ವಿಶ್ವನಾಥ್ ರಾಜೀನಾಮೆಯಿಂದ ಜಿಟಿಡಿ ಮತ್ತವರ ಮಗ ಫುಲ್ ಖುಷ್!
ಮೈಸೂರು, ಜುಲೈ 16: ಜೆಡಿಎಸ್ ನ ಅತೃಪ್ತ ಶಾಸಕ ಎಚ್.ವಿಶ್ವನಾಥ್ ರಾಜೀನಾಮೆ ಅಂಗೀಕಾರವಾದರೆ ಯಾರಿಗೆ ಲಾಭ? ಈ ಪ್ರಶ್ನೆಗೆ ಬಿಜೆಪಿಯವರಿಗೆ ಲಾಭ ಎಂಬ ಉತ್ತರ ನಿಮ್ಮದಾದರೆ, ಜೆಡಿಎಸ್ ನ ಸಚಿವ ಜಿ.ಟಿ.ದೇವೇಗೌಡರು ಯಾಕೆ ಸಂತೋಷವಾಗುತ್ತಾರೆ ಎಂದು ಹೇಳಲೇಬೇಕಾಗುತ್ತದೆ.
ಎಚ್.ವಿಶ್ವನಾಥ್ ಅವರು ಮೈಸೂರು ಜಿಲ್ಲೆಯ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಜಯ ಗಳಿಸಿದ್ದಾರೆ. ವಿಶ್ವನಾಥ್ ಅವರು ಈ ಗೆಲುವನ್ನು ತಮ್ಮದೇ ಶ್ರಮ, ವರ್ಚಸ್ಸು, ಕೆಲಸದಿಂದ ಪಡೆದದ್ದು ಎಂದು ಹೇಳಿದರೂ ಮೈಸೂರು ಜಿಲ್ಲೆಯ ರಾಜಕಾರಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪ್ರಭಾವ ಅಲ್ಲಗಳೆಯುವಂತಿಲ್ಲ.
ನಿಮ್ಮದೆಲ್ಲಾ ಗೊತ್ತಿದೆ: ಸಚಿವ ಜಿಟಿಡಿಗೆ ಅಸೆಂಬ್ಲಿಯಲ್ಲೇ ಎಚ್ಡಿಕೆ ಕ್ಲಾಸ್?
ವಿಶ್ವನಾಥ್ ಗೆಲುವಿನಲ್ಲಿ ಈ ಇಬ್ಬರು ನಾಯಕರು ಪಾತ್ರ ದೊಡ್ಡದು ಹಾಗೂ ಜಿ.ಟಿ.ದೇವೇಗೌಡರು ತುಂಬ ಕೆಲಸ ಮಾಡಿದ್ದು ಕೂಡ ಸಹಾಯಕ್ಕೆ ಬಂದಿದೆ ಎನ್ನಲಾಗುತ್ತಿದೆ. ಏಕೆಂದರೆ, ಜಿ.ಟಿ.ದೇವೇಗೌಡರಿಗೆ ಹುಣಸೂರು ಕ್ಷೇತ್ರದಿಂದ ತಮ್ಮ ಮಗ ಹರೀಶ್ ಗೌಡನಿಗೆ ಟಿಕೆಟ್ ಕೊಡಿಸಬೇಕು ಎಂಬುದು ಅಪೇಕ್ಷೆ ಆಗಿತ್ತು. ಆದಕ್ಕೆ ತಕ್ಕಂತೆ ಹರೀಶ್ ಗ್ರೌಂಡ್ ವರ್ಕ್ ಕೂಡ ಮಾಡಿದ್ದರು.
ಆದರೆ, ಯಾವಾಗ ಕಾಂಗ್ರೆಸ್ ತೊರೆದು ಬಂದ ವಿಶ್ವನಾಥ್ ರನ್ನು ಹುಣಸೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ತೀರ್ಮಾನಿಸಲಾಯಿತೋ, ಆಗ ಸ್ವಲ್ಪ ದಿನ ಬೇಸರಗೊಂಡ ಜಿಟಿಡಿ ಮತ್ತು ಅವರ ಮಗ ಹರೀಶ್ ವಿಶ್ವನಾಥ್ ಗೆಲುವಿಗೆ ಶ್ರಮಿಸಿದ್ದರು.
ಆಪರೇಷನ್ ಮುಂಬೈನಲ್ಲಿ ಅಲ್ಲ: ಎಲ್ಲಾ ಬೆಂಗಳೂರಲ್ಲೇ: ಸಚಿವ ಜಿಟಿಡಿ
ಇದೀಗ ವಿಶ್ವನಾಥ್ ಅವರೇ ಜೆಡಿಎಸ್ ನಿಂದ ಹೊರಟು ನಿಂತಿರುವಾಗ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಜಿಟಿಡಿ ಅವರ ಮಗ ಹರೀಶ್ ಗೌಡರನ್ನು ಮುಂದಿನ ಚುನಾವಣೆಯಲ್ಲಿ ಕಣಕ್ಕೆ ಇಳಿಸಲು ಮತ್ತೆ ಉತ್ಸಾಹದಿಂದ ಕೆಲಸ ಆರಂಭಿಸಿದರೂ ಅಚ್ಚರಿ ಇಲ್ಲ ಎನ್ನುತ್ತವೆ ಪಕ್ಷದ ಮೂಲಗಳು.