ಸರಳ ದಸರಾ ಆಚರಣೆಗೆ ಭರ್ಜರಿ ದೀಪಾಲಂಕಾರವೇಕೆ?
ಮೈಸೂರು, ಅಕ್ಟೋಬರ್ 19: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಬೇಕೆಂದು ಸರ್ಕಾರ ತೀರ್ಮಾನಿಸಿದ್ದೇನೋ ನಿಜ. ಆದರೆ ಪ್ರತೀ ವರ್ಷದಂತೆ ಈ ಬಾರಿಯೂ ಅದ್ಧೂರಿ ದೀಪಾಲಂಕಾರ ಏತಕ್ಕೆ ಎಂಬ ವಿಷಯದ ಕುರಿತು ಸಾರ್ವಜನಿಕ ವಲಯದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ.
ಈ ಬಾರಿ ನಗರದಾದ್ಯಂತ ಮಾಡಿರುವ ದೀಪಾಲಂಕಾರ ನೋಡುಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ. ಕೋವಿಡ್-19ರ ಅಟ್ಟಹಾಸದ ನಡುವೆ ಈ ರೀತಿಯ ಸಂಭ್ರಮ ಕುರಿತು ಭಾರಿ ಟೀಕೆ-ವಿರೋಧವೂ ವ್ಯಕ್ತವಾಗಿದೆ. ಈ ಹಿಂದೆಯೇ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಕೊರೊನಾ ತಡೆಗಟ್ಟುವ ಹಿನ್ನೆಲೆಯಲ್ಲಿ ಮೈಸೂರಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಭೇಟಿಗೆ ನಿರ್ಬಂಧ ವಿಧಿಸಿದ್ದರು.
ಜಿಲ್ಲಾಧಿಕಾರಿಗಳ ಆದೇಶ ರದ್ದು
ಆದರೆ ಸರ್ಕಾರ ಕೆಲವು ವ್ಯಾಪಾರಸ್ಥರ ಒತ್ತಡಕ್ಕೆ ಮಣಿದು ಜಿಲ್ಲಾಧಿಕಾರಿಗಳ ಆದೇಶವನ್ನು ರದ್ದು ಮಾಡಿದ್ದು, ಸಾರ್ವಜನಿಕ ವಲಯದಲ್ಲಿ ಸರ್ಕಾರದ ಬೇಜವಾಬ್ದಾರಿ ಎಂಬ ಅಪಸ್ವರವೂ ಕೇಳಿ ಬರುತ್ತಿದೆ. ಮೈಸೂರು ನಗರದಲ್ಲಿ ಕೊರೊನಾ ವೈರಸ್ ಹರಡುತ್ತಿರುವುದರ ಹಿನ್ನೆಲೆಯಲ್ಲಿ ಸರಳ ದಸರಾ ಎಂದು ಹೇಳಿಕೊಂಡು, ಜನರು ಯಾವುದೇ ಮುನ್ನೆಚ್ಚರಿಕೆ ಕ್ರಮ ಇಲ್ಲದೇ ಗುಂಪು ಸೇರಿ ಬರಲು ಅವಕಾಶ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನಲಾಗುತ್ತಿದೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಜರುಗಿಸದೆ ಬೇಜವಾಬ್ದಾರಿಯಿಂದ ವರ್ತಿಸುವುದು ಮುಂದುವರಿಸಿದರೆ ಕೊರೊನಾ ಅಟ್ಟಹಾಸ ಹೆಚ್ಚಾಗುವುದರಲ್ಲಿ ಸಂದೇಹವೇನೂ ಇಲ್ಲ.
ಮೈಸೂರು ದಸರಾ: ಜಂಬೂಸವಾರಿಗೆ ಕೊನೆಯ ಹಂತದ ತಾಲೀಮು
ವಿದ್ಯುತ್ ದೀಪಾಲಂಕಾರದ ಬಳಿ ಸೆಲ್ಫಿ
ದಸರಾ ವಿದ್ಯುತ್ ದೀಪಾಲಂಕಾರ ನೋಡಲು ಆಗಮಿಸುವ ಜನರು ಕೊರೊನಾ ಸೋಂಕು ಲೆಕ್ಕಿಸದೇ ಸೆಲ್ಫಿಗಾಗಿ ಮುಗಿಬೀಳುತ್ತಾರೆ. ಹೀಗಾಗಿ ವಿದ್ಯುತ್ ದೀಪಾಲಂಕಾರದ ಬಳಿ ಸೆಲ್ಫಿಗೆ ಮುಗಿ ಬೀಳುತ್ತಿರುವ ಬಗ್ಗೆ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರವಾಸೋದ್ಯಮ ಏನು ಅಭಿವೃದ್ಧಿಯಾಗಲ್ಲ
ಈ ಕುರಿತು ಮಾತನಾಡಿರುವ ಎಚ್.ವಿಶ್ವನಾಥ್, ""540 ಜನ ಇರುವ ಸಂಸತ್ನಲ್ಲಿ 60 ಜನ ಒಳಗೆ ಬರಲು ಸಾಧ್ಯವಾಗಿಲ್ಲ. ಇಲ್ಲಿ ನಾವೇ ಎಲ್ಲೋ ಕೊರೊನಾ ಹೆಚ್ಚು ಮಾಡ್ತಿದ್ದೀವಿ ಅನಿಸುತ್ತೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದರಿಂದ ಸಣ್ಣ ಪುಟ್ಟ ವರ್ತಕರಿಗೆ ಅನುಕೂಲ ಆಗಬಹುದು. ಆದರೆ ಪ್ರವಾಸೋದ್ಯಮ ಏನು ಅಭಿವೃದ್ಧಿಯಾಗಲ್ಲ. ಪ್ರಧಾನಿ ಮೋದಿಯೇ ಹೇಳಿದ್ದಾರೆ ಜೀವ, ಜೀವನ ಎರಡೂ ದೃಷ್ಠಿಯಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಅಂತ. ಹೀಗಾಗಿ ಇದನ್ನ ಅರ್ಥ ಮಾಡಿಕೊಂಡು ನಾವು ಹೆಜ್ಜೆ ಇಡಬೇಕಿದೆ'' ಎಂದು ತಿಳಿಸಿದ್ದಾರೆ.
ಝಗಮಗಿಸುತ್ತಿರುವ ದೀಪಾಲಂಕಾರ
ಮೈಸೂರು ನಗರದಾದ್ಯಂತ ಪ್ರಮುಖ ವೃತ್ತ ಹಾಗೂ ಕಟ್ಟಡ ಸೇರಿದಂತೆ ಹಲವೆಡೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ, ಝಗಮಗಿಸುತ್ತಿರುವ ದೀಪಾಲಂಕಾರ ನೋಡಲು ಜನರು ಮುಗಿಬೀಳುತ್ತಿದ್ದು, ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.