ಮುದುಡಿದ ತಂಬಾಕು ಚಿಗುರಿತು... ರೈತನ ಮೊಗದಲ್ಲಿ ಮಂದಹಾಸ ಮಿನುಗಿತು..
ಮೈಸೂರು, ಜೂನ್ 20: ಕೀಟನಾಶಕ ಸಿಂಪಡಿಸುವ ಬದಲು ಕಳೆನಾಶಕ ಸಿಂಪಡಿಸಿದ ಪರಿಣಾಮ ಹುಲುಸಾಗಿ ಬೆಳೆದಿದ್ದ ತಂಬಾಕಿನ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಇಡೀ ತಂಬಾಕು ಬೆಳೆಯೇ ನಾಶವಾಗಿ ಹೋಯಿತು ಎಂದು ಬೆಳೆಗಾರ ಕೈ ಚೆಲ್ಲಿ ಕುಳಿತಿದ್ದ. ಆದರೆ ಐಟಿಸಿ ಕಂಪನಿಯ ಅಧಿಕಾರಿಗಳ ಸಲಹೆಯಿಂದ ಮತ್ತೆ ತಂಬಾಕು ಚಿಗುರಿ ಬೆಳೆಗಾರನ ಬದುಕಿಗೆ ಆಸರೆಯಾಗಿದೆ.
ಕೆಲವು ದಿನಗಳ ಹಿಂದೆ ಹುಣಸೂರು ತಾಲ್ಲೂಕಿನ ಗಾವಡಗೆರೆ ಹೋಬಳಿಯ ಶಿರೇನಹಳ್ಳಿ ಗ್ರಾಮದ ರೈತ ಕುಮಾರ ಎಂಬುವರ ಮಕ್ಕಳು ತಂಬಾಕಿಗೆ ಕೀಟ ತಗುಲಿದ್ದರಿಂದ ಕೀಟನಾಶಕ ಸಿಂಪಡಣೆ ಮಾಡುವ ವೇಳೆ ಅದರೊಂದಿಗೆ ಕಳೆನಾಶಕವನ್ನು ಸೇರಿಸಿ ಸಿಂಪಡಿಸಿದ್ದರು. ಹೀಗಾಗಿ ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ತಂಬಾಕು ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಇನ್ನೇನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ ನಾಶವಾಗಿ ಹೋಯಿತು ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮಕ್ಕಳ ಎಡವಟ್ಟಿಗೆ ಲಕ್ಷಾಂತರ ರೂಪಾಯಿಯ ತಂಬಾಕು ಬೆಳೆ ನಾಶ
ತಂಬಾಕು ಕೃಷಿ ಮಾಡುವ ಸಲುವಾಗಿಯೇ ಬ್ಯಾಂಕ್ ಸೇರಿದಂತೆ ಹಲವು ಮೂಲಗಳಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಹೀಗಾಗಿ ಮುಂದಿನ ಜೀವನ ಹೇಗೆ ಎಂದು ತಲೆ ಮೇಲೆ ಕೈಹೊತ್ತು ಕೂತಿದ್ದರು.
ಈ ವಿಚಾರ ಐಟಿಸಿ ಕಂಪನಿಯ ಅಧಿಕಾರಿಗಳ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಸ್ಥಳಕ್ಕೆ ಆಗಮಿಸಿ ಕಳೆನಾಶಕ ಸಿಂಪಡಣೆಯಿಂದ ಸುಟ್ಟುಹೋಗಿದ್ದ ತಂಬಾಕು ಬೆಳೆಯನ್ನು ವೀಕ್ಷಿಸಿದ ಐಟಿಸಿ ಕಂಪನಿಯ ಮಾರುಕಟ್ಟೆ ವ್ಯವಸ್ಥಾಪಕ ಪೂರ್ಣೇಶ್, ಸಹಾಯಕ ವ್ಯವಸ್ಥಾಪಕಿ ಸುಮಾ, ಕ್ಷೇತ್ರ ವಿಸ್ತರಣಾಧಿಕಾರಿ ಡಿ.ಪಿ.ಮಂಜು, ಸಹಾಯಕ ಅಧಿಕಾರಿ ಸೂರಣ್ಣ ಅವರು ಕಳೆನಾಶಕದಿಂದ ತಂಬಾಕು ಗಿಡಗಳನ್ನು ಪಾರು ಮಾಡಲು 10 ಲೀಟರ್ ನೀರಿಗೆ 150 ಗ್ರಾಂ ಸಕ್ಕರೆ ಮಿಶ್ರಣ ಮಾಡಿ ಮತ್ತೊಂದು ದಿನ 10 ಲೀಟರ್ ನೀರಿಗೆ ಅರ್ಧ ಲೀಟರ್ ಹಸುವಿನ ಹಾಲನ್ನು ಸಿಂಪರಣೆ ಮಾಡಿ ನಿಮ್ಮ ಬೆಳೆ ಸುಟ್ಟು ಹೋಗದೆ ಚಿಗುರಿ ಚೇತರಿಕೆ ಕಾಣುತ್ತದೆ. ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ಶೇ 50ರಷ್ಟು ತಂಬಾಕು ಬೆಳೆ ಕೈ ಹಿಡಿಯುತ್ತದೆ ಎಂದು ಸಲಹೆ ನೀಡಿದ್ದರು.
ಖುಷಿಯಿಂದ ಜಮೀನಿನತ್ತ ತೆರಳುತ್ತಿರುವ ತಂಬಾಕು ಬೆಳೆಗಾರರು, ಕಾರಣವೇನು?
ಅದರಂತೆ ರೈತ ಕುಮಾರ್ ಅವರು ತಂಬಾಕು ಗಿಡಗಳಿಗೆ ತುಂತುರು ನೀರು ಹರಿಸುವುದರೊಂದಿಗೆ ಗಿಡಗಳಿಗೆ ಅಧಿಕಾರಿಗಳು ಹೇಳಿದಂತೆ ಸಕ್ಕರೆ ಹಾಗೂ ಹಾಲನ್ನು ಸಿಂಪಡಣೆ ಮಾಡಿದ್ದರು. ಈ ನಡುವೆ ಅಧಿಕಾರಿಗಳು ಎರಡು ಮೂರು ಬಾರಿ ಜಮೀನಿಗೆ ಭೇಟಿ ನೀಡುವುದರೊಂದಿಗೆ ಅಗತ್ಯ ಸಲಹೆ ನೀಡಿದ್ದರಲ್ಲದೆ, ಧೈರ್ಯವನ್ನು ತುಂಬಿದ್ದರು. ಇದೆಲ್ಲದರ ಪರಿಣಾಮ ಇವತ್ತು ಬಾಡಿದ ರೈತನ ಮುಖದಲ್ಲಿ ಮಂದಹಾಸ ಮಿನುಗುವಂತಾಗಿದೆ.