ಕಬಿನಿ ಜಲಾಶಯದಲ್ಲಿ ಮುಳುಗಿದ ಊರು ಯಾವುದು?
ಮೈಸೂರು, ಅಕ್ಟೋಬರ್ 20: ದೂರದಿಂದ ಬರುವ ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಒಂದು ಸುಂದರ ಪ್ರವಾಸಿ ತಾಣ. ಇದೀಗ ಮೈತುಂಬಿಕೊಂಡಿರುವ ಜಲಾಶಯ ಮತ್ತು ಅದರಾಚೆಗಿನ ಪ್ರಕೃತಿ ಸೌಂದರ್ಯವನ್ನು ಸವಿಯುವುದೇ ಒಂಥರಾ ಮಜಾವಾಗಿರುತ್ತದೆ.
ಕಳೆದ ಮೂರು ವರ್ಷಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರನ್ನು ಹರಿಯಲು ಬಿಟ್ಟಿದ್ದರಿಂದ ಪ್ರವಾಹ ಸೃಷ್ಠಿಯಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಆದರೂ ಅದರ ನಡುವೆ ಜಲಾಶಯದಿಂದ ನದಿಗೆ ಹರಿಯುವ ನೀರನ್ನು ನೋಡುವುದೇ ಚೆಂದ. ಕೇರಳದ ವೈನಾಡಿನಲ್ಲಿ ಮಳೆ ಸುರಿದರೆ ಈ ಜಲಾಶಯ ತುಂಬಿ ಬಿಡುತ್ತದೆ. ಸಾಮಾನ್ಯವಾಗಿ ಪ್ರತಿವರ್ಷವೂ ಈ ಜಲಾಶಯ ಬಹುಬೇಗ ಭರ್ತಿಯಾಗಿ ರೈತರ ಪಾಲಿಗೆ ಜೀವನಾಡಿಯಾಗಿ ಬಿಡುತ್ತದೆ.
ಮೈಸೂರಿನ ಗಾಣಗಳ ಇತಿಹಾಸದಲ್ಲೊಂದು ಸುತ್ತು...
ತುಂಬಿ ತುಳುಕುವ ಜಲಾಶಯ
ಈ ಬಾರಿಯಂತೂ ಮುಂಗಾರು ಮತ್ತು ಹಿಂಗಾರು ಉತ್ತಮವಾಗಿ ಆಗುತ್ತಿರುವುದರಿಂದ ಜಲಾಶಯಕ್ಕೆ ಒಳ ಹರಿಯುವ ನೀರಿನ ಪ್ರಮಾಣ ಉತ್ತಮವಾಗಿದ್ದು, ತುಂಬಿ ತುಳುಕುತ್ತಿರುವ ಜಲಾಶಯ ನೋಡುಗರ ಮೈನವಿರೇಳಿಸುತ್ತಿದೆ. ಕೊರೊನಾ ಮಹಾಮಾರಿಯಿಂದಾಗಿ ದಸರಾ ಹಬ್ಬ ಸರಳವಾಗಿದೆ. ಜೊತೆಗೆ ದೂರದಿಂದ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಒಂದು ವೇಳೆ ಎಲ್ಲವೂ ಸರಿಯಿದ್ದಿದ್ದರೆ ಜಲಾಶಯದ ಸುತ್ತಮುತ್ತ ಪ್ರವಾಸಿಗರೇ ತುಂಬಿ ತುಳುಕುತ್ತಿದ್ದರು.
ಪ್ರಕೃತಿ ಚೆಲುವಿನ ತಾಣ
ಸಾಮಾನ್ಯವಾಗಿ ಕಬಿನಿ ಜಲಾಶಯಕ್ಕೆ ತೆರಳುವವರಿಗೆ ತುಂಬಿದ ಜಲಾಶಯ ಅದರಾಚೆಗೆ ನಿಸರ್ಗ ಸುಂದರ ಹಿನ್ನೀರು ಸೇರಿದಂತೆ ಒಂದಷ್ಟು ಪ್ರಕೃತಿಯ ಚೆಲುವಿನ ದೃಶ್ಯಗಳು ಕಂಡು ಬರುತ್ತವೆ. ಆದರೆ ಈ ಜಲಾಶಯ ಹಲವು ಹಳ್ಳಿ ಹಾಗೂ ದೇವಾಲಯಗಳನ್ನು ತನ್ನ ಒಡಲಲ್ಲಿ ಬಚ್ಚಿಟ್ಟಿರುವ ವಿಚಾರ ಬಹಳಷ್ಟು ಜನಕ್ಕೆ ಗೊತ್ತೇ ಇಲ್ಲ. ಹಾಗೆ ನೋಡಿದರೆ ಎಲ್ಲ ಜಲಾಶಯಗಳು ನಿರ್ಮಾಣವಾದಾಗಲೂ ಹತ್ತಾರು, ಹಳ್ಳಿ, ದೇಗುಲಗಳು ಮುಳುಗಿವೆ. ಅವು ಕೆಲವೊಮ್ಮೆ ನೀರು ತೀರಾ ಖಾಲಿಯಾದಾಗ ಗೋಚರಿಸುತ್ತದೆ. ಹಾಗೆಯೇ ಕಬಿನಿ ಜಲಾಶಯದಲ್ಲೂ ಹಳ್ಳಿ, ದೇಗುಲಗಳು ಮುಳುಗಿವೆ. ವರುಣ ಅಭಯ ತೋರಿದಾಗ ಅವು ಗೋಚರಿಸುವುದಿಲ್ಲ. ಆತ ಮುನಿಸಿಕೊಂಡಾಗ ಮಾತ್ರ ಕಬಿನಿ ಜಲಾಶಯದ ಮತ್ತೊಂದು ಮುಖ ನೋಡಲು ಸಿಗುತ್ತದೆ.
ಮೈಸೂರು ಅರಮನೆ ಬರೀ ಅರಮನೆಯಲ್ಲ ಅದೊಂದು ಸಂಗ್ರಹಾಲಯ...
2013ರಲ್ಲಿ ವರುಣ ಅವಕೃಪೆ ತೋರಿದ್ದ
2013 ರಲ್ಲಿ ವರುಣ ಅವಕೃಪೆ ತೋರಿದ್ದ, ಆಗ ಕಬಿನಿ ಜಲಾಶಯದ ನೀರು ಖಾಲಿಯಾಗಿತ್ತು. ನೀರು ಖಾಲಿಯಾಗುತ್ತಿದ್ದಂತೆಯೇ ಜಲಾಶಯದ ಒಡಲಾಳದಲ್ಲಿದ್ದ ಹುದುಗಿ ಹೋಗಿದ್ದ ಮಾಂಕಾಳಮ್ಮ ಮತ್ತು ಭವಾನಿಶಂಕರ ದೇವಾಲಯಗಳು ಪ್ರತ್ಯಕ್ಷವಾಗಿದ್ದವು. ಈ ದೇವಾಲಯಗಳ ಬಗ್ಗೆ ತಿಳಿಯುತ್ತಾ ಹೋದಾಗ ಒಂದಷ್ಟು ಮಾಹಿತಿ ನಮಗೆ ತಿಳಿದು ಬರುತ್ತದೆ. ಮಾಂಕಾಳಮ್ಮ ದೇವಿಯು ವೈಷ್ಣವ ದೇವತೆಯಾಗಿದ್ದು, ಕೇರಳದಿಂದ ಬಂದು ಕಿತ್ತೂರಿನಲ್ಲಿ ನೆಲೆಸಿದಳು.
ಸಪ್ತ ಮಾತ್ರಿಕೆಯರ ದೇವಾಲಯ
ಇದು ಸಪ್ತಮಾತ್ರಿಕೆಯರಾದ ಅಕ್ಕ-ತಂಗಿಯರ ದೇವಾಲಯ. ಈ ದೇವಾಲಯದಲ್ಲಿ ಗಣಪತಿ, ಭೈರವ ದೇವರಿದ್ದು, ಈ ದೇವಾಲಯದ ಏಳು ಗದ್ದುಗೆಗಳನ್ನು ಏಳು ಹೆಡೆಯ ಸರ್ಪಾಕೃತಿಯಲ್ಲಿ ನಿರ್ಮಿಸಲಾಗಿತ್ತು. ಈ ದೇವಿ ಪರಿವಾರ, ನಾಯಕರ ಆರಾಧ್ಯ ದೇವತೆ. ಈ ದೇವಾಲಯ ಪುನರ್ನಿರ್ಮಾಣ ಅಣೆಕಟ್ಟೆಯ ಹತ್ತಿರದಲ್ಲಿರುವ ಬಸಾಪುರದಲ್ಲಿ ಮಾಡಲಾಗಿದೆ. ಇನ್ನು ಮಾಂಕಾಳಮ್ಮ ದೇವಸ್ಥಾನದಿಂದ ಸ್ವಲ್ಪ ಮುಂದೆ ಸಾಗಿದರೆ ಅಲ್ಲಿರುವುದೇ ಭವಾನಿ ಶಂಕರ ದೇವಾಲಯ.
ಜಲಾಶಯವಿರುವ ಊರು ಕೀರ್ತಿಪುರ
ದೇವಾಲಯ ಇರುವ ಸ್ಥಳ ಮೊದಲು ಕೀರ್ತಿಪುರ ಎಂದು ಹೆಸರುವಾಸಿಯಾಗಿತ್ತು. ನಂತರ ರಾಜರ ಆಳ್ವಿಕೆಯಲ್ಲಿ ದೇವಾಲಯ ನಿರ್ಮಿಸಲಾಯಿತು. ಈ ದೇವಾಲಯದಲ್ಲಿ ಈಶ್ವರಲಿಂಗ, ಬಸವ, ಶೃಂಗಿ ನಾಗದೇವತೆಗಳ ಪಳೆಯುಳಿಕೆ ಕಾಣಿಸಿತ್ತು. ಈ ದೇವಸ್ಥಾನದಲ್ಲಿರುವ ಮೂರ್ತಿಗಳು ಭಿನ್ನವಾಗಿರುವುದರಿಂದ ಪೂಜೆಗೆ ಅರ್ಹವಲ್ಲ. ಆದ್ದರಿಂದ ಈ ದೇವಸ್ಥಾನವನ್ನು ಅಣೆಕಟ್ಟೆಯಿಂದ ತೆರವುಗೊಳಿಸಿಲ್ಲವಂತೆ. ಇನ್ನು ಕಿತ್ತೂರಿನ ಇತಿಹಾಸವನ್ನು ನೋಡುವುದಾದರೆ ಆ ಕಾಲದಲ್ಲಿ ವೈಭವದಿಂದ ಕೂಡಿದ ಸಂಪದ್ಭರಿತ ಗ್ರಾಮವಾಗಿತ್ತಂತೆ. ಇಲ್ಲಿನ ಸಾಮಂತರು ಹತ್ತೂರು ಕೊಟ್ಟರೂ ಕಿತ್ತೂರು ಕೊಡುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಶ್ರೀಮಂತ ಗ್ರಾಮವಾಗಿರುವಂತೆ ನೋಡಿಕೊಂಡಿದ್ದರಂತೆ. ಕಿತ್ತೂರು ಮೈಸೂರಿನ ಯದುವಂಶಸ್ಥರ ಆಳ್ವಿಕೆಗೆ ಒಳಪಟ್ಟಿತ್ತು.
2016ರಲ್ಲಿ ನೀರಿನ ಮಟ್ಟ ಇಳಿಕೆ
ಮೈಸೂರಿನ ಮಹಾರಾಜರಿಗೆ ಎಚ್.ಡಿ ಕೋಟೆ ಪ್ರಿಯವಾಗಿದ್ದ ತಾಣ. ಹೀಗಾಗಿ ಇಲ್ಲಿನ ದೇಗುಲ ಮತ್ತು ನಿಸರ್ಗ ಸುಂದರ ತಾಣಗಳಿಗೆ ಮಹಾರಾಜರು ಭೇಟಿ ನೀಡಿ ವೀಕ್ಷಣೆ ಮಾಡುತ್ತಿದ್ದರು. ಶ್ರೀಗಂಧ ಸೇರಿದಂತೆ ಬೆಲೆಬಾಳುವ ಮರಗಳು ವನ್ಯ ಪ್ರಾಣಿಗಳಿಂದ ಕೂಡಿ ಸುತ್ತಮುತ್ತಲ ಗ್ರಾಮಗಳು ಸಂಪದ್ಭರಿತವಾಗಿತ್ತು. ಕಳೆದ ಮೂರು ವರ್ಷಗಳಿಂದ ಕಬಿನಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿರುವುದರಿಂದ ಯಾವುದೇ ತೊಂದರೆಯಾಗಿಲ್ಲ. 2016ರಲ್ಲಿ ಕಬಿನಿ ಜಲಾಶಯ ಖಾಲಿಯಾಗಿ ಅದರೊಳಗಿದ್ದ ಒಂದಷ್ಟು ಪಳೆಯುಳಿಕೆಗಳು ಕಂಡು ಬಂದಿದ್ದವು. ಅದು ಏನೇ ಇರಲಿ. ಪ್ರತಿ ವರ್ಷವೂ ಉತ್ತಮ ಮಳೆಯಾಗಿ ಕಬಿನಿ ಜಲಾಶಯ ಭರ್ತಿಯಾದರೆ ಮಾತ್ರ ಇದನ್ನು ನಂಬಿದ ಜನ ಮತ್ತು ರೈತಾಪಿ ವರ್ಗ ನೆಮ್ಮದಿಯಾಗಿರಲು ಸಾಧ್ಯ.