸ್ಥಳಕ್ಕೆ ಬರುತ್ತೇನೆ. ಯಾವುದೇ ಕಾರಣಕ್ಕೂ ವ್ಯಾಪಾರಿಗಳ ಕೈ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಕಟ್ಟಡವನ್ನು ಪುನರ್ ನಿರ್ಮಿಸಬೇಕು ಅಥವಾ ಅದನ್ನು ನವೀಕರಣಗೊಳಿಸಬೇಕು ಎಂಬುದರ ಕುರಿತು ತಜ್ಞರ ವರದಿ ಪಡೆಯಲಾಗಿದೆ. ಎರಡು ಸಮಿತಿಗಳು ವರದಿ ಸಲ್ಲಿಸಿವೆ. ಈ ಮಧ್ಯೆ ಮುಂಬೈ ಮೂಲದ ಸವಾನಿ ಕನ್ಸ್ಟ್ರಕ್ಷನ್ ಕಂಪನಿಗೆ ನವೀಕರಣ ಕಾಮಗಾರಿ ಗುತ್ತಿಗೆ ನೀಡಲಾಗಿತ್ತು. ಅದು ಕಾರ್ಯಗತವಾಗಿಲ್ಲ ಎಂದರು.
ಈ ಕುರಿತು ಮೇಯರ್ ಪುಷ್ಪಲತಾ ಜಗನ್ನಾಥ್ ಪ್ರತಿಕ್ರಿಯಿಸಿ, ದೇವರಾಜ ಮಾರುಕಟ್ಟೆಯನ್ನು ಒಡೆದು ಕಟ್ಟುವ ಬಗೆಗಿನ ನ್ಯಾಯಾಲಯದ ತೀರ್ಪಿನ ಬಗ್ಗೆ ಮತ್ತೊಮ್ಮೆ ಪರಿಶೀಲಿಸುತ್ತೇವೆ. ಈ ಸಂಬಂಧ ಪಾರಂಪರಿಕ ತಜ್ಞರೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡುತ್ತೇವೆ. ನ್ಯಾಯಾಲಯದ ತೀರ್ಪಿನಂತೆ ಕಾರ್ಯನಿರ್ವಹಿಸುತ್ತೇವೆ ಎಂದರು.
ಮೈಸೂರಿನ ಪಾರಂಪರಿಕ ಕಟ್ಟಡಗಳ ನೆಲಸಮಕ್ಕೆ ವಿರೋಧ
ಹೈಕೋರ್ಟ್ ತೀರ್ಪನ್ನು ಮೈಸೂರು ಮಹಾನಗರ ಪಾಲಿಕೆ ತಪ್ಪಾಗಿ ಅರ್ಥೈಸಿಕೊಂಡಿದೆ. ತೀರ್ಪನ್ನು ಸರಿಯಾಗಿ ತಿಳಿದುಕೊಳ್ಳದೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದು ತಪ್ಪು ಎಂದು ದೇವರಾಜ ಮಾರುಕಟ್ಟೆ ವ್ಯಾಪಾರಸ್ಥರ ಸಂಘ ಖಂಡಿಸಿದೆ. ಕಟ್ಟಡ ನೆಲಸಮ ಮಾಡಲು ಹೈಕೋರ್ಟ್ ಆದೇಶಿಸಿದ್ದಾಗಿ ಪಾಲಿಕೆ ಹೇಳುತ್ತಿದೆ. ಕಟ್ಟಡ ನೆಲಸಮ ಮಾಡುವಂತೆ ಹೈಕೋರ್ಟ್ ಎಲ್ಲೂ ಹೇಳಿಲ್ಲ. ಪಾರಂಪರಿಕ ಕಟ್ಟಡವನ್ನು ಉಳಿಸಲು ಸಂಘ ತನ್ನ ಹೋರಾಟ ಮುಂದುವರಿಸಲಿದೆ ಎಂದು ಸಂಘದ ಕಾರ್ಯಕರ್ತರು ತಿಳಿಸಿದ್ದಾರೆ.
ಮೈಸೂರಿನ ದೇವರಾಜ ಮಾರುಕಟ್ಟೆ ಕುಸಿತ
ಈ ಬಗ್ಗೆ ಮಾತನಾಡಿದ ಇತಿಹಾಸ ತಜ್ಞ ನಂಜರಾಜ ಅರಸ್, ಪಾರಂಪರಿಕ ಕಟ್ಟಡವಾದ ದೇವರಾಜ ಮಾರುಕಟ್ಟೆಯನ್ನು ಒಡೆಯಲು ನ್ಯಾಯಾಲಯ ಹೇಳಿಲ್ಲ. ತಜ್ಞರೊಂದಿಗೆ ಚರ್ಚಿಸಿ ಎಂದು ಹೇಳಿದೆ. ಆದರೆ ಚುನಾಯಿತ ಪ್ರತಿನಿಧಿಗಳಿಗೆ ಅನುಕೂಲವಾಗಿರುವುದರಿಂದ ಮಾರುಕಟ್ಟೆಯನ್ನು ಕೆಡವಲು ಆತುರಪಡಿಸುತ್ತಿದ್ದಾರೆ ಎಂದರು.