ನಂಜನಗೂಡಲ್ಲಿ ಕಾಡು ಹಂದಿ ದಾಳಿಗೆ ಮಹಿಳೆ ಬಲಿ
ಮೈಸೂರು, ಡಿಸೆಂಬರ್ 01 : ನಂಜನಗೂಡು ಕಾಡಂಚಿನ ಗ್ರಾಮಗಳ ಜನರ ಸ್ಥಿತಿ ಸದ್ಯಕ್ಕೆ ಸುಧಾರಿಸುವಂತೆ ಕಾಣುತ್ತಿಲ್ಲ. ಈ ವ್ಯಾಪ್ತಿಯ ಗ್ರಾಮದ ಜನರು ಆಗಾಗ್ಗೆ ಚಿರತೆ, ಹುಲಿ, ಕಾಡಾನೆಗಳ ಹಾವಳಿಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳುತ್ತಲೇ ಇದ್ದಾರೆ.
ಈ ನಡುವೆ ಹುಲಿ ಕಾಟದಿಂದ ಬೇಸತ್ತಿದ್ದ ಜನ ಅದನ್ನು ಗುಂಡಿಟ್ಟು ಕೊಂದ ಬಳಿಕ ನೆಮ್ಮದಿಯಿಂದ ಓಡಾಡುವಂತಾಗಿತ್ತು. ಆದರೆ ಇದೀಗ ಕಾಡು ಹಂದಿ ಹಾವಳಿ ಆರಂಭವಾಗಿದ್ದು, ಸೋಮವಾರ ನಂಜನಗೂಡು ತಾಲೂಕಿನ ಕಾರ್ಯ ಗ್ರಾಮದಲ್ಲಿ ಕಾಡುಹಂದಿಯೊಂದು ಮಹಿಳೆಯನ್ನು ತಿವಿದು ಸಾಯಿಸಿದ್ದು, ಗ್ರಾಮಸ್ಥರು ಬೆಚ್ಚಿ ಬೀಳುವಂತೆ ಮಾಡಿದೆ. [ಎಚ್.ಡಿ.ಕೋಟೆಯಲ್ಲಿ ವ್ಯಾಘ್ರ ಗುಂಡೇಟಿಗೆ ಬಲಿ]
ಕಾರ್ಯ ಗ್ರಾಮದ ನಿವಾಸಿ ಮಹದೇವಪ್ಪನವರ ಪತ್ನಿ ಸುಂದರಮ್ಮ (55) ಕಾಡು ಹಂದಿ ದಾಳಿಗೆ ಸಿಕ್ಕಿ ಮೃತಪಟ್ಟ ದುರ್ದೈವಿ. ಸುಂದರಮ್ಮ ಅವರು ತಮ್ಮ ಜಮೀನಿನಲ್ಲಿ ಹುಲ್ಲು ಕೊಯ್ಯಲು ಹೋಗಿದ್ದ ವೇಳೆ ಹಿಂದಿನಿಂದ ಬಂದ ಕಾಡು ಹಂದಿಯೊಂದು ಅವರ ಮೇಲೆ ದಾಳಿ ಮಾಡಿ ಬೆನ್ನಿನ ಭಾಗಕ್ಕೆ ತಿವಿದ ಪರಿಣಾಮ ಅವರು ಮುಂದಕ್ಕೆ ಬಿದ್ದಿದ್ದಾರೆ. ಈ ಸಂದರ್ಭ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. [ಹುಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಬಲಿ]
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿ ಜಯಶಂಕರ್ ಸ್ಥಳದಲ್ಲೇ 10 ಸಾವಿರ ನಗದು ಪರಿಹಾರ ನೀಡಿ 5 ಲಕ್ಷ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಉಪ ತಹಸೀಲ್ದಾರ್ ಪರಶಿವಮೂರ್ತಿ, ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಎಲ್.ಅರುಣ್, ಸಿಬ್ಬಂದಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡರು. ಈ ಘಟನೆ ಬಳಿಕ ಗ್ರಾಮದಲ್ಲಿ ಮತ್ತೆ ಭಯದ ವಾತಾವರಣ ಸೃಷ್ಟಿಯಾಗಿದೆ.