ಮೈಸೂರಿಗೆ ಈಗ ಇದೂ ಪ್ಲಸ್; ವನ್ಯಜೀವಿಗಳ ಅಸ್ಥಿಪಂಜರ ಗ್ಯಾಲರಿ
ಮೈಸೂರು, ಜುಲೈ 20: ಪ್ರವಾಸಿಗರ ನೆಚ್ಚಿನ ತಾಣ ಮೈಸೂರಿನಲ್ಲಿ ಪ್ರಾಣಿ ಪಕ್ಷಿ ಸಂಕುಲದ ಜೀವ ವೈವಿಧ್ಯವನ್ನು, ವಿಸ್ಮಯಗಳ ಮಾದರಿಯನ್ನು ಪ್ರದರ್ಶಿಸಲು ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯ ಮುಂದಾಗಿದೆ. ಮಕ್ಕಳು ಹಾಗೂ ಜನಸಾಮಾನ್ಯರಲ್ಲಿ ಪರಿಸರ ಪ್ರಜ್ಞೆ, ಕಳಕಳಿ ಮೂಡಿಸುವ ಉದ್ದೇಶದಿಂದ ವನ್ಯಜೀವಿಗಳ ಅಸ್ಥಿಪಂಜರ ಗ್ಯಾಲರಿಯನ್ನು ಆರಂಭಿಸಿದೆ.
ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯ 1995ರಲ್ಲಿ ಆರಂಭವಾಯಿತು. ರಾಷ್ಟ್ರೀಯ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯದಿಂದ ಹೆಸರು ಪಡೆದ ಈ ಸಂಗ್ರಹಾಲಯ, ಭಾರತ ಸರ್ಕಾರದ ಪರಿಸರ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಎಚ್.ಡಿ ಕೋಟೆ ಬಳಿ ಅನುಮಾನಾಸ್ಪದವಾಗಿ ಆನೆ, ಚಿರತೆ ಸಾವು
ಕಾಡೆಮ್ಮೆಯ ಅಸ್ಥಿಪಂಜರವನ್ನು ಈ ಗ್ಯಾಲರಿಯಲ್ಲಿ ಮೊಟ್ಟ ಮೊದಲು ಜೋಡಣೆ ಮಾಡಲಾಗಿದೆ. ಈಗಾಗಲೇ ಇದು ಪ್ರದರ್ಶನಗೊಳ್ಳುತ್ತಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಮೆಸರ್ಸ್ ಬ್ಯಾಕ್ ಇಂಗೆನ್ ಅವರ ಸಂಗ್ರಹಾಲಯದಲ್ಲಿದ್ದ ಈ ಕಾಡೆಮ್ಮೆ ಅಸ್ಥಿಪಂಜರವನ್ನು ಮೈಸೂರಿಗೆ ತಂದು ಜೋಡಿಸಲಾಗಿದೆ. ಪ್ರತಿಷ್ಠಿತ ಬೆನ್ನಿ ಗನ್ ಬಂಗಲೆಯಲ್ಲಿದ್ದ ಇದು ದಾನವಾಗಿ ವಸ್ತು ಸಂಗ್ರಹಾಲಯಕ್ಕೆ ಬಂದಿತ್ತು. ಭುವನೇಶ್ವರದಲ್ಲಿನ ಸೆಂಚೂರಿಯನ್ ನ ಪ್ರಾಧ್ಯಾಪಕ ಶಿವ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಜೋಡಣೆ ಮಾಡಲಾಗಿದೆ.
ಪೈಲಟ್ ತಿಮಿಂಗಲದ ಎರಡು ಅಸ್ಥಿಪಂಜರ ಇಲ್ಲಿನ ಮತ್ತೊಂದು ಆಕರ್ಷಣೆ. ಇತ್ತೀಚೆಗೆ ಅಸುನೀಗಿದ ದ್ರೋಣ ಆನೆಯ ಅಸ್ಥಿಪಂಜರವನ್ನು ಇಲ್ಲಿ ಜೋಡಿಸುವ ಚಿಂತನೆಯಿದೆ. ಇದು ದಸರಾ ಮಹೋತ್ಸವದಲ್ಲಿ ಭಾಗವಹಿಸಿದ ಖ್ಯಾತಿ ಇರುವ ಹಿನ್ನೆಲೆಯಲ್ಲಿ ದ್ರೋಣನ ಅಸ್ಥಿಪಂಜರ ಆಕರ್ಷಣೆ ಎನಿಸಲಿದೆ.
ರಣಥಂಬೋರ್ ಕಾಡಿನ ರಾಣಿ 'ಆರೋ ಹೆಡ್'ಳ ರೋಚಕ ಕಥೆ
"ದ್ರೋಣನ ಅಸ್ಥಿಪಂಜರ ಇಡಲು ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕಾಗಿದೆ. ಜೊತೆಗೆ ಮೃತ ದೇಹ ಕೊಳೆಯಬೇಕಾಗಿರುವುದರಿಂದ ಸಾಕಷ್ಟು ದಿನ ಹಿಡಿಯಬಹುದು" ಎನ್ನುತ್ತಾರೆ ಮೈಸೂರು ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯದ ಮುಖ್ಯಸ್ಥ ಡಾ.ಜಿ.ಎನ್ ಇಂದ್ರೇಶ್. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಾಣಿಗಳ ಅಸ್ಥಿಪಂಜರವನ್ನು ತರುವ ಯೋಜನೆಯಿದೆ.