ಮೈಸೂರು ಗಡಿಭಾಗದ ಅರಣ್ಯ ಬೆಂಕಿಗಾಹುತಿ!
ಮೈಸೂರು, ಫೆಬ್ರವರಿ 27: ಬೇಸಿಗೆಯ ಆರಂಭದಲ್ಲೇ ಅರಣ್ಯಕ್ಕೆ ಕಾಡ್ಗಿಚ್ಚು ಬೀಳುತ್ತಿರುವ ಪ್ರಕರಣಗಳು ಅಲ್ಲಲ್ಲಿ ಕಂಡುಬರತೊಡಗಿದೆ. ಅರಣ್ಯ ಇಲಾಖೆ ಎಷ್ಟೇ ಮುಂಜಾಗ್ರತಾ ಕ್ರಮ ವಹಿಸಿದರೂ ಯಾವುದೇ ಪ್ರಯೋಜನವಾದಂತಿಲ್ಲ.
ಮೈಸೂರು ಮತ್ತು ಕೊಡಗು ಗಡಿಭಾಗ ಪಿರಿಯಾಪಟ್ಟಣ ತಾಲೂಕಿನ ಲಿಂಗಪುರ ಗಿರಿಜನ ಹಾಡಿಯ ಸಮೀಪ ಇರುವ ದೊಡ್ಡಹರವೆ ಮೀಸಲು ಅರಣ್ಯ ಮತ್ತು ಕೊಡಗು ಜಿಲ್ಲೆಗೆ ಸೇರಿದ ಮಾಲ್ದಾರೆ ಅರಣ್ಯ ಹೀಗೆ ಎರಡೂ ಕಡೆಯಲ್ಲಿ ಅರಣ್ಯಕ್ಕೆ ಬೆಂಕಿ ಬಿದ್ದಿದ್ದು ನೂರಾರು ಎಕರೆ ಅರಣ್ಯ ಮತ್ತು ಪ್ರಾಣಿ ಪಕ್ಷಿಗಳು ನಾಶವಾಗಿವೆ.
ನಂದಿಬೆಟ್ಟದಲ್ಲಿ ಕಾಡ್ಗಿಚ್ಚು, ನೂರಾರು ಎಕರೆ ಹುಲ್ಲು ನಾಶ
ಒಂದೇ ಸಮಯಕ್ಕೆ ನಾಲ್ಕು ಕಡೆ ಬೆಂಕಿ ಕಾಣಿಸಿಕೊಂಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿದ್ದು, ಕಿಡಿಗೇಡಿಗಳ ಕೃತ್ಯವಿರುವ ಬಗ್ಗೆಯೂ ಹೇಳಲಾಗುತ್ತಿದೆ. ಬೆಂಕಿ ಹೊತ್ತಿ ಉರಿಯುತ್ತಿದ್ದುದನ್ನು ನೋಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸುತ್ತಮುತ್ತಲ ಗ್ರಾಮದ ಮತ್ತು ಗಿರಿಜನ ಹಾಡಿಯ ಜನರು ಮತ್ತು ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಬೆಂಕಿಯನ್ನು ಆರಿಸಿದ್ದಾರೆ.
ಬೆಂಕಿಗೆ ಕಾಡಿನಲ್ಲಿರುವ ಬೃಹದಾಕಾರದ ಮರಗಳು ಹೊತ್ತು ಉರಿದಿದ್ದರೆ ಹಾವು, ಇನ್ನಿತರ ಪಕ್ಷಿ ಪ್ರಾಣಿಗಳು ಬೆಂಕಿಯಲ್ಲಿ ಬೆಂದು ಬೂದಿಯಾಗಿವೆ. ಈ ನಡುವೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರಾದರೂ ನೀರು ಖಾಲಿಯಾದ್ದರಿಂದ ಅರ್ಧಕ್ಕೆ ಹಿಂತಿರುಗುವಂತಾಯಿತು.
ಅರಣ್ಯದ ಒಳಭಾಗಕ್ಕೆ ಹೋಗಲು ಹಿಂದೇಟು!
ಅರಣ್ಯದ ಒಳಭಾಗಕ್ಕೆ ತೆರಳಿ ನೀರು ಹಾಯಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹಿಂದೇಟು ಹಾಕುತ್ತಾರೆ. ಕಾರಣ ಕಲ್ಲು, ಮುಳ್ಳುಗಳು ಚುಚ್ಚಿ ಟಯರ್ ಗೆ ಹಾನಿಯಾಗುವ ಸಾಧ್ಯತೆಯೂ ಇದೆ. ಇದು ಕೂಡ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಾಗ ಅದನ್ನು ಆರಿಸಲು ಅಡ್ಡಿ ಬರುತ್ತಿದೆ.
ಬೇಸಿಗೆ ಬಂತು ಹುಷಾರು!
ಈಗಾಗಲೇ ಬಿಸಿಲಿಗೆ ಕುರುಚಲು ಕಾಡುಗಳು ಒಣಗಿದ್ದು ಅವುಗಳೆಲ್ಲ ಹೊತ್ತಿ ಉರಿಯುವುದರೊಂದಿಗೆ ಒಣಗಿದ ಮರಕ್ಕೆ ಬೆಂಕಿ ತಗುಲಿದರೆ ಅದನ್ನು ಆರಿಸುವುದು ಕಷ್ಟದ ಕೆಲಸವಾಗಿದೆ. ನೀರು ಹಾಕಿಯೇ ಆರಿಸಬೇಕು ಇಲ್ಲಾಂದ್ರೆ ಮರದ ಒಳಗೆ ಬೆಂಕಿಯಿದ್ದು ಮರ ಸಂಪೂರ್ಣ ಬೂದಿ ಆಗುವ ವರೆಗೂ ಉರಿಯುವ ಸಾಧ್ಯತೆಯಿರುತ್ತದೆ. ಜತೆಗೆ ಗಾಳಿಗೆ ಬೆಂಕಿ ಕಿಡಿಗಳು ಹಾರಿ ಬೆಂಕಿ ಪಸರಿಸಲಿದೆ.
ಸಿಗರೇಟ್ ಸೇದಿ ಎಸೆಯುವ ಪ್ರಯಾಣಿಕರು!
ಬೇಸಿಗೆ ದಿನಗಳಲ್ಲಿ ಅರಣ್ಯ ಬದಿಯಲ್ಲಿನ ರಸ್ತೆಗಳಲ್ಲಿ ಸಾಗುವ ವಾಹನ ಚಾಲಕರು, ಪ್ರಯಾಣಿಕರು ಸೇದಿ ಎಸೆಯುವ ಸಿಗರೇಟ್ ತುಂಡುಗಳಿಂದ ಅಲ್ಲದೆ, ಬೇಕೆಂದೇ ಬೆಂಕಿ ಹಚ್ಚುವ ಕಿಡಿಗೇಡಿಗಳು ಇರುವುದರಿಂದ ಅರಣ್ಯ ಇಲಾಖೆ ಎಷ್ಟೇ ಗಮನಹರಿಸಿ ಕಾದರೂ ಬೆಂಕಿಗೆ ಅರಣ್ಯಗಳು ಬಲಿಯಾಗುವುದನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ.
ಬೋಳಾಗಿದೆ ನಾಗರಹೊಳೆ!
ಕಳೆದ ಕೆಲವು ವರ್ಷಗಳಿಂದ ಆಗಾಗ್ಗೆ ಬೆಂಕಿ ಅನಾಹುತಗಳು ಸಂಭವಿಸುತ್ತಲೇ ಇರುವುದರಿಂದ ನಾಗರಹೊಳೆ, ಆನೆಕಾಡು ಅರಣ್ಯಗಳು ಬೋಳಾಗಿರುವುದು ಕಂಡು ಬರುತ್ತಿದೆ. ಅರಣ್ಯ ಕಾಪಾಡುವುದು ಕೇವಲ ಅರಣ್ಯ ಇಲಾಖೆಯ ಕೆಲಸವಲ್ಲ. ಪ್ರತಿಯೊಬ್ಬ ಸಾರ್ವಜನಿಕನದೂ ಇದರಲ್ಲಿ ಪಾತ್ರವಿದೆ. ಇದನ್ನು ಅರಿತುಕೊಂಡರೆ ಬೆಂಕಿಗೆ ಅರಣ್ಯ ಆಹುತಿಯಾಗುವುದನ್ನು ತಪ್ಪಿಸಬಹುದೇನೋ?