ಶ್ರೀನಿವಾಸ ಪ್ರಸಾದ್ ರಾಜಕೀಯ ನಿವೃತ್ತಿಯಿಂದ ಲಾಭ ಯಾರಿಗೆ?
ಮೈಸೂರು, ಆಗಸ್ಟ್ 07: ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ್ ಶುಕ್ರವಾರ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಇದರ ಲಾಭ ಯಾರಿಗೆ ಎಂಬ ಪ್ರಶ್ನೆಗೆ ಬಹು ಸುಲಭವಾಗಿ ಆರ್. ಧ್ರುವನಾರಾಯಣ್ಗೆ ಎಂಬ ಉತ್ತರ ರಾಜಕೀಯ ವಲಯದಿಂದ ಕೇಳಿ ಬರುತ್ತಿದೆ.
ಕಳೆದ ಲೋಕಸಭಾ ಚುನಾವಣೆಗೆ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ವಿ. ಶ್ರೀನಿವಾಸ ಪ್ರಸಾದ್ ಕಣಕ್ಕಿಳಿಯುತ್ತಾರೆ ಎಂಬ ಚಿಕ್ಕ ಅನುಮಾನವೂ ಇರಲಿಲ್ಲ. ಆ ಕ್ಷೇತ್ರ ಆಗಲೇ ಕಾಂಗ್ರೆಸ್ನ ಅಂದಿನ ಸಂಸದ ಆರ್. ಧ್ರುವನಾರಾಯಣ್ ಬಿಗಿ ಹಿಡಿತದಲ್ಲಿತ್ತು. ಜತೆಗೆ ಗೆಲುವು ತಮ್ಮದೇ ಎಂಬ ವಿಶ್ವಾಸದಲ್ಲಿ ಅವರಿದ್ದರು.
Recommended Video
ಶ್ರೀನಿವಾಸ ಪ್ರಸಾದ್ರ ಸ್ಪರ್ಧೆಯನ್ನು ಮೊದಲಿಗೆ ಲಘುವಾಗಿಯೇ ಪರಿಗಣಿಸಲಾಗಿತ್ತು. ಆದರೆ ಅವರ ವರ್ಚಸ್ಸು, ಮೋದಿ ಅಲೆ, ಗೆದ್ದು ಸಿದ್ದರಾಮಯ್ಯನವರಿಗೆ ಪಾಠ ಕಲಿಸಲೇಬೇಕೆಂಬ ಹಠ ಎಲ್ಲವೂ ಒಟ್ಟಿಗೆ ಸೇರಿದ್ದರಿಂದ ಆರ್. ಧ್ರುವನಾರಾಯಣ್ ವಿರುದ್ಧ ಗೆಲುವು ಸಾಧಿಸುವುದರೊಂದಿಗೆ ಕಮಲವನ್ನು ಎತ್ತಿ ಹಿಡಿದಿದ್ದರು.
ಆರ್.ಧ್ರುವನಾರಾಯಣ್ ಹಾದಿ ಸುಗಮ
ಇದೀಗ ಶ್ರೀನಿವಾಸ ಪ್ರಸಾದ್ ರಾಜಕೀಯ ನಿವೃತ್ತಿ ಘೋಷಿಸುತ್ತಿದ್ದಂತೆಯೇ ಆರ್.ಧ್ರುವನಾರಾಯಣ್ ಹಾದಿ ಸುಗಮವಾದಂತೆ ಗೋಚರವಾಗುತ್ತದೆ. ಹಾಗೆಂದು ಧ್ರುವನಾರಾಯಣ್ ಸುಮ್ಮನೆ ಕುಳಿತಿಲ್ಲ. ತಾವು ಸೋಲು ಕಂಡ ಮಾರನೆಯ ದಿನದಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಳೆ ಮೈಸೂರು ವ್ಯಾಪ್ತಿಯಲ್ಲಿ ಬಿಡುವಿಲ್ಲದ ಪ್ರವಾಸ ಮಾಡುತ್ತಾ ಪಕ್ಷವನ್ನು ಸಂಘಟಿಸುತ್ತಿದ್ದಾರೆ. ಈಗಾಗಲೇ ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆಯ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡಿರುವ ಅವರು, ಅದನ್ನು ನಿಷ್ಠೆಯಿಂದಲೇ ಮಾಡುತ್ತಾ ಸಂಘಟನೆಗೆ ಒತ್ತು ನೀಡುತ್ತಿದ್ದಾರೆ. ಇದರ ಮಧ್ಯೆ ಶ್ರೀನಿವಾಸ ಪ್ರಸಾದ್ ನಿವೃತ್ತಿಯ ಮಾತುಗಳು ಮುಂದಿನ ಲೋಕಸಭೆಯ ಚುನಾವಣಾ ಹಾದಿಗೆ ಸಹಕಾರಿಯಾಗುವುದಂತು ಸತ್ಯ.
ಹುಟ್ಟು ಹಬ್ಬದ ದಿನ ರಾಜಕೀಯ ನಿವೃತ್ತಿ ಘೋಷಿಸಿದ ವಿ. ಶ್ರೀನಿವಾಸ ಪ್ರಸಾದ್
ಕೆಪಿಸಿಸಿ ಅಧ್ಯಕ್ಷ ಕನಸು ನನಸಾಗಲಿಲ್ಲ
ಇನ್ನು ಚಾಮರಾಜನಗರ ಸಂಸದ ಶ್ರೀನಿವಾಸ ಪ್ರಸಾದ್ ಬಗ್ಗೆ ಹೇಳಬೇಕೆಂದರೆ, ಅವರು ಹಿರಿಯ ರಾಜಕಾರಣಿ ಜತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನಗಳನ್ನು ಅಲಂಕರಿಸಿ ಸುಮಾರು ಐವತ್ತು ವರ್ಷಗಳ ಕಾಲ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು. ಬಹುಶಃ ಕಾಂಗ್ರೆಸ್ನಲ್ಲಿ ಇನ್ನೊಂದಷ್ಟು ಉನ್ನತ ಹುದ್ದೆಗಳನ್ನು ಅಲಂಕರಿಸುವ ಅರ್ಥಾತ್ ಕೆಪಿಸಿಸಿ ಅಧ್ಯಕ್ಷರಾಗಿ, ಮುಖ್ಯಮಂತ್ರಿಯಾಗುವ ಅವಕಾಶವೂ ಇಲ್ಲದಿರಲಿಲ್ಲ. ಆದರೆ ಅದಕ್ಕೆ ಅವರದ್ದೇ ಪಕ್ಷದ ನಾಯಕರು ಪಿತೂರಿ ಮಾಡಿದರು ಎಂಬುದನ್ನು ಕೂಡ ತಳ್ಳಿ ಹಾಕುವಂತಿಲ್ಲ.
1974ರಲ್ಲಿ ಮೊದಲ ಚುನಾವಣೆ ಎದುರಿಸಿದ್ದರು
ಪಕ್ಷೇತರ ಅಭ್ಯರ್ಥಿಯಾಗಿ 1974ರಲ್ಲಿ ಮೊದಲ ಚುನಾವಣೆ ಎದುರಿಸಿದ ಶ್ರೀನಿವಾಸ ಪ್ರಸಾದ್ ಅಲ್ಲಿಂದ 2019ರ ಲೋಕಸಭಾ ಚುನಾವಣೆವರೆಗೆ ಸುಮಾರು ಹದಿನಾಲ್ಕು ಚುನಾವಣೆಗಳನ್ನು ಎದುರಿಸಿದ್ದಾರೆ. ಇದೀಗ ಬಿಜೆಪಿ ಪಕ್ಷದಲ್ಲಿರುವಾಗಲೇ ಮುಂದಿನ ಚುನಾವಣೆ ಸ್ಪರ್ಧಿಸಲ್ಲ ಎಂಬುದಾಗಿ ಘೋಷಿಸಿದ್ದಾರೆ. ಕಾಂಗ್ರೆಸ್ನಲ್ಲಿದ್ದ ಅವರು ಬಿಜೆಪಿ ಪಕ್ಷದತ್ತ ಮುಖ ಮಾಡಲು ಪ್ರಮುಖ ಕಾರಣ ಸಿದ್ಧರಾಮಯ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಹಲವು ರಾಜಕೀಯ ಪಕ್ಷಗಳನ್ನು ಬದಲಾಯಿಸಿದ್ದಾರೆ
ಇವತ್ತು ವಿ. ಶ್ರೀನಿವಾಸ ಪ್ರಸಾದ್ ಹಲವು ರಾಜಕೀಯ ಪಕ್ಷಗಳನ್ನು ಬದಲಾಯಿಸಿದ್ದಾರೆ. ಆದರೆ ತತ್ವ ಮತ್ತು ಸಿದ್ಧಾಂತವನ್ನು ಮಾತ್ರ ಯಾವತ್ತೂ ಬದಲಾಯಿಸಿಲ್ಲ. 1980ರಲ್ಲಿ ಮೊದಲ ಬಾರಿಗೆ ಲೋಕಸಭೆಯನ್ನು ಪ್ರವೇಶಿಸಿದ್ದರು. ಆ ವೇಳೆ ಇಂದಿರಾಗಾಂಧಿ ಪ್ರಧಾನಿಯಾಗಿದ್ದರೆ, ವಾಜಪೇಯಿ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ಅಲ್ಲಿಂದ ಇಲ್ಲಿವರೆಗೆ ಸುಮಾರು ನಾಲ್ಕು ಬಾರಿ ಸಂಸತ್ ಪ್ರವೇಶ ಮಾಡಿದ್ದಾರೆ. ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದಾರೆ.
ಮುಖ್ಯಮಂತ್ರಿಯಾಗುವ ಬಯಕೆಯೂ ಇತ್ತಂತೆ!
ರಾಜ್ಯದ ಮುಖ್ಯಮಂತ್ರಿಯಾಗುವ ಬಯಕೆಯೂ ಅವರಲ್ಲಿತ್ತಂತೆ. ಆದರೆ ಪಕ್ಷದೊಳಗಿನ ಪಿತೂರಿಯಿಂದ ಆ ಆಸೆ ಈಡೇರಲಿಲ್ಲ. ಮೊದಲೆಲ್ಲ ಕೆಪಿಸಿಸಿ ಅಧ್ಯಕ್ಷರಾದವರು ಮುಖ್ಯಮಂತ್ರಿಯಾಗುತ್ತಿದ್ದರು. ಒಂದು ವೇಳೆ 1996ರಲ್ಲಿ ನಡೆದ ಚುನಾವಣೆಯಲ್ಲಿ ಶ್ರೀನಿವಾಸ ಪ್ರಸಾದ್ಗೆ ಟಿಕೆಟ್ ನೀಡಿದ್ದರೆ ಗೆಲುವು ಅವರದ್ದಾಗುತ್ತಿತ್ತು. ಜತೆಗೆ ಅವರಿಗೆ ಕೆಪಿಸಿಸಿ ಅಧ್ಯಕ್ಷರಾಗುವ ಅವಕಾಶವೂ ಇತ್ತು. ಆದರೆ ಅವತ್ತು ಅವರ ಪಕ್ಷದಲ್ಲಿದ್ದ ಕೆಲವು ನಾಯಕರು ಟಿಕೆಟ್ ನೀಡದಂತೆ ನೋಡಿಕೊಂಡಿದ್ದರು. ಇದರಿಂದ ನೊಂದ ಅವರು ಆ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ 1.60 ಲಕ್ಷ ಮತಗಳನ್ನು ಪಡೆದರಾದರೂ ಗೆಲುವು ಸಾಧ್ಯವಾಗಲಿಲ್ಲ. ಅದರ ಜತೆಗೆ ಕೆಪಿಸಿಸಿ ಅಧ್ಯಕ್ಷರಾಗುವ ಕನಸು ಮಾತ್ರವಲ್ಲದೆ, ಸಿಎಂ ಆಗುವ ಕನಸು ಕೂಡ ಕಮರಿತು. ಇವತ್ತಿಗೂ ರಾಜ್ಯದಲ್ಲಿ ದಲಿತ ಸಿಎಂ ಆಗಿಲ್ಲ ಎಂಬ ಕೊರಗು ಅವರಲ್ಲಿದೆ. ಆದರೆ ತನ್ನನ್ನು ರಾಜಕೀಯವಾಗಿ ಮುಗಿಸಲೇಬೇಕೆಂದು ಹೊರಟ ಸಿದ್ದರಾಮಯ್ಯ ಎದುರು ಸೆಟೆದು ನಿಂತ ತೃಪ್ತಿಯಿದೆ.
ಸಿದ್ದರಾಮಯ್ಯರೊಂದಿಗೆ ರಾಜಿಯಾಗಲಿಲ್ಲ!
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಕಂದಾಯ ಸಚಿವರಾಗಿದ್ದ ಶ್ರೀನಿವಾಸ ಪ್ರಸಾದ್ರನ್ನು ಸಂಪುಟದಿಂದ ಕೈಬಿಡಲಾಗಿತ್ತು. ಈ ವೇಳೆ ಅವರು ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಆ ಸಂದರ್ಭ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ಜತೆ ಒಪ್ಪಂದ ಮಾಡಿಕೊಂಡು ಶ್ರೀನಿವಾಸ ಪ್ರಸಾದ್ರನ್ನು ಸೋಲುವಂತೆ ಮಾಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದರು.
ಆದರೆ ಅದಕ್ಕೆ ಜಗ್ಗದ ಶ್ರೀನಿವಾಸ ಪ್ರಸಾದ್ 2018ರಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರವನ್ನು ಅಳಿಯ ಹರ್ಷವರ್ಧನ್ಗೆ ಬಿಟ್ಟುಕೊಟ್ಟು ಗೆಲ್ಲಿಸಿದರು. ನಂತರ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಪಡೆದರು. ಆ ಮೂಲಕ ತಾನೇನು ಎಂಬುದನ್ನು ತೋರಿಸಿಕೊಟ್ಟರು. ಆ ಸಮಾಧಾನದಲ್ಲಿಯೇ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಮುಂದೇನು ಎಂಬುದನ್ನು ಕಾದು ನೋಡಬೇಕಿದೆ.