ಕಾಡುಹಂದಿ ದಾಳಿ : ಕುರಿಗಾಹಿ ಪ್ರಾಣಾಪಾಯದಿಂದ ಪಾರು
ಮೈಸೂರು, ಏಪ್ರಿಲ್ 18 : ಕಾಡುಹಂದಿ ದಾಳಿಗೆ ವ್ಯಕ್ತಿಯೊಬ್ಬ ಗಾಯಗೊಂಡಿರುವ ಘಟನೆ ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದ ಸಮೀಪವಿರುವ ಡೋರನಕಟ್ಟೆ ಆದಿವಾಸಿ ಕಾಲೋನಿಯಲ್ಲಿ ಭಾನುವಾರ ಸಂಜೆ ನಡೆದಿದೆ.
ಕಾಲೋನಿ ನಿವಾಸಿ ಚೆನ್ನ ಎಂಬಾತನೇ ಹಂದಿ ದಾಳಿಗೆ ಗಾಯಗೊಂಡು ಪ್ರಾಣಾಪಾಯದಿಂದ ಪಾರಾದವನು. ಈತ ಕಾಲೋನಿಯ ಸಮೀಪದ ಕಾಡಂಚಿನಲ್ಲಿ ಆಡು ಮೇಯಿಸಿ ಸಂಜೆ 4ರ ಸಮಯದಲ್ಲಿ ಮನೆಗೆ ಹಿಂತಿರುಗುವ ವೇಳೆ ಆಡುಮರಿ ಕಾಡಿನ ಪೊದೆಯತ್ತ ನುಗ್ಗುತ್ತಿತ್ತು. ಅದನ್ನು ಅಟ್ಟಿಸಿಕೊಂಡು ಬರಲು ತೆರಳಿದಾಗ, ಅಲ್ಲಿಯೇ ಪೊದೆಯಲ್ಲಿ ಮರಿಯೊಂದಿಗೆ ಇದ್ದ ಕಾಡು ಹಂದಿಯೊಂದು ಚೆನ್ನನ ಮೇಲೆ ದಾಳಿ ಮಾಡಿ ಕೈಯನ್ನು ಕಚ್ಚಿಹಾಕಿದೆ. [ನಂಜನಗೂಡಲ್ಲಿ ಕಾಡು ಹಂದಿ ದಾಳಿಗೆ ಮಹಿಳೆ ಬಲಿ]
ಕಾಡುಹಂದಿಯಿಂದ ತಪ್ಪಿಸಿಕೊಂಡು ಬಂದ ಗಾಯಾಳು ಚೆನ್ನನನ್ನು ಸ್ಥಳೀಯರು ಸುಮಾರು 20 ಕಿ.ಮೀ ದೂರವಿರುವ ಸ್ವಾಮಿ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ನಡುವೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತಿಳಿಸಿದರಾದರೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರುವ ಸೌಜನ್ಯ ತೋರಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಗಂಭೀರವಾಗಿ ಗಾಯಗೊಂಡಿರುವ ಚೆನ್ನನೇ ಮನೆಗೆ ಆಧಾರವಾಗಿದ್ದು ಇದೀಗ ಗಾಯಗೊಂಡು ಮನೆಯಲ್ಲೇ ಕುಳಿತಿರುವುದರಿಂದ ಸಂಸಾರ ಸಾಗಿಸುವುದು ಕಷ್ಟವಾಗಿದೆ. ಈ ನಡುವೆ ಹೆಡಿಯಾಲ ಎಸಿಎಫ್ ವೆಂಕಟೇಶ್ ಅವರನ್ನು ವಿಚಾರಿಸಿದರೆ, ಘಟನೆ ಕುರಿತು ಮಾಹಿತಿ ಇಲ್ಲ ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ಮಾಡುವುದಾಗಿ ತಿಳಿಸಿದರು. [ವೈಲ್ಡ್ ಲೈಫ್ ಭಾಷಣಾ ಮತ್ತು ವೈಲ್ಡ್ ವೈಫ್ ರಕ್ಷಣಾ!]