ರಾಜಕಾರಣದಲ್ಲಿ ಸತ್ಯವಂತರು ಯಾರಿದ್ದಾರೆ?; ಮಾಜಿ ಪ್ರಧಾನಿ ದೇವೇಗೌಡ ಪ್ರಶ್ನೆ
ಮೈಸೂರು, ಏಪ್ರಿಲ್ 16: ಪ್ರಸ್ತುತ ರಾಜಕಾರಣದಲ್ಲಿ ಸತ್ಯವಂತರು ಯಾರಿದ್ದಾರೆ? ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಸಮಾಧಾನ ಹೊರಹಾಕಿದ್ದಾರೆ.
ಶನಿವಾರ ಮೈಸೂರು ಜಿಲ್ಲೆ ಎಚ್.ಡಿ. ಕೋಟೆಯ ಬೀಚನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಪರ್ಸೆಂಟೇಜ್ ಬಗ್ಗೆ ಕೇಳಿದರೆ ಅವರ ಮೇಲೆ ಇವರು, ಇವರ ಮೇಲೆ ಅವರು ಮಾತನಾಡುತ್ತಾರೆ. ಕಾಂಗ್ರೆಸ್ನವರು ಏನೂ ಮಾಡಿಯೇ ಇಲ್ವೇ? ಯಾರು ಸಾಚಾ ಇದ್ದಾರೆ ಹೇಳಿ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ 10% ಸರ್ಕಾರ ಅಂತ ಪ್ರಧಾನಿ ಮೋದಿಯೇ ಆರೋಪ ಮಾಡಿದ್ದರು. ಆಗಲೂ ನಾನು ಆರೋಪ ಮಾಡಲಿಲ್ಲ. ಈಗಲೂ ಅಷ್ಟೇ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ಕೊಡಲ್ಲ. ಭ್ರಷ್ಟಾಚಾರ ಎಲ್ಲಾ ಕಡೆ ತುಂಬಿ ಹೋಗಿದೆ. ರಾಜಕಾರಣ ಹೇಳಲಾಗದಷ್ಟು ಕೆಟ್ಟು ಹೋಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಜಲ ಸಂಪನ್ಮೂಲಕ್ಕೆ ಯಾವುದೇ ಕೊರತೆ ಇಲ್ಲ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಬಿಜೆಪಿ- ಕಾಂಗ್ರೆಸ್ ಸಹಕಾರ ಕೊಡುತ್ತಿಲ್ಲ. ಕಾವೇರಿ, ಕಬಿನಿ, ಕೃಷ್ಣಾ ಸೇರಿದಂತೆ ಬಹುತೇಕ ಅಂತರರಾಜ್ಯ ನದಿಗಳು.
ನೀರಾವರಿ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಬೇಡಿ ಅಂತ ನಾನು ರಾಜ್ಯಸಭೆಯಲ್ಲಿ ಕೈಮುಗಿದು ಮನವಿ ಮಾಡಿದೆ. ಯಾವ ಪಕ್ಷದವರೂ ಸಹಕಾರ ಕೊಡಲಿಲ್ಲ. ನಮ್ಮದು ಪ್ರಾದೇಶಿಕ ಪಕ್ಷ. ಜನರಿಗೆ ಜಾಗೃತಿ ಬಂದರೆ ಸಹಜವಾಗಿ ಒಳ್ಳೆಯ ಆಯ್ಕೆ ಮಾಡುತ್ತಾರೆ. ಅದಕ್ಕಾಗಿಯೇ ಜನತಾ ಜಲಧಾರೆ ಯಾತ್ರೆ ಮೂಲಕ ಜನ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ತಮಿಳುನಾಡಿನಲ್ಲಿ ನೆಲ ಜಲ ವಿಚಾರ ಬಂದಾಗ ಎಲ್ಲಾ ಪಕ್ಷಗಳು ಒಂದಾಗುತ್ತವೆ. ಆದರೆ ನಮ್ಮ ರಾಜ್ಯದಲ್ಲಿ ಯಾರೂ ಒಂದಾಗಲ್ಲ. ಕೈ ಮುಗಿದು ಬೇಡಿದರೂ ಸಹಕಾರ ಕೊಡಲಿಲ್ಲ. ಕೇಂದ್ರ ಜಲಶಕ್ತಿ ಸಚಿವರು ಮೂರು ಬಾರಿ ಭೇಟಿಗೆ ಸಮಯ ನೀಡಿ ಚಕ್ಕರ್ ಹಾಕಿದರು ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಜೊತೆ ಚುನಾವಣಾ ಪೂರ್ವ ಮೈತ್ರಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಎಚ್.ಡಿ. ದೇವೇಗೌಡರು, ಕೆಲವರು ಉತ್ಪ್ರೇಕ್ಷೆಯಿಂದ ಮಾತನಾಡುತ್ತಾರೆ. ಜೆಡಿಎಸ್ ಕಾರ್ಯಕ್ರಮಗಳನ್ನು ನೋಡಿ ಒಂದಲ್ಲಾ ಒಂದು ಬಣ್ಣ ಕಟ್ಟುತ್ತಾರೆ. ನಮ್ಮ ಜೊತೆ ಬಿಜೆಪಿಯ ಯಾರಾದರೂ ಇಲ್ಲಿಗೆ ಬಂದಿದ್ದಾರಾ? ಸುಮ್ನೆ ಯಾರೋ ಏನೋ ಹೇಳುತ್ತಾರೆ ಹೇಳಲಿ ಬಿಡಿ ಎಂದರು.