ಕೌಟುಂಬಿಕ ಕಲಹಕ್ಕೆ ಬೇಸತ್ತು ನಾಲೆಗೆ ಹಾರಿ ಗೃಹಿಣಿ ಆತ್ಮಹತ್ಯೆ
ಕೆ.ಆರ್.ಪೇಟೆ, ಅಕ್ಟೋಬರ್ 12: ಗೃಹಿಣಿಯೊಬ್ಬರು ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗಿಡದಹೆಮ್ಮಡಹಳ್ಳಿ ಗ್ರಾಮದ ಬಳಿ ನಡೆದಿದ್ದು, ಆತ್ಮಹತ್ಯೆಗೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ.
ಶೀಳನೆರೆ ಹೋಬಳಿಯ ಚಾವಡಘಟ್ಟ ಗ್ರಾಮದ ಮೋಹನಕುಮಾರ್ ಎಂಬಾತನ ಪತ್ನಿ ಅನ್ನಪೂರ್ಣಾ (35) ಆತ್ಮಹತ್ಯೆ ಮಾಡಿಕೊಂಡವರು. ಗಿಡದಹೆಮ್ಮಡಹಳ್ಳಿ ಗ್ರಾಮದ ಕಪನೀಗೌಡ ಮತ್ತು ಚಿಕ್ಕಮ್ಮ ದಂಪತಿ ಮಗಳಾದ ಅನ್ನಪೂರ್ಣಾಳನ್ನು 15 ವರ್ಷಗಳ ಹಿಂದೆ ಚಾವಡಘಟ್ಟ ಗ್ರಾಮದ ಚೋಟೇಗೌಡ ಮತ್ತು ಪುಟ್ಟಮ್ಮ ದಂಪತಿ ಮಗ ಮೋಹನ್ ಕುಮಾರನೊಂದಿಗೆ ಮದುವೆ ಮಾಡಲಾಗಿತ್ತು.
ಈ ದಂಪತಿ ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರಿಗೆ ದೀಪಾ, ರಮ್ಯಾ, ರುಕ್ಮಿಣಿ ಎಂಬ ಮೂವರು ಮಗಳಿದ್ದಾರೆ. ಈ ಮಧ್ಯೆ ಗಂಡ-ಹೆಂಡತಿ ಮಧ್ಯೆ ಕೌಟುಂಬಿಕ ಕಲಹ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಬೇಸತ್ತು ತವರೂರು ಗಿಡದಹೆಮ್ಮಡಹಳ್ಳಿ ಗ್ರಾಮಕ್ಕೆ ಬಂದಿದ್ದರು.
ತಮ್ಮ ಮೂವರು ಹೆಣ್ಣುಮಕ್ಕಳನ್ನು ಮನೆಯಲ್ಲಿ ಬಿಟ್ಟು, ಗ್ರಾಮದ ಬಳಿ ಹರಿಯುವ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆ.ಆರ್.ಪೇಟೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಮತ್ತು ಪಟ್ಟಣ ಪೊಲೀಸರು ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಘಟನೆ ಕುರಿತು ಮೃತಳ ತಾಯಿ ಚಿಕ್ಕಮ್ಮ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ.