ಮೇಯರ್ ಅವಧಿ ಇಂದು ಮುಕ್ತಾಯ; ಮೀಸಲಿನತ್ತ ಎಲ್ಲರ ಚಿತ್ತ
ಮೈಸೂರು, ಜನವರಿ 18: ಮೈಸೂರು ಮಹಾನಗರಪಾಲಿಕೆಯ ಹಾಲಿ ಮೇಯರ್, ಉಪಮೇಯರ್ ಅಧಿಕಾರ ಅವಧಿಯು ಜನವರಿ 18ಕ್ಕೆ ಇಂದು ಕೊನೆಯಾಗಲಿದೆ. ಮುಂದಿನ ಅವಧಿಯ ಮೀಸಲಾತಿ ಯನ್ನು ಸರ್ಕಾರ ಈ ವಾರದಲ್ಲಿ ಪ್ರಕಟಿಸುವ ನಿರೀಕ್ಷೆ ಇದ್ದು, ಇದರ ಕಡೆಗೆ ಎಲ್ಲರ ದೃಷ್ಟಿ ನೆಟ್ಟಿದೆ.
ಕಳೆದ ಜನವರಿ 18 ರಂದು ಹಿಂದುಳಿದ ವರ್ಗಕ್ಕೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಜಾತ್ಯಾತೀತ ದಳ ಸದಸ್ಯರಾದ ತಸ್ನೀಂ ಅವರು ಆಯ್ಕೆಗೊಂಡಿದ್ದರು. ಉಪ ಮೇಯರ್ ಸ್ಥಾನಕ್ಕೆ ಪರಿಶಿಷ್ಟಜಾತಿ ವರ್ಗಕ್ಕೆ ಸೇರಿದ ಕಾಂಗ್ರೆಸ್ ಸದಸ್ಯರಾದ ಶ್ರೀಧರ್ ಆಯ್ಕೆಯಾಗಿದ್ದರು.
ಮೈಸೂರು ಮೇಯರ್ ಚುನಾವಣೆ; ಕುತೂಹಲ ಮೂಡಿಸಿದ ಜೆಡಿಎಸ್!
ಇವರಿಬ್ಬರ ಅಧಿಕಾರಾವಧಿ ಮುಕ್ತಾಯಗೊಂಡಿದ್ದರೂ ಮುಂದಿನ ಮೇಯರ್ ಚುನಾವಣೆ ನಡೆಯುವ ತನಕ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ. ಆದರೆ, ಅಧಿಕಾರದಲ್ಲಿ ಮುಂದುವರಿದಿದ್ದರೂ ಯಾವುದೇ ಸಭೆಗಳನ್ನು ನಡೆಸಲು ಮತ್ತು ಆಡಳಿತಾತ್ಮಕ ತೀರ್ಮಾನಗಳನ್ನು ಕೈಗೊಳ್ಳಲು ಅವಕಾಶ ಇರುವುದಿಲ್ಲ.
21 ವರ್ಷಕ್ಕೇ ಮೇಯರ್ ಚುಕ್ಕಾಣಿ ಹಿಡಿದ ಆರ್ಯ ರಾಜೇಂದ್ರನ್ ವ್ಯಕ್ತಿಚಿತ್ರ
ಶಿಷ್ಟಾಚಾರದ ಪ್ರಕಾರ ಸಭೆ-ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶ ಬಿಟ್ಟರೆ ಉಳಿದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಲೀ, ತೀರ್ಮಾನ ತೆಗೆದುಕೊಳ್ಳುವುದಾಗಲೀ, ಟೆಂಡರ್ ಪ್ರಕಟಿಸುವುದಾಗಲೀ ಮಾಡಲು ಅವಕಾಶ ಇಲ್ಲ.
ತಿರುವನಂತಪುರಂ ಮೇಯರ್ ಸೋಲಿಸಿದ ಬಿಜೆಪಿ ಅಭ್ಯರ್ಥಿ
ಸರ್ಕಾರ ಪ್ರಕಟಿಸಲಿರುವ ಮೀಸಲಾತಿಯತ್ತಲೇ ಎಲ್ಲರ ದೃಷ್ಟಿ ಇದೆ. ಮೈಸೂರೂ ಸೇರಿದಂತೆ ಎಲ್ಲಾ ನಗರಪಾಲಿಕೆಗಳ ಮೀಸಲಾತಿಯನ್ನು ರೋಸ್ಟರ್ ನಿಯಮದಂತೆ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆಯು ಪ್ರಕಟಿಸಲಿದೆ.
ಹಾಲಿ ಮೇಯರ್ ಅವಧಿ ಮುಗಿಯುವ ಮುನ್ನವೇ ಮೀಸಲಾತಿ ಪ್ರಕಟಿಸುವುದು ಅಪರೂಪ. ಅವಧಿ ಮುಗಿದ ವಾರದಲ್ಲಿ ಮೀಸಲಾತಿ ಪ್ರಕಟಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ ಆಗಿದೆ.
ಈ ಹಿನ್ನೆಲೆಯಲ್ಲಿ ಯಾವ ವರ್ಗಕ್ಕೆ ಮೀಸಲಾತಿ ಸಿಗಲಿದೆ ಎನ್ನುವುದು ಪಾಲಿಕೆ ಸದಸ್ಯರಲ್ಲಿ ಕೌತುಕ ಮೂಡಿಸಿದೆ. ನಗರಾಭಿವೃದ್ದಿ ಇಲಾಖಾ ಮೂಲಗಳ ಪ್ರಕಾರ ಈ ಬಾರಿ ಹಿಂದುಳಿದ ವರ್ಗ(ಬಿ) ಗೆ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾಗುವ ಸಾಧ್ಯತೆ ಇದೆ. ರೋಸ್ಟರ್ ಪದ್ಧತಿ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ ಈ ವರ್ಗಗಳಿಗೆ ಮೀಸಲಾತಿ ಸಿಕ್ಕದ ಕಾರಣ ಈ ಬಾರಿ ಸಿಗುವ ನಿರೀಕ್ಷೆ ಇದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಅಲ್ಲದೆ ಬಿಜೆಪಿ ಪಕ್ಷದಲ್ಲೂ ಹಲವರು ಮೇಯರ್ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಮೂರನೇ ಬಾರಿಗೆ ಗೆದ್ದಿರುವ ಬಿಜೆಪಿಯ ಶಿವಕುಮಾರ್, ಸುನಂದ ಪಾಲನೇತ್ರ, ಎರಡನೇ ಬಾರಿಗೆ ಆಯ್ಕೆಯಾಗಿರುವ ಬಿ. ವಿ. ಮಂಜುನಾಥ್, ಜೆಡಿಎಸ್ನಿಂದ ಪರಿಶಿಷ್ಟ ಪಂಗಡಕ್ಕೆ ಸೇರಿದ ಎಂ. ಎಸ್. ಶೋಭಾ, ಹಿಂದುಳಿದ ವರ್ಗಕ್ಕೆ ಸೇರಿದ ಹಾಲಿ ಮೇಯರ್ ತಸ್ನೀಂ, ಸಾಮಾನ್ಯ ವರ್ಗಕ್ಕೆ ಸೇರಿದ ಪ್ರೇಮಾ ಶಂಕರೇಗೌಡ, ಭಾಗ್ಯ ಮಹಾದೇಶ್ ಆಕಾಂಕ್ಷಿಗಳು.
ಕಾಂಗ್ರೆಸ್ನಿಂದ ಪರಿಶಿಷ್ಟ ಪಂಗಡಕ್ಕೆ ಸೇರಿದ ಲೋಕೇಶ್ ಪಿಯಾ, ಹಿಂದುಳಿದ ವರ್ಗದಿಂದ ಮಾಜಿ ಮೇಯರ್ ಆರಿಫ್ ಹುಸೇನ್ ಇತರರು ಕಣ್ಣಿಟ್ಟಿದ್ದಾರೆ. ಮೀಸಲಾತಿ ಅಧಿಕೃತವಾಗಿ ಪ್ರಕಟವಾದ ಮೇಲೆ ಆಕಾಂಕ್ಷಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಇದರ ಜೊತೆಗೆ ತಮ್ಮ ತಮ್ಮ ರಾಜಕೀಯ ನೇತಾರರ ಮೂಲಕ ಅಧಿಕಾರ ಹಿಡಿಯಲು ಲಾಬಿಯೂ ಆರಂಭಗೊಳ್ಳಲಿದೆ.