ಸಾಂಸ್ಕೃತಿಕ ನಗರಿ ಮೈಸೂರಿಗೆ ಸ್ವಚ್ಛನಗರಿ ಪಟ್ಟ ದಕ್ಕಲು ಕ್ಷಣಗಣನೆ
ಮೈಸೂರು, ಮಾರ್ಚ್ 6: ಸ್ವಚ್ಛ ಸರ್ವೇಕ್ಷಣೆ - 2019 ಪ್ರಶಸ್ತಿ ಪ್ರಧಾನ ಸಮಾರಂಭ ಇಂದು ನವದೆಹಲಿಯಲ್ಲಿ ಮಧ್ಯಾಹ್ನ 12 ಕ್ಕೆ ನಡೆಯಲಿದೆ. ಇತ್ತ ಪ್ರಶಸ್ತಿಗೆ ಸಂಬಂಧಿಸಿದಂತೆ ಸ್ವಚ್ಛ ಸರ್ವೇಕ್ಷಣ ಸಂಸ್ಥೆಯಿಂದ ಮೈಸೂರು ಮಹಾನಗರ ಪಾಲಿಕೆಗೆ ಆಹ್ವಾನ ಬಂದ ಹಿನ್ನೆಲೆ ಮೇಯರ್ ಪುಷ್ಪಲತಾ ಜಗನ್ನಾಥ್ ನೇತೃತ್ವದ ಐದು ಜನರ ತಂಡ ನವದೆಹಲಿಗೆ ಪ್ರಯಾಣ ಬೆಳೆಸಿದೆ.
ಸ್ವಚ್ಛ ಸರ್ವೇಕ್ಷಣ್ 2019: ಮೈಸೂರಿಗೆ ಸಿಗಲಿದೆಯಾ ಪ್ರಥಮ ಸ್ಥಾನ?
ಸ್ವಚ್ಛ ಸರ್ವೇಕ್ಷಣ ಫಲಿತಾಂಶ ಇಂದು ಪ್ರಕಟವಾಗಲಿದೆ. ಇದರಲ್ಲಿ ಮೈಸೂರು ಮಹಾನಗರ ಪಾಲಿಕೆಯೂ ನಾಮನಿರ್ದೇಶನಗೊಂಡಿದೆ. ಈ ಹಿನ್ನೆಲೆಯಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್ ನೇತೃತ್ವದಲ್ಲಿ ಉಪ ಮೇಯರ್ ಮಹಮ್ಮದ್ ಶಫಿ, ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ , ಹಿಂದಿನ ಆಯುಕ್ತ ಜಗದೀಶ್ ಮತ್ತು ಆರೋಗ್ಯಾಧಿಕಾರಿ ಡಾ. ನಾಗರಾಜ್ ನಿನ್ನೆ ಮಂಗಳವಾರ (ಮಾರ್ಚ್ 5) ಬೆಂಗಳೂರಿನಿಂದ ವಿಮಾನದಲ್ಲಿ ನವದೆಹಲಿಗೆ ಪ್ರಯಾಣ ಬೆಳೆಸಿದರು.
ಇತ್ತ ಮೇಯರ್ ಪುಷ್ಪಲತಾ ಜಗನ್ನಾಥ್ ಮಾತನಾಡಿ, ಮೈಸೂರು ಮಹಾನಗರ ಪಾಲಿಕೆ ಮೊದಲ ಐದು ಸ್ಥಾನದಲ್ಲಿದ್ದು, ನಂಬರ್ ಒನ್ ಸ್ಥಾನವೇ ಸಿಗಲಿದೆ ಎಂಬ ವಿಶ್ವಾಸವಿದೆ. ಹೀಗಾಗಿ ಬಹಳ ಕುತೂಹಲದಿಂದಲೇ ಕಾಯುತ್ತಿದ್ದೇವೆ. ಮೈಸೂರು ನಗರಕ್ಕೆ ಪ್ರಶಸ್ತಿ ಸಿಗಲು ಮೈಸೂರಿನ ಪೂರ್ವ ಕಾರ್ಮಿಕ ಸಿಬ್ಬಂದಿ, ಅಧಿಕಾರಿಗಳು, ನಾಗರಿಕರು ಕಾರಣರಾಗಿದ್ದಾರೆ. ಇದಕ್ಕಾಗಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ ಎಂದು ತಿಳಿಸಿದರು.