ತಿ ನರಸೀಪುರದ ಗೃಹಿಣಿಯನ್ನು ಗಂಡನ ಮನೆಯವರೇ ಕೊಂದರೆ?
ಮೈಸೂರು, ಜನವರಿ 11: ತವರಿಂದ ವರದಕ್ಷಿಣೆ ತರುವಂತೆ ಪತಿಯು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರಿಂದ ಬೇಸತ್ತ ಗೃಹಿಣಿಯೊಬ್ಬರು ನೇಣಿಗೆ ಶರಣಾದ ಘಟನೆ ತಿ.ನರಸೀಪುರ ಪಟ್ಟಣದ ತಾಲೂಕು ಕಚೇರಿ ರಸ್ತೆಯಲ್ಲಿ ನಡೆದಿದೆ.
ಲಿಂಗರಾಜು ಎಂಬಾತನ ಪತ್ನಿ ಎಸ್.ತೇಜಸ್ವಿನಿ (28) ಆತ್ಮಹತ್ಯೆ ಮಾಡಿಕೊಂಡವರು. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಹೊಸ ಬಡಾವಣೆಯ ನಿವಾಸಿ ಎಸ್.ಶಾಂತೇಶ್ ಎಂಬುವರ ಪುತ್ರಿ ಎಸ್.ತೇಜಸ್ವಿನಿಯನ್ನು ತಿ.ನರಸೀಪುರ ಪಟ್ಟಣದ ತಾಲೂಕು ಕಚೇರಿ ಮುಂಭಾಗವಿರುವ ದಿ.ಎಂ.ಮಹದೇವಪ್ಪ ಅವರ ಪುತ್ರ ಲಿಂಗರಾಜುಗೆ ಕೊಟ್ಟು ಮೂರು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು.[ಉಳ್ಳಾಲದ ಬ್ಯೂಟಿಷಿಯನ್ ಮಧುಶ್ರೀ ನೇಣಿಗೆ ಕಾರಣವೇನು?]
ಮದುವೆ ಸಂದರ್ಭದಲ್ಲಿ ಚಿನ್ನಾಭರಣದೊಂದಿಗೆ ಸಾಮರ್ಥ್ಯಕ್ಕೆ ತಕ್ಕಂತೆ ವರೋಪಚಾರವನ್ನು ಮಾಡಿ ವಿವಾಹ ಮಾಡಲಾಗಿತ್ತು. ಮದುವೆಯಾದ ಬಳಿಕ ಚೆನ್ನಾಗಿದ್ದ ಲಿಂಗರಾಜು, ಮಗುವಾದ ಬಳಿಕ ವರದಕ್ಷಿಣೆಗೆ ಹಿಂಸಿಸತೊಡಗಿದ್ದ. ಇದರಿಂದ ಬೇಸತ್ತಿದ್ದ ತೇಜಸ್ವಿನಿ, ಮಂಗಳವಾರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಷಯ ತಿಳಿದ ಪತಿ ಲಿಂಗರಾಜು, ಅತ್ತೆ ಸುಂದರಮ್ಮ, ನಾದಿನಿ ಅನ್ನಪೂರ್ಣಾ ಹಾಗೂ ಮೈದುನ ಶಿವಕುಮಾರ್ ಸೇರಿದಂತೆ ಮನೆಯಲ್ಲಿದ್ದವರೆಲ್ಲ ಮಗು ಮಹದೇವ ಪ್ರಸಾದ್ ಜೊತೆಗೆ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಸರ್ಕಲ್ ಇನ್ ಸ್ಪೆಕ್ಟರ್ ಮನೋಜ್ ಕುಮಾರ್ ಹಾಗೂ ಸಬ್ ಇನ್ ಸ್ಪೆಕ್ಟರ್ ಎನ್.ಆನಂದ್ ಪರಿಶೀಲನೆ ನಡೆಸಿದರು.[ಎಂಡೋಸಲ್ಫನ್ ಪೀಡಿತ ಒಂದೇ ಕುಟುಂಬದ ಐದು ಜನರು ಆತ್ಮಹತ್ಯೆ]
ತೇಜಸ್ವಿನಿಯ ಪೋಷಕರು ಆಗಮಿಸಿ, ವಿವಾಹವಾದ ಮೂರು ವರ್ಷಗಳಿಂದಲೂ ವರದಕ್ಷಿಣೆಗಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳವನ್ನು ಪತಿಯೊಂದಿಗೆ ಆತನ ಮನೆಯವರು ನಿರಂತರವಾಗಿ ನೀಡುತ್ತಿದ್ದರು. ಅವರೆಲ್ಲರೂ ಸೇರಿ ಕೊಲೆ ಮಾಡಿ, ನೇಣು ಬಿಗಿದುಕೊಂಡಂತೆ ನೇತು ಹಾಕಿದ್ದಾರೆ ಎಂದು ದೂರು ನೀಡಿದರು. ಅಲ್ಲದೆ ಆರೋಪಿಗಳನ್ನು ಬಂಧಿಸುವವರೆವಿಗೂ ತೇಜಸ್ವಿನಿ ಶವವನ್ನು ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೇತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರ ಬಂಧುಗಳನ್ನು ಸಮಾಧಾನಪಡಿಸಿ, ಪ್ರಕರಣ ದಾಖಲಿಸಿಕೊಂಡ ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.