ರಾಜ್ಯಸಭೆಗೆ ದೇವೇಗೌಡರು ಅಭ್ಯರ್ಥಿಯಾದರೆ ಬಿಜೆಪಿ ಬೆಂಬಲಿಸುತ್ತಾ?
ಮೈಸೂರು, ಜೂನ್ 05: ರಾಜ್ಯ ಸಭಾ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ಸದ್ದಿಲ್ಲದೆ ಬೆಳವಣಿಗಳು ನಡೆಯಲಾರಂಭಿಸಿವೆ. ಮೂರು ಪಕ್ಷಗಳಿಗೂ ಇದು ಪ್ರತಿಷ್ಠೆಯ ಕಣವಾಗಿದ್ದು, ಅಭ್ಯರ್ಥಿಗಳು ಯಾರು ಎಂಬ ಬಹುತೇಕ ಸಂಶಯಗಳಿಗೆ ಶುಕ್ರವಾರ ನಡೆಯಲಿರುವ ಜೆಡಿಎಸ್ ಸಭೆ ಉತ್ತರ ಸಿಗುವ ಸಾಧ್ಯತೆಯಿದೆ.
ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಕಂದಾಯ ಸಚಿವ ಆರ್. ಅಶೋಕ್ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯುತ್ತಿರುವುದನ್ನು ಗಮನಿಸಿದರೆ ಒಂದು ಅಪರೂಪದ ಬೆಳವಣಿಗೆಯೊಂದು ಆಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ...
ಜೆಡಿಎಸ್ ಹೊಗಳಿ ಕೈ ತೆಗಳಿದ ಅಶೋಕ್
ರಾಮನಗರದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರ ಹೇಳಿಕೆಗಳನ್ನು ಗಮನಿಸಿದರೆ ಜೆಡಿಎಸ್ ಗೆ ಹತ್ತಿರವಾಗುವ ಮಾತನಾಡಿದ್ದಾರೆ. ಅದೇನೆಂದರೆ ಕಾಂಗ್ರೆಸ್ ಒಡೆದು ಆಳುವ ನೀತಿಯುಳ್ಳ ಪಕ್ಷ, ಮೋಸದ ಸಂಸ್ಕೃತಿ ಹೊಂದಿರುವ ಪಕ್ಷವೆಂದು ಜೆಡಿಎಸ್ ಗೆ ಈಗ ಗೊತ್ತಾಗಿದೆ. ಈ ಹಿಂದೆ ದೇವೇಗೌಡರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿದ್ದ ಕಾಂಗ್ರೆಸ್ ಪಕ್ಷವನ್ನು ನಂಬಿಕೊಂಡು ಹೋದರೆ ಕಷ್ಟ ಎಂಬುದು ಜೆಡಿಎಸ್ ನಾಯಕರಿಗೂ ಅರ್ಥವಾಗಿದೆ. ನಾವು ಜೆಡಿಎಸ್ ನೊಂದಿಗೆ ಒಂದು ಬಾರಿ ಸರ್ಕಾರ ರಚನೆ ಮಾಡಿದ್ದವು. ಅಭಿವೃದ್ಧಿ ಪರ ಕೆಲಸ ಮಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ಜೆಡಿಎಸ್ ಸಹಕಾರ ನೀಡಿದರೆ ಸ್ವೀಕರಿಸುತ್ತೇವೆ. ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಬಗ್ಗೆ ವಾರದಲ್ಲಿ ಸಭೆ ನಡೆಯಲಿದ್ದು, ಆ ನಂತರ ಪಕ್ಷದ ತೀರ್ಮಾನ ಘೋಷಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಎಚ್. ಡಿ. ದೇವೇಗೌಡರಿಂದ ಇಂದು ಮಹತ್ವದ ತೀರ್ಮಾನ ಪ್ರಕಟ!
ಗೌಡರನ್ನು ಬೆಂಬಲಿಸಿದರೆ ಬಿಜೆಪಿಗೆ ಲಾಭ!
ಈ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಳಸುಳಿ ಗೊತ್ತಾಗಿ ಬಿಡುತ್ತದೆ. ಒಂದು ವೇಳೆ ಜೆಡಿಎಸ್ ನಿಂದ ಎಚ್.ಡಿ.ದೇವೇಗೌಡರು ರಾಜ್ಯಸಭೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇ ಆದರೆ ಅವರನ್ನು ಬಿಜೆಪಿ ಬೆಂಬಲಿಸುವ ಸಾಧ್ಯತೆ ಹೆಚ್ಚಿದೆ. ದೇವೇಗೌಡರು ಮಾಜಿ ಪ್ರಧಾನಿ ಮಾತ್ರವಲ್ಲದೆ, ಒಕ್ಕಲಿಗರ ನಾಯಕರೂ ಹೌದು. ಹೀಗಿರುವಾಗ ದೇವೇಗೌಡರಿಗೆ ವಿರುದ್ಧವಾಗಿ ಬಿಜೆಪಿಯಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಒಕ್ಕಲಿಗರ ಕೆಂಗಣ್ಣಿಗೆ ಕಾರಣವಾಗಬಹುದು. ಬದಲಿಗೆ ದೇವೇಗೌಡರಿಗೆ ಬೆಂಬಲ ನೀಡಿದರೆ ಮುಂದಿನ ದಿನಗಳಲ್ಲಿ ಇದು ಬಿಜೆಪಿಗೆ ಲಾಭ ತಂದು ಕೊಟ್ಟರೂ ಕೊಡಬಹುದೆಂಬ ಲೆಕ್ಕಾಚಾರವೂ ಇಲ್ಲದಿಲ್ಲ.
ಇಂದು ಜೆಡಿಎಸ್ ನಿಂದ ಅಭ್ಯರ್ಥಿ ಆಯ್ಕೆ
ಜೂ.19ರಂದು ರಾಜ್ಯಸಭೆಗೆ ಚುನಾವಣೆ ನಡೆಯಲಿದೆ. ಈ ಸಂಬಂಧ ಬೆಂಗಳೂರಿನ ಜೆಪಿ ಭವನದಲ್ಲಿ ಶುಕ್ರವಾರ ಮಧ್ಯಾಹ್ನ 12.30ಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಹಲವು ಜೆಡಿಎಸ್ ನಾಯಕರು ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ ರಾಜ್ಯಸಭೆಗೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಎಚ್.ಡಿ.ದೇವೇಗೌಡರು ರಾಜ್ಯಸಭೆಗೆ ಸ್ಪರ್ಧಿಸಲಿ ಎಂಬ ಒತ್ತಾಯವನ್ನು ಜೆಡಿಎಸ್ ನಾಯಕರು ಮಾಡುತ್ತಿದ್ದಾರೆ. ಹೀಗಿರುವಾಗ ನಾಯಕರ ಒತ್ತಡಕ್ಕೆ ಮಣಿದು ದೇವೇಗೌಡರು ಕಣಕ್ಕಿಳಿಯುತ್ತಾರಾ ಎಂಬುದು ಸಭೆಯ ಬಳಿಕ ಗೊತ್ತಾಗಲಿದೆ. ಜೆಡಿಎಸ್ ನಿಂದ ಸ್ಪರ್ಧಿಸಲು ಕುಪೇಂದ್ರ ರೆಡ್ಡಿ ಉತ್ಸುಕರಾಗಿದ್ದಾರೆ. ಒಂದು ವೇಳೆ ದೇವೇಗೌಡರು ಸ್ಪರ್ಧಿಸುವ ಆಸಕ್ತಿ ತೋರಿದರೆ ಬಹುಶಃ ಕುಪೇಂದ್ರ ರೆಡ್ಡಿ ಸ್ಪರ್ಧೆಯಿಂದ ಹಿಂದೆ ಸರಿಯಬಹುದು.
Oneindia explainer; ರಾಜ್ಯಸಭೆ ಚುನಾವಣೆ ಹೇಗೆ ನಡೆಯುತ್ತದೆ?
ಜೆಡಿಎಸ್ ಗೆ ಬೇರೆ ಪಕ್ಷದ ಬೆಂಬಲ ಅಗತ್ಯ
ಜೆಡಿಎಸ್ ನಿಂದ ಸ್ಪರ್ಧಿಸುವ ಅಭ್ಯರ್ಥಿ ಗೆಲುವು ಪಡೆಯಬೇಕಾದರೆ ಕನಿಷ್ಠ 48 ಮತಗಳಗಳನ್ನು ಪಡೆಯಲೇಬೇಕಾಗುತ್ತದೆ. ಸದ್ಯ ಜೆಡಿಎಸ್ ನಲ್ಲಿ 34 ಜನ ಶಾಸಕರು ಇರುವುದರಿಂದ ಉಳಿದ 14 ಮತವನ್ನು ಪಡೆಯಬೇಕಾದರೆ ಇತರೆ ಪಕ್ಷಗಳ ಶಾಸಕರ ಬೆಂಬಲ ಅಗತ್ಯವಿದೆ. ಹೀಗಾಗಿ ಯಾವ ಪಕ್ಷದ ಶಾಸಕರ ಬೆಂಬಲವನ್ನು ಪಡೆಯುತ್ತಾರೆ ಎಂಬುದು ಪ್ರಶ್ನೆಯಾಗಿ ಉಳಿದಿದೆ. ಈ ನಡುವೆ ಬಿಜೆಪಿ ಹೈಕಮಾಂಡ್ ದೇವೇಗೌಡರು ಸ್ಪರ್ಧಿಸುವುದಾದರೆ ಅವರನ್ನು ಬೆಂಬಲಿಸುವಂತೆ ಸೂಚನೆ ನೀಡಿದೆ ಎಂಬ ಮಾತುಗಳು ಕೂಡ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಇದನ್ನು ತಳ್ಳಿ ಹಾಕುವಂತೆಯೂ ಇಲ್ಲ. ಏಕೆಂದರೆ ರಾಜ್ಯದಲ್ಲಿ ಒಕ್ಕಲಿಗರು ಬಹುಸಂಖ್ಯಾತರಾಗಿದ್ದು, ಅವರಿಗೆ ದೇವೇಗೌಡರ ಮೇಲೆ ಅಪಾರವಾದ ಒಲವಿದೆ. ಹೀಗಿರುವಾಗ ಬಿಜೆಪಿ ಅವರಿಗೆ ಬೆಂಬಲ ನೀಡದೆ ಹೋದರೆ ಮುಂದಿನ ದಿನಗಳಲ್ಲಿ ವಕ್ಕಲಿಗರ ಕೆಂಗಣ್ಣಿಗೂ ಬೀಳಬಹುದು.
ಒಕ್ಕಲಿಗರ ಕೆಂಗಣ್ಣಿಗೆ ಗುರಿಯಾಗುವ ಭಯ
ಈಗಾಗಲೇ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ದೇವೇಗೌಡರನ್ನು ಬಿಜೆಪಿ ಇಳಿವಯಸ್ಸಿನಲ್ಲಿ ಸೋಲು ಕಾಣುವಂತೆ ಮಾಡಿದೆ. ಮತ್ತೆ ಸೋಲಿಗೆ ಕಾರಣವಾದರೆ ಅದು ಬೇರೆ ರೀತಿಯ ಸಂದೇಶವನ್ನು ಒಕ್ಕಲಿಗ ಸಮುದಾಯಕ್ಕೆ ನೀಡಿದಂತೆ ಭಾಸವಾಗಬಹುದು ಎಂಬುದರ ಬಗ್ಗೆಯೂ ಬಿಜೆಪಿಯ ಹೈಕಮಾಂಡ್ ಯೋಚಿಸಿದ್ದರೂ ಯೋಚಿಸಿರಬಹುದು. ಇಂತಹ ಗೊಂದಲ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಮತ್ತು ಅದರ ಲಾಭವವನ್ನು ಪಡೆಯಲು ಬಿಜೆಪಿ ನಾಯಕರು ಹವಣಿಸುತ್ತಿದ್ದಾರಾ ಎಂಬ ಸಂಶಯಗಳು ಮೂಡಲಾರಂಭಿಸಿವೆ. ಎಲ್ಲದಕ್ಕೂ ಶುಕ್ರವಾರದ ಜೆಡಿಎಸ್ ಸಭೆಯೇ ಉತ್ತರ ಹೇಳಲಿದೆ.