ಹಳೆ ಮೈಸೂರಿನ ಒಬ್ಬರಿಗೂ ದಕ್ಕಿಲ್ಲ ಸಚಿವ ಸ್ಥಾನ; ಕಾರಣವೇನು?
ಮೈಸೂರು, ಆಗಸ್ಟ್ 20: ಮೈಸೂರು, ಚಾಮರಾಜನಗರ, ಮಡಿಕೇರಿ, ಹಾಸನ ಯಾವ ಜಿಲ್ಲೆಗಳಿಗೂ ಸಿಎಂ ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಲಭಿಸಿಲ್ಲ.
ಕೈ ತಪ್ಪಿದ ಸ್ಥಾನ : ಸಚಿವ ಯಾರು, ಏನು ಹೇಳಿದರು?
ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯಿಂದ ಎಂಟು ಶಾಸಕರು ಇದ್ದರೂ ಒಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಕೊನೆಯ ಕ್ಷಣದವರೆಗೂ ಶಾಸಕ ರಾಮದಾಸ್ ಅವರಿಗೆ ಮಂತ್ರಿ ಸ್ಥಾನ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ ಅವರಿಗೂ ಸ್ಥಾನ ಲಭಿಸಿಲ್ಲ. ಇದಕ್ಕೆ ಕಾರಣವೇನು ಎಂಬುದನ್ನು ಪಟ್ಟಿ ಮಾಡಲಾಗಿದೆ:
ಆರೋಪದಿಂದ ಕೈ ತಪ್ಪಿತೇ ಸಚಿವ ಸ್ಥಾನ ?
ರಾಮ್ ದಾಸ್ ಅವರಿಗೆ ಈ ಹಿಂದೆ ಮೈಸೂರಿನ ಸಚಿವ ಸ್ಥಾನ ಲಭಿಸಿತ್ತು. ಆದರೆ ಈ ಬಾರಿ ಕೈ ತಪ್ಪಲು ಅನಂತಕುಮಾರ್ ನಿಧನ, ವೈಯಕ್ತಿಕ ಕೇಸ್ ಗಳು, ವಿಶ್ವನಾಥ್ ಎಫೆಕ್ಟ್, ಆರ್ ಎಸ್ಎಸ್ ನಲ್ಲಿ ರಾಮದಾಸ್ ಪರ ಗಟ್ಟಿಯಾಗಿ ಮಾತನಾಡುವವರು ಇಲ್ಲದ ಕಾರಣ ಮಂತ್ರಿ ಸ್ಥಾನ ತಪ್ಪಿದೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ. ಕೊಡಗಿನ ಅಪ್ಪಚ್ಚು ರಂಜನ್ ಅಥವಾ ಬೋಪಯ್ಯ ಇಬ್ಬರ ಪೈಕಿ ಒಬ್ಬರಿಗೆ ಮಂತ್ರಿ ಸ್ಥಾನ ಸಿಗಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಅದೂ ಸಾಧ್ಯವಾಗಲಿಲ್ಲ.
ಯಡಿಯೂರಪ್ಪ ಆಂಡ್ ಟೀಂ: ಸಂಪುಟ ವಿಸ್ತರಣೆ ಸಂತಸದ ಚಿತ್ರಗಳು
ಸುರೇಶ್ ಕುಮಾರ್ ಗೆ ಬ್ರಾಹ್ಮಣ ಕೋಟಾದಡಿ ಸ್ಥಾನ
ಈ ಬಾರಿ ಬ್ರಾಹ್ಮಣ ಕೋಟಾದಡಿ ರಾಮ್ ದಾಸ್ ಗೆ ಸಚಿವ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಸುರೇಶ್ ಕುಮಾರ್ ಗೆ ಸಚಿವ ಸಂಪುಟದಲ್ಲಿ ಸೇರ್ಪಡೆಗೊಳ್ಳುವ ಅವಕಾಶ ಲಭಿಸಿದೆ. ಮುಂದಿನ ಸಚಿವ ಸಂಪುಟದ ವೇಳೆಯಲ್ಲೂ ರಾಮ್ ದಾಸ್ ಗೆ ಮತ್ತೊಮ್ಮೆ ಸಚಿವ ಗಿರಿ ದೊರಕುವುದು ಅನುಮಾನ ಎಂಬುದು ತಿಳಿದುಬಂದಿದೆ.
ಎರಡು ಜಿಲ್ಲೆಗಳಿಗೆ ಓರ್ವ ಸಚಿವರ ಆಯ್ಕೆ ಸಾಧ್ಯತೆ
ಮೈಸೂರು ಹಾಗೂ ಚಾಮರಾಜನಗರದಲ್ಲಿ ಈಗಾಗಲೇ ವಿ.ಸೋಮಣ್ಣನವರು ತಮ್ಮದೇ ಹಿಡಿತವನ್ನು ಹೊಂದಿದ್ದಾರೆ. ಇದರೊಟ್ಟಿಗೆ ಸುರೇಶ್ ಕುಮಾರ್ ಸಹ ಕ್ಷೇತ್ರದಲ್ಲಿ ತಮ್ಮದೇ ವರ್ಚಸ್ಸನ್ನು ಹೊಂದಿದ್ದಾರೆ. ಇವರಲ್ಲಿ ಒಬ್ಬರು ಮೈಸೂರು ಭಾಗದ ಸಚಿವರಾಗಿ ಆಯ್ಕೆಯಾಗಲಿದ್ದಾರೆ ಎನ್ನುತ್ತದೆ ಬಿಜೆಪಿ ಮೂಲಗಳು. ಯಡಿಯೂರಪ್ಪನವರು ಯಾರಿಗೆ ಗ್ರೀನ್ ಸಿಗ್ನಲ್ ನೀಡಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ. ಎರಡೂ ಜಿಲ್ಲೆಗೆ ಓರ್ವ ಸಚಿವರನ್ನು ಆಯ್ಕೆ ಮಾಡಬಹುದು.
ಉಸ್ತುವಾರಿ ಸಚಿವರ ಆಯ್ಕೆಯಲ್ಲಿ ವಿಳಂಬ
ದಸರೆಗೆ ಉಳಿದಿರುವುದು ಬೆರಳೆಣಿಕೆ ದಿನಗಳು. ಕಳೆದ ತಿಂಗಳಷ್ಟೇ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ದಸರೆಯ ಉನ್ನತಮಟ್ಟದ ಸಭೆ ನಡೆಸಲು ವಿಳಂಬ ಮಾಡಿತ್ತು. ಹಾಗೆಯೇ ಉಸ್ತುವಾರಿ ಸಚಿವರ ಆಯ್ಕೆಯಲ್ಲೂ ನಿಧಾನಗತಿ ತೋರಿತ್ತು. ಹೀಗಾಗಿ ದಸರೆಯ ಟೆಂಡರ್ ಗಳು ಇನ್ನೂ ನಡೆಯುತ್ತಿಲ್ಲ. ಕೂಡಲೇ ಮೈಸೂರು ಜಿಲ್ಲೆಗೆ ಉಸ್ತುವಾರಿ ಸಚಿವರ ಹೆಸರು ಅಂತಿಮಗೊಂಡರೆ ಕಾಮಗಾರಿ ಚುರುಕು ಪಡೆಯಬಹುದೆಂದು ಅಧಿಕಾರಿಗಳು ಕಾಯತೊಡಗಿದ್ದಾರೆ.