ಇಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಸಿಗಲಿದೆಯಾ ಮಾನ್ಯತೆ ?
ಮೈಸೂರು, ಜುಲೈ 5 : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಲಕ್ಷಾಂತರ ವಿದ್ಯಾರ್ಥಿಗಳನ್ನು ಕಾಡುತ್ತಿರುವ ಅನಿಶ್ಚಿತತೆ ಹಾಗೂ ಕೆಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮುಕ್ತ ವಿವಿಯ ಮಾನ್ಯತೆ ಕುರಿತ ಊಹಾಪೋಹಗಳಿಗೆ ತೆರೆಬೀಳುವ ಸಂದರ್ಭ ಸನ್ನಿಹಿತವಾಗಿದೆ.
ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಕೆಲವು ಷರತ್ತುಗಳೊಂದಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಶೀಘ್ರದಲ್ಲೇ ಮಾನ್ಯತೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ.
ಕೆಎಸ್ಒಯುಗೆ ಮಾನ್ಯತೆ ನೀಡಲು ಒಪ್ಪಿಗೆ ನೀಡಿದ ಯುಜಿಸಿ
ಹೊಸದಿಲ್ಲಿಯಲ್ಲಿ ಇಂದು ನಡೆಯಲಿರುವ ಸಭೆಯಲ್ಲಿ ಯುಜಿಸಿಯ ಅಧಿಕಾರಿಗಳೊಂದಿಗೆ ವಿವಿ ಕುಲಪತಿ ಮತ್ತು ಅಧಿಕಾರಿಗಳು ವಿವಿ ಮಾನ್ಯತೆ ನವೀಕರಣ ವಿಚಾರವಾಗಿ ಚರ್ಚಿಸಲಿದ್ದಾರೆ. ಯುಜಿಸಿ ಕೇಳಿರುವ ಅಗತ್ಯ ದಾಖಲೆಗಳನ್ನೆಲ್ಲಾ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.
ವಿವಿಯ ಮಾನ್ಯತೆಯನ್ನು ರದ್ದುಗೊಳಿಸುವ ಮುನ್ನ ನಡೆದಿರುವ ವಿದ್ಯಮಾನಗಳ ಬಗೆಗೂ ಸಭೆಯಲ್ಲಿ ಚರ್ಚೆಯಾಗಲಿದೆ ಎನ್ನಲಾಗಿದೆ. ಈಗಾಗಲೇ ಮುಕ್ತ ವಿವಿ ಕುಲಪತಿ ಪೊ.ಡಿ.ಶಿವಲಿಂಗಯ್ಯ ಅವರು ದಿಲ್ಲಿ ತಲುಪಿದ್ದು, ಈ ಬಾರಿ ಮಾನ್ಯತೆ ದೊರಕಿಸಿಕೊಳ್ಳುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.
ನಾವು ಆನ್ ಲೈನ್ ನಲ್ಲಿ ಸಲ್ಲಿಸಿದ್ದ ದಾಖಲೆಗಳ ಮುದ್ರಿತ ಪ್ರತಿಗಳ 3 ಸೆಟ್ ಗಳನ್ನು ತರಲು ಹೇಳಿದ್ದರು. ಅದರೊಂದಿಗೆ ಸಭೆಗೆ ಸಿದ್ಧವಾಗಿದ್ದೇವೆ. ಜತೆಗೆ ಪಠ್ಯಗಳು, ನೋಟ್ಸ್ ಗಳನ್ನು ಸಲ್ಲಿಸುತ್ತಿದ್ದೇವೆ. ಯುಜಿಸಿಯವರು ಕೇಳುವುದಕ್ಕೆ, ನಾವು ಕೊಡುವುದಕ್ಕೆ ಇನ್ನಾವುದೇ ದಾಖಲೆ ಉಳಿದಿಲ್ಲ. ಖಂಡಿತಾ ಮಾನ್ಯತೆ ದೊರಕಿಯೇ ತೀರುತ್ತದೆ ಎಂದರು.
ದಿಲ್ಲಿಗೆ ತೆರಳುವ ಮುನ್ನ ಕುಲಪತಿಗಳು ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳೊಂದಿಗೂ ಚರ್ಚೆ ನಡೆಸಿದ್ದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಭಾರ ಕುಲಸಚಿವ ಖಾದರ್ ಪಾಷ, ಕುಲಪತಿಗಳ ಆಪ್ತ ಸಹಾಯಕ ರಾಜು ಮತ್ತು ಶೈಕ್ಷಣಿಕ ಡೀನ್ ಪೊ.ಜಗದೀಶ್ ಅವರು ಬುಧವಾರ ಕಡತಗಳೊಂದಿಗೆ ದಿಲ್ಲಿ ತಲುಪಿದ್ದು, ಸಭೆಯಲ್ಲಿ ಪಾಲ್ಗೊಳ್ಳುವರು.
ಬಳಿಕ ವಿವಿ ಅಧಿಕಾರಿಗಳ ತಂಡ ದೂರ ಶಿಕ್ಷಣ ಮಂಡಳಿ (ಡಿಇಸಿ) ಸದಸ್ಯರನ್ನು ಭೇಟಿ ಮಾಡಲಿದೆ. ಕರಾಮುವಿಗೆ ಮತ್ತೆ ಮಾನ್ಯತೆ ನೀಡುವ ವಿಷಯ ಇತ್ಯರ್ಥವಾದರೆ, ಆ ಕುರಿತ ಆದೇಶ ಒಂದೆರಡು ದಿನಗಳಲ್ಲೇ ಹೊರಬೀಳಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಗುರುವಾರದ ಸಭೆಯಲ್ಲಿ ಯುಜಿಸಿ ಅಧಿಕಾರಿಗಳು ವಿವಿಗೆ 10ನೇ ತರಗತಿಯ ನಂತರದ ಅಂಕಪಟ್ಟಿಗಳು ನಕಲಾಗದಂತೆ ಹಾಗೂ ಅದರ ಪರಿಶೀಲನೆಗೆ ಅನುಕೂಲವಾಗುವಂತೆ ಮಾಹಿತಿ ಕೋಶ ರೂಪಿಸುವ ನ್ಯಾಷನಲ್ ಅಕಾಡೆಮಿಕ್ ಡಿಪಾಸಟರಿ (ಎನ್ಎಡಿ) ಯ ನೆರವನ್ನು ಪಡೆಯಲು ಯುಜಿಸಿ ಮುಕ್ತ ವಿವಿಗೆ ಸೂಚಿಸಬಹುದು ಎನ್ನಲಾಗಿದೆ.