ಮೈಸೂರು; ನ್ಯಾಯಾಲಯದ ಆವರಣದಲ್ಲೇ ನೆಲದಲ್ಲಿ ಹೊರಳಾಡಿದ ಸಂತ್ರಸ್ತೆ
ಮೈಸೂರು, ನವೆಂಬರ್ 21: ನ್ಯಾಯಕ್ಕಾಗಿ ಹೋರಾಡುತ್ತಿರುವ ಮಹಿಳೆಯೊಬ್ಬರು ನ್ಯಾಯಾಲಯದ ಆವರಣದಲ್ಲೇ ನೆಲದ ಮೇಲೆ ಬಿದ್ದು ಹೊರಳಾಡಿದ ಮನಕಲುಕುವ ಘಟನೆ ಇಲ್ಲಿಗೆ ಸಮೀಪದ ಎಚ್.ಡಿ.ಕೋಟೆಯಲ್ಲಿ ನಡೆದಿದೆ.
ಎಚ್.ಡಿ ಕೋಟೆ ನಿವಾಸಿ ಲಕ್ಷ್ಮಿ ಅವರು 2005ರಲ್ಲಿ ಪಿರಿಯಾಪಟ್ಟಣ ತಾಲೂಕು ಬೈಲುಕುಪ್ಪೆಯ ಸತೀಶ್ ಎಂಬಾತನ ಜೊತೆ ವಿವಾಹವಾಗಿದ್ದರು. ಹೆಣ್ಣು ಮಗು ಹುಟ್ಟಿದ್ದರಿಂದ ಸತೀಶ್ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದನು. ಅಲ್ಲದೇ ಮತ್ತೊಬ್ಬ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಈತನ ಕಿರುಕುಳದಿಂದ ಲಕ್ಷ್ಮಿ ಮಗಳು ಹರ್ಷಿತಾ ಜತೆ ತವರು ಮನೆ ಸೇರಿಕೊಂಡಿದ್ದರು. ಇತ್ತ ಸತೀಶ್ ವಿಚ್ಛೇದನವನ್ನೂ ನೀಡದೆ ತನ್ನ ಅಕ್ರಮ ಸಂಬಂಧ ಮುಂದುವರಿಸಿದ್ದನು.
ಗುಂಡು ಹೊಡೆದು ಪತ್ನಿ ಹತ್ಯೆ; ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ !
ಇದರಿಂದ ಬೇಸತ್ತ ಲಕ್ಷ್ಮಿ, ಜೀವನಾಂಶಕ್ಕಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು. ಶುಕ್ರವಾರ ವಿಚಾರಣೆಗೆ ಲಕ್ಷ್ಮಿ ಮಗಳು ಹರ್ಷಿತಾ ಜೊತೆ ಆಗಮಿಸಿದ್ದರು. ನ್ಯಾಯಾಲಯದ ಆವರಣದಲ್ಲಿ ತಂದೆಯನ್ನು ಕಂಡ ಹರ್ಷಿತಾ ಮಾತನಾಡಿಸಲು ಹೋಗಿದ್ದಾಳೆ.
ಈ ವೇಳೆ ಸತೀಶ್ ಕೆಟ್ಟ ಪದಗಳಿಂದ ಮಗಳನ್ನು ನಿಂದಿಸಿದ್ದಾನೆ. ಅಲ್ಲಿಯೇ ಇದ್ದ ಲಕ್ಷ್ಮಿ ಆಕ್ಷೇಪಿಸಿದ್ದಕ್ಕೆ ಪತ್ನಿಯನ್ನು ಅವಾಚ್ಯ ಪದಗಳಿಂದ ನಿಂದಿಸಿ ರಸ್ತೆಯಲ್ಲಿ ತಳ್ಳಿ ಪರಾರಿಯಾಗಿದ್ದಾನೆ. ಪತಿಯ ವರ್ತನೆಗೆ ನೊಂದು ಹೋದ ಲಕ್ಷ್ಮಿ ನೋವಿನಿಂದ ನ್ಯಾಯಾಲಯದ ಆವರಣದಲ್ಲಿಯೇ ನೆಲದ ಮೇಲೆಯೇ ಬಿದ್ದು ಹೊರಳಾಡಿ ಕಣ್ಣೀರು ಹಾಕಿದ್ದಾರೆ. ನನಗೆ ಹಾಗೂ ನನ್ನ ಮಗಳ ಭವಿಷ್ಯಕ್ಕೆ ಜೀವನಾಂಶ ಬೇಕು ಎಂದು ಗೋಳಾಡಿದ್ದಾರೆ.