ಕ್ರೈಂ ಸೀರಿಯಲ್ ನೋಡಿ ಕಳ್ಳತನ ಕಲಿತ ಚಾಲಾಕಿ ಕಳ್ಳಿ ಕದ್ದಿದ್ದೆಷ್ಟು ಗೊತ್ತಾ?
ಮೈಸೂರು, ಮಾರ್ಚ್ 1: ತಂಪು ಪಾನೀಯ ನೀಡಿ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ಕಳವು ಮಾಡುತ್ತಿದ್ದ ಮಹಿಳೆಯೊಬ್ಬಳನ್ನು ಇಲ್ಲಿನ ಲಷ್ಕರ್ ಠಾಣೆ ಪೊಲೀಸರು ಬಂಧಿಸಿ, ಆಕೆಯಿಂದ 18 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಆದರೆ ಇವೆಲ್ಲಾ ಪಕ್ರರಣಗಳನ್ನು ಆಕೆ ನೋಡಿ ಕಲಿತದ್ದು ಟಿವಿಗಳಲ್ಲಿ ಪ್ರಸಾರವಾಗುವ ಕ್ರೈಂ ಸೀರಿಯಲ್ ನಿಂದಾಗಿ ಎಂಬುದನ್ನು ಅವಳೇ ಬಾಯ್ಬಿಟ್ಟಿದ್ದಾಳೆ.
ಮತ್ತೊಮ್ಮೆ ಪೊಲೀಸರ ಸೋಗಿನಲ್ಲಿ ಮೈಸೂರಿನಲ್ಲಿ ಕಳ್ಳತನ
ಇಲ್ಲಿನ ಎನ್.ಆರ್.ಮೊಹಲ್ಲಾ ನಿವಾಸಿ ಸುವರ್ಣಾ (28) ಬಂಧಿತ ಮಹಿಳೆ. ಈಕೆಯಿಂದ 18 ಲಕ್ಷ ಮೌಲ್ಯದ 581 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈಕೆ ವಿರುದ್ಧ ಒಟ್ಟು 12 ಪ್ರಕರಣಗಳು ದಾಖಲಾಗಿವೆ.
ಮೈಸೂರಿನಿಂದ ಬೆಂಗಳೂರಿಗೆ ನಿತ್ಯ ಪ್ರಯಾಣ ಮಾಡುತ್ತಿದ್ದ ಈಕೆ ಒಂಟಿಯಾಗಿ ಪ್ರಯಾಣ ಮಾಡುತ್ತಿದ್ದ ವಯೋವೃದ್ಧ ಮಹಿಳೆಯರ ಪಕ್ಕ ಕೂತು ಮಾತಿಗೆ ತೊಡಗುತ್ತಿದ್ದಳು. ಮದ್ದೂರು ಬಳಿ ಬಸ್ ನಿಲ್ಲುತ್ತಿದ್ದಂತೆ ಅಲ್ಲಿ ಬಿಸ್ಕೆಟ್ ಹಾಗೂ ಇತರ ತಿನಿಸುಗಳನ್ನು ತೆಗೆದುಕೊಂಡು ಬಂದು ನೀಡಿ, ತಾನೂ ತಿನ್ನುತ್ತಿದ್ದಳು.
ಮೈಸೂರಿನ ಬಂದಂತಮ್ಮ ದೇವಸ್ಥಾನದಲ್ಲಿ ಲಕ್ಷಾಂತರ ರೂ.ದೋಚಿದ ಕಳ್ಳರು
ಸ್ವಲ್ಪ ಹೊತ್ತಾದ ನಂತರ ಬ್ಯಾಗಿನಿಂದ ತಂಪು ಪಾನೀಯದ ಎರಡು ಬಾಟಲಿ ತೆಗೆದು ಒಂದನ್ನು ಮಹಿಳೆಗೆ ನೀಡಿ ಮತ್ತೊಂದು ಬಾಟಲಿಯನ್ನು ತಾನು ಕುಡಿಯುತ್ತಿದ್ದಳು. ಈ ಪಾನೀಯ ಕುಡಿದ ತಕ್ಷಣ ಗಾಢ ನಿದ್ದೆಗೆ ವಯೋವೃದ್ಧ ಮಹಿಳೆಯರು ಜಾರುತ್ತಿದ್ದರು. ಆ ನಂತರ ತನ್ನ ಕೆಲಸವನ್ನು ಹೇಗೆ ಶುರು ಹಚ್ಚಿಕೊಳ್ಳುತ್ತಿದ್ದಳು ಎಂಬುದರ ವಿವರ ಇಲ್ಲಿದೆ ಓದಿ...
ಕಟಿಂಗ್ ಪ್ಲೇಯರ್ನಿಂದ ಸರಕ್ಕೆ ಕತ್ತರಿ
ವಯೋವೃದ್ಧ ಮಹಿಳೆಯರು ತಂಪು ಪಾನೀಯ ಕುಡಿದು ನಿದ್ದೆ ಹೋದ ನಂತರ ಈಕೆ ಕಟಿಂಗ್ ಪ್ಲೇಯರ್ನಿಂದ ಚಿನ್ನದ ಸರ ಕತ್ತರಿಸಿ ಹೊರಡುತ್ತಿದ್ದಳು. ಬಹಳಷ್ಟು ಮಹಿಳೆಯರಿಗೆ ಮನೆಗೆ ಹೋದ ನಂತರ ಸರ ಕಳೆದುಕೊಂಡಿರುವುದು ಗೊತ್ತಾಗುತ್ತಿತ್ತು. ಕಳವು ಮಾಡಿದ ಎಲ್ಲ ಆಭರಣಗಳನ್ನು ಮುತ್ತೂಟ್, ಮಣಪುರಂ ಹಾಗೂ ಫೆಡ್ ಬ್ಯಾಂಕ್ಗಳಲ್ಲಿ ಗಿರವಿ ಇಡುತ್ತಿದ್ದಳು. ಬಳಿಕ ಮತ್ತೆ ಒಂಟಿ ಮಹಿಳೆಯರಿಗೆ ಬಸ್ ನಿಲ್ದಾಣದಲ್ಲಿ ಕಾಯುತ್ತಾ ಕುಳಿತುಕೊಳ್ಳುತ್ತಿದ್ದಳು.
ಇದುವರೆಗೆ 12 ಪ್ರಕರಣಗಳು ಪತ್ತೆ
ಈಕೆ ಬ್ಯಾಗಿನಲ್ಲಿ ಯಾವಾಗಲೂ ನಿದ್ದೆ ಮಾತ್ರೆಗಳನ್ನು ಪುಡಿ ಮಾಡಿ ಡಬ್ಬಿಯಲ್ಲಿ ತುಂಬಿಕೊಂಡಿರುತ್ತಿದ್ದಳು. ಪಾನೀಯಕ್ಕೆ ಇದನ್ನು ಬೆರೆಸಿಕೊಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಲಷ್ಕರ್ ಪೊಲೀಸ್ ಠಾಣೆಯ 6, ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣೆಯ 3, ವಿಜಯ ನಗರ, ಮಂಡ್ಯ ಗ್ರಾಮಾಂತರ, ಮದ್ದೂರು ಠಾಣೆಯ ತಲಾ ಒಂದೊಂದು ಪ್ರಕರಣಗಳು ಸೇರಿದಂತೆ ಒಟ್ಟು 12 ಪ್ರಕರಣಗಳು ಪತ್ತೆಯಾಗಿವೆ.
ಮಧ್ಯಪ್ರದೇಶದ ಕಳ್ಳರ ಗ್ಯಾಂಗ್ ಅಂದರ್: ಬೆಳಕಿಗೆ ಬಂತು 28 ಮನೆಗಳ್ಳತನ ಪ್ರಕರಣ
ಸೆರೆ ಸಿಕ್ಕಿದ್ದು ಹೇಗೆ?
ಚಿನ್ನಾಭರಣ ಕಳೆದುಕೊಂಡ ಬಹಳಷ್ಟು ಮಂದಿ ಮಹಿಳೆಯರಿಗೆ ಈಕೆಯೇ ಆಭರಣ ಕಳವು ಮಾಡಿರುವುದು ಎಂದು ಗೊತ್ತಾಗುತ್ತಿರಲಿಲ್ಲ. ಕುತ್ತಿಗೆಯಿಂದ ಎಲ್ಲೋ ಜಾರಿ ಹೋಗಿರಬಹುದು ಎಂದೇ ಭಾವಿಸುತ್ತಿದ್ದರು. ಹೀಗಾಗಿ ಪೊಲೀಸರಿಗೆ ದೂರು ನೀಡುವ ಗೋಜಿಗೆ ಯಾರೂ ಹೋಗುತ್ತಿರಲಿಲ್ಲ.ಆದರೆ, ರೂಪಾನಗರದ 75 ವರ್ಷ ವಯಸ್ಸಿನ ಮಹಿಳೆಯೊಬ್ಬರು ಜ. 28ರಂದು ಲಷ್ಕರ್ ಠಾಣೆಗೆ ದೂರು ನೀಡಿದ್ದರು.
ಮಾಹಿತಿ ಕಲೆ ಹಾಕಿದ ಪೊಲೀಸರು
ದೂರು ದಾಖಲಿಸಿಕೊಂಡ ಪೊಲೀಸರು ಬಸ್ ನಿಲ್ದಾಣಗಳಲ್ಲಿ ಮಫ್ತಿಯಲ್ಲಿ ಸಿಬ್ಬಂದಿಯನ್ನು ಬಿಟ್ಟು ಅನುಮಾನಾಸ್ಪದ ಮಹಿಳೆಯರ ಮಾಹಿತಿ ಕಲೆ ಹಾಕಿದರು. ಸಿಸಿಟಿವಿ ಕ್ಯಾಮೆರಾ ಹಾಗೂ ಮೊಬೈಲ್ ಚಿತ್ರಗಳ ಮೂಲಕ ಅನುಮಾನಾಸ್ಪದ ಮಹಿಳೆಯರ ಚಿತ್ರವನ್ನು ದೂರು ನೀಡಿದ ಮಹಿಳೆಗೆ ತೋರಿಸಿ, ಖಚಿತಪಡಿಸಿಕೊಂಡು ಫೆ. 23ರಂದು ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.