ಎಚ್ಡಿ ಕೋಟೆ ಬಳಿ ಮಹಿಳೆ ಮೇಲೆ ಎರಗಿದ ಕರಡಿ
ಮೈಸೂರು, ನವೆಂಬರ್ 11 : ಕರಡಿಯೊಂದು ರೈತ ಮಹಿಳೆಯ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಮೈಸೂರು ಜಿಲ್ಲೆಯ ಹೆಗ್ಗಡೆದೇವನ ಕೋಟೆಯ ಬಸವಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಗೋಪಾಲನಾಯಕ ಎಂಬುವರ ಪತ್ನಿ ಮಹದೇವಮ್ಮ(48) ಗಾಯಗೊಂಡಿದ್ದು, ಅವರು ಜಮೀನಿನಲ್ಲಿ ದನ-ಕರುಗಳಿಗೆ ನೀರು ಕುಡಿಸಲೆಂದು ತೆರಳುತ್ತಿದ್ದಾಗ ಕರಡಿ ಹಠಾತ್ತನೆ ದಾಳಿ ಮಾಡಿದೆ.
ಎಚ್.ಡಿ.ಕೋಟೆ ತಾಲೂಕಿನ ಹೊಸಬಿದರಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬಸಾಪುರ ಗ್ರಾಮವು ಕಾಡಂಚಿನಲ್ಲಿದ್ದು, ಇಲ್ಲಿನ ಕಲ್ಲುಕ್ವಾರೆ ಸಮೀಪದ ಪ್ರದೇಶದಲ್ಲಿ ಸೋಮವಾರ ಮಹದೇವಮ್ಮ ಅವರು ತಮ್ಮ ದನಕರುಗಳನ್ನು ಮೇಯಿಸುತ್ತಾ ಮಧ್ಯಾಹ್ನದ ವೇಳೆ ನೀರು ಕುಡಿಸಲೆಂದು ತಮ್ಮ ಜಮೀನಿನ ಸಮೀಪ ತೆರಳುತ್ತಿದ್ದರು. ಇದೇ ವೇಳೆ ಪೊದೆಯಲ್ಲಿ ಅವಿತಿದ್ದ ಕರಡಿಯೊಂದು ದಿಢೀರನೆ ಪ್ರತ್ಯಕ್ಷವಾಗಿ ಅವರ ಮೇಲೆ ದಾಳಿ ಮಾಡಿದೆ. ಪರಿಣಾಮ ಮಹದೇವಮ್ಮ ಅವರ ಬಲ ಕಾಲಿಗೆ ಗಾಯವಾಗಿದೆ. [ತುಮಕೂರು: ಕರಡಿ ದಾಳಿಗೆ ಬಲಿಯಾದ ರೈತ]
ಕರಡಿ ದಾಳಿಗೆ ಹೆದರಿದ ಮಹದೇವಮ್ಮ ಪ್ರಾಣ ಭಯದಿಂದ ಕಿರುಚಿಕೊಂಡಿದ್ದಾರೆ. ಅವರ ಕಿರುಚಾಟ ಕೇಳಿ ಅಕ್ಕಪಕ್ಕದಲ್ಲಿದ್ದ ಗ್ರಾಮಸ್ಥರು ಸ್ಥಳಕ್ಕೆ ಬಂದು ಕರಡಿಯನ್ನು ಓಡಿಸಿದ್ದಾರೆ. ಬಳಿಕ ಗಾಯಗೊಂಡಿದ್ದ ಅವರನ್ನು ಖಾಸಗಿ ವಾಹನದಲ್ಲಿ ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.
ಮಹದೇವಮ್ಮ ಅವರ ಬಲಕಾಲಿಗೆ ಗಂಭೀರ ಗಾಯವಾಗಿದ್ದು ಸುಮಾರು 25 ಹೊಲಿಗೆಗಳನ್ನು ಹಾಕಲಾಗಿದೆ. ಯಾವುದೇ ಪ್ರಾಣಾಪಾಯವಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಸರಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.