ಮೈಸೂರು ಟಾಂಗಾವಾಲಗಳ ಮೊಗದಲ್ಲಿ ನಿರಾಸೆಯ ಕಾರ್ಮೋಡ
ಮೈಸೂರು, ಅಕ್ಟೋಬರ್ 21: ಪ್ರತಿ ವರ್ಷವೂ ದಸರಾದಲ್ಲಿ ಪೋಷಾಕು ತೊಟ್ಟು ಸಂಭ್ರಮದಿಂದ ಮೆರೆಯುತ್ತಿದ್ದ ಮೈಸೂರಿನ ಟಾಂಗಾವಾಲಗಳ ಮೊಗದಲ್ಲೀಗ ನಿರಾಸೆಯ ಕಾರ್ಮೋಡ ಕವಿದಿದೆ.
ಪಾರಂಪರಿಕ ನಗರಿಗೊಂದು ಮೆರಗು ತಂದುಕೊಡುವುದರೊಂದಿಗೆ ಶತಮಾನದ ಪಳೆಯುಳಿಕೆಯಾಗಿ ಉಳಿದಿರುವ ಟಾಂಗಾವಾಲಗಳ ಸದ್ಯದ ಬದುಕು ಮೂರಾಬಟ್ಟೆಯಾಗಿದೆ. ಮೈಸೂರಿನ ಸಂಚಾರಿ ವ್ಯವಸ್ಥೆಗಳಾಗಿದ್ದ ಟಾಂಗಾ ಗಾಡಿಗಳು ಈಗ ಕೇವಲ ಪ್ರವಾಸಿಗರನ್ನು ಕರೆದೊಯ್ದು ಅರಮನೆಗೆ ಸುತ್ತುಹೊಡೆಸಲಷ್ಟೆ ಸೀಮಿತವಾಗಿವೆ. ಹೀಗಾಗಿ ಪ್ರವಾಸಿಗರು ಬಂದರಷ್ಟೆ ಬದುಕು ಎನ್ನುವಂತಾಗಿದೆ. ಕೊರೊನಾದಂತಹ ಮಹಾಮಾರಿ ಎಲ್ಲರನ್ನೂ ಹಿಂಡಿ ಹಿಪ್ಪೆ ಮಾಡಿದೆ. ಅದರಲ್ಲೂ ಪ್ರವಾಸಿಗರನ್ನೇ ನಂಬಿದ್ದ ಟಾಂಗಾವಾಲಗಳು ಕಳೆದ ಮಾರ್ಚ್ನಿಂದ ಇಲ್ಲಿ ತನಕ ಸಂಕಷ್ಟದಲ್ಲಿಯೇ ಜೀವನ ಕಳೆಯುತ್ತಿದ್ದಾರೆ.
ಪ್ರವಾಸಿಗರಿಲ್ಲದೆ ಟಾಂಗಾವಾಲಗಳಿಗೆ ಸಂಕಷ್ಟ
ಎಲ್ಲವೂ ಸರಿಯಿದ್ದಿದ್ದರೆ ಬೇಸಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದರು, ಆದರೆ ಲಾಕ್ ಡೌನ್ ನಿಂದಾಗಿ ಬರಲಿಲ್ಲ. ಆ ನಂತರ ಲಾಕ್ ಡೌನ್ ಸಡಿಲಗೊಳಿಸಿ ಪ್ರವಾಸಿಗರು ಮೈಸೂರಿಗೆ ಸ್ವಲ್ಪ ಮಟ್ಟಿಗೆ ಬಂದರೂ ಅವರು ಟಾಂಗಾದಲ್ಲಿ ಸಂಚರಿಸುವ ಆಸಕ್ತಿ ತೋರುತ್ತಿಲ್ಲ. ಇನ್ನು ಸರಳ ದಸರಾ ಆಚರಣೆಯ ಹಿನ್ನಲೆಯಲ್ಲಿ ಒಂದಷ್ಟು ಪ್ರವಾಸಿಗರು ಮೈಸೂರು ನಗರಕ್ಕೆ ಆಗಮಿಸಿದರೂ, ಅವರು ಹೊರಗಿನ ಪ್ರವಾಸಿ ತಾಣಕ್ಕೆ ಭೇಟಿ ನೀಡುತ್ತಾರೆಯಾದರೂ ಟಾಂಗಾದಲ್ಲಿ ಸಂಚರಿಸುತ್ತಿಲ್ಲ. ಇದರಿಂದಾಗಿ ಟಾಂಗಾವಾಲಗಳು ಸಂಕಷ್ಟದಲ್ಲಿ ದಿನ ಕಳೆಯುವಂತಾಗಿದೆ.
ಮೈಸೂರು ದಸರಾ: ಮನೆ-ಮನೆಗಳಲ್ಲಿ ಗೊಂಬೆ ಹಬ್ಬದ ಸಡಗರ
ಟಾಂಗಾಗಾಡಿಗಳತ್ತ ನಿರಾಸಕ್ತಿ
ಹಾಗೆ ನೋಡಿದರೆ ಟಾಂಗಾ ಗಾಡಿಗಳು ಹಿಂದಿನ ಕಾಲದಲ್ಲಿ ಮೈಸೂರು ನಗರದ ಸಂಚಾರಿ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿತ್ತು. ಜನ ಸಂಚಾರಕ್ಕೆ ಮಾತ್ರವಲ್ಲದೆ ಸರಕು ಸಾಮಗ್ರಿ ಸಾಗಿಸಲು ಕೂಡ ಇವುಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ನಂತರದ ದಿನಗಳಲ್ಲಿ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದ್ದಂತೆಯೇ ವಾಹನಗಳು ನಗರಕ್ಕಿಳಿಯುತ್ತಿದ್ದಂತೆಯೇ ಟಾಂಗಾಗಳ ಅಗತ್ಯತೆ ನಿಧಾನವಾಗಿ ಕಡಿಮೆಯಾಗುತ್ತಾ ಹೋಯಿತು. ಜನ ಟಾಂಗಾ ಗಾಡಿಗಳನ್ನು ಬಿಟ್ಟು ವಾಹನದಲ್ಲಿ ಸಂಚರಿಸಲು ಆರಂಭಿಸಿದರು. ಯಾವಾಗ ತಮ್ಮ ಬದುಕನ್ನು ಟಾಂಗಾ ಓಡಿಸಿ ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂಬುದು ಗೊತ್ತಾಯಿತೋ ಬಹಳಷ್ಟು ಮಂದಿ ಬೇರೆ ಉದ್ಯೋಗವನ್ನು ಕಂಡುಕೊಂಡರು. ಆದರೆ ಕೆಲವರು ಅದರಲ್ಲೇ ಮುಂದುವರೆದರು. ಆದರೆ ಈಗ ಅವರ ಬದುಕು ಸಂಕಷ್ಟದಲ್ಲಿದೆ.
ಟಾಂಗಾದಲ್ಲಿ ಸಂಚರಿಸುವುದೇ ಪ್ರತಿಷ್ಠೆಯಾಗಿತ್ತು
ಮೈಸೂರಿನ ಟಾಂಗಾ ಗಾಡಿಗಳ ಕುರಿತು ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ನಮಗೆ ಒಂದಷ್ಟು ಮಾಹಿತಿಗಳು ಲಭ್ಯವಾಗುತ್ತವೆ. ಮೈಸೂರಿನಲ್ಲಿ ವಾಹನ ಸೌಲಭ್ಯವಿಲ್ಲದ ದಿನಗಳಲ್ಲಿ ಎತ್ತಿನ ಬಂಡಿಯಲ್ಲಿಯೇ ಜನರು ಸಾಗುತ್ತಿದ್ದರಾದರೂ, ಟಾಂಗಾ ಗಾಡಿಗಳು ಬಂದಿದ್ದು ಮಹಾರಾಜರ ಕಾಲದಲ್ಲಿ. ಅಂದರೆ 1897 ಎಂದು ಹೇಳಲಾಗಿದೆ. ಅಂದಿನ ದಿನಗಳಲ್ಲಿ ಟಾಂಗಾ ಗಾಡಿಗಳು ಹೆಚ್ಚಿನ ಜನಪ್ರಿಯತೆ ಪಡೆದಿದ್ದವಲ್ಲದೆ, ಟಾಂಗಾ ಗಾಡಿಗಳಲ್ಲಿ ತೆರಳುವುದೆಂದರೆ ಅದೊಂದು ಪ್ರತಿಷ್ಠೆಯ ಸಂಕೇತವಾಗಿತ್ತು. ಇದರ ಉಸ್ತುವಾರಿಯನ್ನು ಮುನ್ಸಿಪಾಲಿಟಿ ವಹಿಸಿಕೊಂಡಿತ್ತು. ದೂರದ ಊರುಗಳಿಗೆ ತೆರಳುವವರು ಮುನ್ಸಿಪಾಲಿಟಿಗೆ ಬಾಡಿಗೆ ನೀಡಿ ಟಾಂಗಾ ಗಾಡಿಯಲ್ಲಿ ಹೋಗಬೇಕಾಗಿತ್ತು.
ಕಬಿನಿ ಜಲಾಶಯದಲ್ಲಿ ಮುಳುಗಿದ ಊರು ಯಾವುದು?
ಮೈಸೂರಿನ ಮಹಾರಾಜರ ಷಾ ಪಂಸದ್ ಟಾಂಗಾ
ಆಗ ಮೈಸೂರು ನಗರದಲ್ಲಿ ಸುಮಾರು ಆರು ನೂರಕ್ಕೂ ಹೆಚ್ಚಿನ ಟಾಂಗಾ ಗಾಡಿಗಳು ಓಡಾಡುತ್ತಿದ್ದವಲ್ಲದೆ ಕೊಳ್ಳೇಗಾಲ, ಚಾಮರಾಜನಗರ, ನಂಜನಗೂಡು, ಕೆ.ಆರ್ ನಗರಗಳಲ್ಲಿಯೂ ಜನಪ್ರಿಯತೆಯನ್ನು ಗಳಿಸಿದ್ದವು. ಮುಂಬಯಿಯ ವಿಕ್ಟೋರಿಯ, ಮೈಸೂರಿನ ಮಹಾರಾಜರ ಷಾ ಪಂಸದ್ ಟಾಂಗಾಗಳು ಖ್ಯಾತಿ ಪಡೆದಿದ್ದವು. ಈ ಟಾಂಗಾ ಗಾಡಿಗಳಲ್ಲಿ ದೀಪದ ವ್ಯವಸ್ಥೆಯೂ ಇತ್ತು ಎನ್ನಲಾಗಿದೆ. ಇನ್ನು ದಸರಾ ಸಂದರ್ಭದಲ್ಲಿ ಟಾಂಗಾ ಗಾಡಿಗಳಿಗೂ ಗೌರವ ಸ್ಥಾನ ನೀಡಲಾಗುತ್ತಿತ್ತಲ್ಲದೆ, ದಸರಾ ಮೆರವಣಿಗೆಯಲ್ಲಿಯೂ ತಮ್ಮದೇ ಪೋಷಾಕು ಧರಿಸಿ ಮುನ್ನಡೆಯುತ್ತಿದ್ದರು.
ಟಾಂಗಾಗಳಿಗೆ ಅಡ್ಡಗಾಲಾದ ವಾಹನಗಳು
ಆಧುನಿಕ ವಾಹನಗಳ ಭರಾಟೆ ಟಾಂಗಾ ಗಾಡಿಗಳ ವೈಭವಯುತ ಓಡಾಟಕ್ಕೆ ಅಡ್ಡಗಾಲಾಗಿದೆ. ಪಾರಂಪರಿಕ ಪಳೆಯುಳಿಕೆಯಾಗಿ ಉಳಿದಿರುವ ಕೆಲವು ಟಾಂಗಾ ಗಾಡಿಗಳನ್ನು ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ. ಸಂಪಾದನೆ ಆಗಲಿ ಆಗದಿರಲಿ ತಾವು ಸಾಕಿರುವ ಕುದುರೆಗೆ ಹಸಿ ಹುಲ್ಲು, ಹುರುಳಿ, ಬೂಸ ಹೀಗೆ ಐವತ್ತರಿಂದ ನೂರು ರೂಪಾಯಿ ಖರ್ಚು ಮಾಡಲೇ ಬೇಕಾಗಿದೆ. ಕೆಲವರು ತಾತ ಮುತ್ತಾತ ಕಾಲದಿಂದಲೂ ಟಾಂಗಾ ಓಡಿಸಿಯೇ ಬದುಕು ಸಾಗಿಸಿಕೊಂಡು ಬಂದಿದ್ದಾರೆ. ಹಾಗಾಗಿ ಇದನ್ನು ಬಿಟ್ಟು ಬೇರೆ ಉದ್ಯೋಗಕ್ಕೆ ಹೊಂದಿಕೊಳ್ಳುವುದು ಅವರಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಷ್ಟನೋ ಸುಖನೋ ಅದನ್ನೇ ಮಾಡುತ್ತಾರೆ.
ಟಾಂಗಾ ಗಾಡಿ ಎಲ್ಲೆಂದರಲ್ಲಿ ನಿಲ್ಲಿಸುವಂತಿಲ್ಲ!
ಅರಮನೆ ಬಳಿಯ ಆಂಜನೇಯ ದೇವಸ್ಥಾನ, ಮೃಗಾಲಯ ಮುಂತಾದ ಕಡೆ ಗಾಡಿಗಳನ್ನು ನಿಲ್ಲಿಸಿಕೊಂಡು ಪ್ರವಾಸಿಗರಿಗಾಗಿ ಕಾಯುತ್ತಾರೆ. ಪ್ರವಾಸಿಗರು ಆಸಕ್ತಿ ತೋರಿ ಟಾಂಗಾ ಗಾಡಿಯನ್ನೇರಿದರೆ ಮಾತ್ರ ಹೊಟ್ಟೆಗೆ ಕೂಳು ಸಿಗುತ್ತದೆ ಇಲ್ಲವೆಂದರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಎಂಬ ಸ್ಥಿತಿ ಇವರದ್ದಾಗಿದೆ. ಇನ್ನು ಮೈಸೂರು ನಗರದಲ್ಲಿ ಟಾಂಗಾ ಗಾಡಿಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವಂತಿಲ್ಲ. ಅರಮನೆಯ ಆಂಜನೇಯ ದೇವಾಲಯದ ಬಳಿ, ಅಗ್ರಹಾರ, ಮೃಗಾಲಯ ಬಳಿ, ಹೀಗೆ ನಿಗದಿತ ಸ್ಥಳಗಳನ್ನು ಹೊರತುಪಡಿಸಿದರೆ, ಪ್ರವಾಸಿ ತಾಣಗಳ ಎದುರು ನಿಲ್ಲಿಸಲು ಅವಕಾಶವಿಲ್ಲ. ಇತ್ತೀಚಿಗೆ ಬಂಬೂಬಜಾರ್ ಹಾಗೂ ಕಲಾಮಂದಿರ ಬಳಿ ಪ್ರತ್ಯೇಕ ಟಾಂಗಾ ನಿಲ್ದಾಣ ಮಾಡಲಾಗಿದೆ ಅದು ಪ್ರಯೋಜನಕ್ಕೆ ಬಂದಂತೆ ಕಾಣುತ್ತಿಲ್ಲ.
ಈ ಬಾರಿ ಖುಷಿ ತರದ ದಸರಾ
ವರ್ಷ ಪೂರ್ತಿ ಸಂಕಷ್ಟದಲ್ಲಿಯೇ ದಿನತಳ್ಳುವ ಟಾಂಗಾವಾಲಗಳು ಪ್ರತಿ ವರ್ಷವೂ ದಸರಾ ಬರುತ್ತಿದ್ದಂತೆಯೇ ಖುಷಿಯಾಗುತ್ತಿದ್ದರು. ಕಾರಣ ದೇಶ-ವಿದೇಶಗಳಿಂದ ಬರುವ ಪ್ರವಾಸಿಗರು ಇಷ್ಟಪಟ್ಟು ಟಾಂಗಾಗಾಡಿಗಳಲ್ಲಿ ಸಂಚರಿಸುತ್ತಿದ್ದರು. ಇದರಿಂದ ಒಂದಷ್ಟು ಹಣ ಸಂಪಾದನೆಯಾಗುತ್ತಿತ್ತು. ಆದರೆ ಈ ಬಾರಿ ಅದೆಲ್ಲವೂ ಭ್ರಮೆಯಾಗಿದೆ.