ಅರಣ್ಯ ಇಲಾಖೆ ವಾಹನದ ಮೇಲೆ ಒಂಟಿ ಸಲಗದ ದಾಳಿ: ಎದೆ ನಡುಗಿಸುವ ವಿಡಿಯೋ
Recommended Video
ಮೈಸೂರು, ಜನವರಿ 17: ಕಾಡಿನಿಂದ ಹೊರ ಬಂದಿದ್ದ ಒಂಟಿ ಸಲಗವನ್ನು ಮತ್ತೆ ಕಾಡಿಗೆ ಸೇರಿಸಲು ಹೋದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಒಂಟಿ ಸಲಗ ದಾಳಿ ಮಾಡಿರುವ ಘಟನೆ ಮೈಸೂರಿನ ವೀರನಹೊಸಹಳ್ಳಿ ಬಳಿ ಗುರುವಾರ ಸಂಜೆ ನಡೆದಿದೆ.
ಬುಧವಾರ ರಾತ್ರಿ ಕಾಡಿನಿಂದ ಒಂಟಿ ಸಲಗವೊಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವದ ರಸ್ತೆಯ ವೀರನಹೊಸಹಳ್ಳಿಯ ಕಾಡಂಚಿನ ಗ್ರಾಮದ ಬಳಿ ಕಾಣಿಸಿಕೊಂಡಿತ್ತು. ಈ ಆನೆಯನ್ನು ಅರಣ್ಯ ಇಲಾಖೆಯ ವಾಹನದಲ್ಲಿ ಕಾಡಿಗೆ ಮರಳಿ ಅಟ್ಟಲು ಪ್ರಯತ್ನಿಸಲಾಗಿತ್ತು.
ಕಾಡಿನ ಮಧ್ಯೆ ಹೆತ್ತ ತಾಯಿ ಎದುರಿನಲ್ಲೇ ಕಣ್ಣು ಮುಚ್ಚಿದ ಮರಿಯಾನೆ
ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಇದ್ದ ವಾಹನದ ಮೇಲೆ ಆನೆ ಹಠಾತ್ತನೆ ದಾಳಿ ನಡೆಸಿದೆ. ಸಲಗ ದಾಳಿಗೆ ಮುಂದಾಗುತ್ತಿದ್ದಂತೆಯೇ ಹೆದರಿದ ಸಿಬ್ಬಂದಿ ವಾಹನವನ್ನು ಸುಮಾರು ಅರ್ಧ ಕಿಲೋಮೀಟರ್ ದೂರವರೆಗೂ ಹಿಮ್ಮುಖವಾಗಿ ಓಡಿಸಿದ್ದಾರೆ. ಅಟ್ಟಿಸಿಕೊಂಡು ಬಂದ ಆನೆಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಜೋರಾಗಿ ಓಡಿಬಂದ ಆನೆ ವಾಹನದ ಮುಂಭಾಗಕ್ಕೆ ಗುದ್ದಿದೆ. ಪರಿಣಾಮ ವಾಹನದ ಮುಂಭಾಗ ಜಖಂಗೊಂಡು ಗ್ಲಾಸ್ ಪುಡಿ ಪುಡಿಯಾಗಿದೆ.
|
ಪ್ರಾಣಾಪಾಯದಿಂದ ಪಾರು
ಅದೃಷ್ಟವಶಾತ್ ವಾಹನದಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಯಾವುದೇ ಅಪಾಯವಾಗಿಲ್ಲ. ವಾಹನಕ್ಕೆ ಗುದ್ದಿದ ಆನೆಯನ್ನು ಕೊನೆಗೂ ಅರಣ್ಯ ಸಿಬ್ಬಂದಿ ಕಾಡಿಗೆ ಅಟ್ಟಲು ಯಶಸ್ವಿಯಾಗಿದ್ದಾರೆ. ಈ ಘಟನೆಯ ಭಯಾನಕ ವಿಡಿಯೋವನ್ನು ವಾಹನದಲ್ಲಿದ್ದ ಸಿಬ್ಬಂದಿ ಸೆರೆಹಿಡಿದಿದ್ದಾರೆ.
ಪ್ರವಾಸಿಗರನ್ನು ಉಳಿಸಿದ್ದ ಕಬ್ಬಿಣದ ಬೇಲಿ
ನಾಗರಹೊಳೆ ಅರಣ್ಯದ ಎಚ್ಡಿ ಕೋಟೆ ಭಾಗದಲ್ಲಿ ರಸ್ತೆಯಲ್ಲಿ ತೆರಳುತ್ತಿದ್ದ ಪ್ರವಾಸಿಗರ ಜೀಪ್ ಮೇಲೆ ಒಂಟಿ ಸಲಗವೊಂದು ಕಳೆದ ತಿಂಗಳು ದಾಳಿ ನಡೆಸಲು ಮುಂದಾಗಿತ್ತು. ದಾಳಿ ನಡೆಸಲು ಬಂದಿದ್ದ ಆನೆ ಟ್ರಂಚ್ ಪಕ್ಕದಲ್ಲಿ ನಿರ್ಮಿಸಲಾಗಿದ್ದ ಕಬ್ಬಿಣದ ಬೇಲಿಗೆ ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಪ್ರಯಾಣಿಕರು ದಾಳಿಯಿಂದ ಪಾರಾಗಿದ್ದರು.
ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಎರಗಿ ಬಂದ ಕಾಡಾನೆ; ಗಂಭೀರ ಗಾಯ
ಅರಣ್ಯಾಧಿಕಾರಿ ಸಾವಿನ ಕಹಿ ನೆನಪು
ಸುಮಾರು ಎರಡು ವರ್ಷದ ಹಿಂದೆ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನಿರ್ದೇಶಕರಾಗಿದ್ದ ಐಎಫ್ಎಸ್ ಅಧಿಕಾರಿ ಎಸ್. ಮಣಿಕಂಠನ್ ಮೇಲೆ ಒಂಟಿ ಸಲಗ ದಾಳಿ ನಡೆಸಿದ್ದರಿಂದ ಅವರು ಮೃತಪಟ್ಟಿದ್ದರು. ಆ ಘಟನೆಯ ಕಹಿ ನೆನಪು ಇನ್ನೂ ಹಾಗೆಯೇ ಇದೆ.
ನಡೆದುಕೊಂಡು ಹೋಗುತ್ತಿದ್ದಾಗ ದಾಳಿ
ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಡಿಬಿ ಕುಪ್ಪೆ ವಲಯದ ಕಬಿನಿ ಹಿನ್ನೀರು ಪ್ರದೇಶದಲ್ಲಿನ ಬೆಂಕಿ ಅವಘಡದ ಸ್ಥಳ ಪರಿಶೀಲನೆಗೆ ಮಣಿಕಂಠನ್ ಮತ್ತು ಸಿಬ್ಬಂದಿ ಕಾಕನಕೋಟೆ ಬೀಟ್ ಸಮೀಪದ ಕಾಟಿಕುಂಟೆ ಕೆರೆ ಬಳಿಯ ಕಾಲುದಾರಿಗೆಯಲ್ಲಿ ತೆರಳುತ್ತಿದ್ದಾಗ ಒಂಟಿ ಸಲಗ ಹಠಾತ್ ದಾಳಿ ನಡೆಸಿತ್ತು. ತೀವ್ರ ಗಾಯಗೊಂಡಿದ್ದ ಮಣಿಕಂಠನ್, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದರು.
ಕೊಡಗಿನ ಕಾಫಿ ತೋಟದಲ್ಲಿ ಕಾಡಾನೆ ಅಸ್ವಸ್ಥ: ಜೀವನ್ಮರಣ ಸ್ಥಿತಿಯಲ್ಲಿ ಹೆಣ್ಣಾನೆ ಒದ್ದಾಟ