ಮೈಸೂರು: ಚಾಮುಂಡಿಬೆಟ್ಟದ ಮೆಟ್ಟಿಲು ಬಾಗಿಲು ತೆರೆಯುವುದು ಯಾವಾಗ?
ಮೈಸೂರು, ಜೂನ್ 9: ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಬಾಗಿಲು ತೆರೆದಿದ್ದು, ಹಲವು ಮುಂಜಾಗ್ರತಾ ಕ್ರಮ ಮತ್ತು ನಿಬಂಧನೆಗಳೊಂದಿಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಆದರೆ ಪಾದದ ಬಳಿ ಗೇಟ್ ತೆರೆಯದಿರುವುದು ಗೊಂದಲಕ್ಕೆ ಕಾರಣವಾಗಿದೆ.
ಬಹಳ ಹಿಂದಿನಿಂದಲೂ ಬೆಳ್ಳಂಬೆಳಗ್ಗೆ ಸಾವಿರ ಮೆಟ್ಟಿಲೇರಿ ಚಾಮುಂಡೇಶ್ವರಿ ದೇವಸ್ಥಾನಕ್ಕೊಂದು ಸುತ್ತು ಹೊಡೆದುಕೊಂಡು ಹೋಗುವ ಅಭ್ಯಾಸವನ್ನು ಬಹಳಷ್ಟು ಮಂದಿ ಮಾಡಿಕೊಂಡಿದ್ದಾರೆ. ಜತೆಗೆ ಮೆಟ್ಟಿಲೇರುವುದರಿಂದ ದೇಹಕ್ಕೆ ವ್ಯಾಯಾಮವಾಗುವುದರಿಂದ ಮುಂಜಾನೆಯೇ ಇತ್ತ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಾರೆ. ಕೊರೊನಾ ವೈರಸ್ ನಿಂದಾಗಿ ಲಾಕ್ ಡೌನ್ ಆಗಿದ್ದ ಹಿನ್ನೆಲೆಯಲ್ಲಿ ಬೆಟ್ಟದ ಮೆಟ್ಟಿಲಿನ ಗೇಟಿಗೆ ಬೀಗ ಹಾಕಿ ಪ್ರವೇಶವನ್ನು ಬಂದ್ ಮಾಡಲಾಗಿದೆ. ಈಗಲೂ ಈ ಗೇಟಿನ ಬಾಗಿಲು ತೆರೆದಿಲ್ಲದಿರುವುದು ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ನಂಜನಗೂಡಿನಲ್ಲಿ ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಿದ ಸಚಿವ, ಶಾಸಕ.!
ಪೊಲೀಸ್ ಸಿಬ್ಬಂದಿಯನ್ನು ಇಲ್ಲಿ ಕಾವಲು ಹಾಕಲಾಗಿದೆ
ಆದರೆ ಜೂನ್ 8 ರಿಂದ ದೇವಾಲಯದ ಬಾಗಿಲು ತೆರೆದ ಕಾರಣ ಮುಂಜಾನೆ ಬೆಟ್ಟಕ್ಕೆ ತೆರಳುವವರು ಬೇಲಿಯನ್ನು ಸರಿಸಿ ದಾರಿ ಮಾಡಿಕೊಂಡು ಮೆಟ್ಟಿಲೇರಿದ್ದಾರೆ. ಇದು ಹೀಗೆಯೇ ಮುಂದುವರೆದಿದೆ.
ಜನ ಮೆಟ್ಟಿಲೇರಿ ಹೋಗುವುದನ್ನು ತಡೆಯುವ ಸಲುವಾಗಿ ಪೊಲೀಸ್ ಸಿಬ್ಬಂದಿಯನ್ನು ಇಲ್ಲಿ ಕಾವಲು ಹಾಕಲಾಗಿದೆ. ಆದರೆ ಸಿಬ್ಬಂದಿ ಬರುವ ವೇಳೆಗೆ ಬಹಳಷ್ಟು ಮಂದಿ ಬೆಟ್ಟಕ್ಕೆ ತೆರಳಿ ಹಿಂತಿರುಗುತ್ತಾರೆ. ಆದರೆ ಸಿಬ್ಬಂದಿ ಬಂದ ನಂತರ ಕೆಲವರನ್ನು ಅರ್ಧದಿಂದ ವಾಪಸ್ ಕಳುಹಿಸಲಾಗುತ್ತಿದೆ. ಈ ವೇಳೆ ಮಾತಿನ ಚಕಮಕಿಯೂ ನಡೆಯುತ್ತಿದೆ.
ಮೆಟ್ಟಿಲು ಹತ್ತಿ ಹೋಗುವವರ ಸಂಖ್ಯೆಯೂ ಹೆಚ್ಚಾಗಿದೆ
ಜನರಲ್ಲಿಯೂ ಈ ವಿಚಾರದಲ್ಲಿ ಗೊಂದಲ ಏರ್ಪಟ್ಟಿದ್ದು, ಮೈಸೂರು ಜಿಲ್ಲಾಡಳಿತ ಈ ಕುರಿತಂತೆ ತನ್ನ ನಿಲುವನ್ನು ಪ್ರಕಟಿಸಬೇಕಿದೆ. ಇಲ್ಲದೆ ಹೋದರೆ ಕೆಲವರು ಬೇಲಿ ಸರಿಸಿ ತೆರಳುವುದು, ಅವರನ್ನು ಅರ್ಧದಿಂದ ಓಡಿಸುವುದು ಹೀಗೆ ಮುಂದುವರೆಯುತ್ತಿದೆ.
ಮೆಟ್ಟಿಲು ಹತ್ತಿ ಹೋಗುವವರ ಸಂಖ್ಯೆಯೂ ಹೆಚ್ಚಾಗಿದೆ.
ಇದರಿಂದ ತೊಂದರೆಗಳು ಆಗುವ ಸಾಧ್ಯತೆಯಿದೆ ಎನ್ನುವುದಾದರೆ ಪಾರ್ಕ್ಗಳಲ್ಲಿಯೂ ವಾಕಿಂಗ್ ಗೆ ಅವಕಾಶ ಮಾಡಿಕೊಟ್ಟಿಲ್ಲವೇ? ಅಲ್ಲಿಯೂ ಜನ ಬರೋದಿಲ್ಲವೆ? ಎಂದು ಕೆಲವು ನಾಗರೀಕರು ಪ್ರಶ್ನಿಸುತ್ತಿದ್ದಾರೆ.
ಜೂನ್ 8 ರಿಂದ ಚಾಮುಂಡಿ ಬೆಟ್ಟ ರೀ ಓಪನ್: ಗಮನಿಸಬೇಕಾದ ಅಂಶಗಳು
ಕೆಲವರು ಮೆಟ್ಟಿಲೇರಿ ಬಳಿಕ ಕೆಳಕ್ಕೆ ಇಳಿಯುತ್ತಿದ್ದರು
ಚಾಮುಂಡಿಬೆಟ್ಟದ ಮೆಟ್ಟಿಲುಗಳನ್ನು ಹತ್ತಲು ಬರುವವರು ಆರೋಗ್ಯದ ದೃಷ್ಠಿಯಿಂದ ಶರೀರಕ್ಕೆ ಮುಂಜಾನೆ ವ್ಯಾಯಾಮವಾಗುತ್ತದೆ ಎಂಬ ಕಾರಣಕ್ಕೆ ಬರುತ್ತಿದ್ದಾರೆ. ಹೀಗಾಗಿ ಒಂದು ಸಮಯ ನಿಗದಿ ಮಾಡಿ, ಮಾಸ್ಕ್ ಧರಿಸಿ ಬರುವಂತೆ ಸೂಚನೆ ನೀಡುವ ಮೂಲಕ ಮೆಟ್ಟಿಲು ಹತ್ತಲು ಅವಕಾಶ ಮಾಡಿಕೊಡಬೇಕು ಎನ್ನುವುದು ಹಲವು ನಾಗರೀಕರ ಒತ್ತಾಯವಾಗಿದೆ.
ಮಂಗಳವಾರ ಗೇಟ್ ಬಳಿ ಸೇವೆಗೆ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿ ಬರುವ ವೇಳೆಗೆ ಬಹಳಷ್ಟು ಮಂದಿ ಮೆಟ್ಟಿಲನ್ನೇರಿದ್ದರು. ಮತ್ತೆ ಕೆಲವರು ಮೆಟ್ಟಿಲೇರಿ ಬಳಿಕ ಕೆಳಕ್ಕೆ ಇಳಿಯುತ್ತಿದ್ದರು.
ಸರಿದಿರುವ ಬೇಲಿಯನ್ನು ದುರಸ್ತಿ ಪಡಿಸಬೇಕು
ಗೇಟ್ ಬಳಿಯಿಂದಲೇ ಜನರನ್ನು ಕಳುಹಿಸಬೇಕಾಗಿದ್ದ ಸಿಬ್ಬಂದಿ ಮೆಟ್ಟಿಲೇರುತ್ತಾ ಬಸವನ ಪ್ರತಿಮೆ ತನಕ ತೆರಳಿ ಎಲ್ಲರನ್ನು ವಾಪಾಸ್ ಕಳಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅಷ್ಟರಲ್ಲಿಯೇ ಪಾದದ ಗೇಟ್ ಬಳಿ ಪೊಲೀಸ್ ಸಿಬ್ಬಂದಿ ಕಾಣದೆ ಇದ್ದುದರಿಂದ ನೂರಾರು ಮಂದಿ ಒಳ ನುಗ್ಗಿ ಮೆಟ್ಟಿಲೇರಿದ್ದಾರೆ. ಮತ್ತೆ ಅವರನ್ನೆಲ್ಲ ಅದೇ ಸಿಬ್ಬಂದಿ ಹೊರಕ್ಕೆ ಕಳುಹಿಸಿದ್ದಾರೆ. ಒಟ್ಟಾರೆ ಇದೊಂದು ಗೊಂದಲವಾಗಿ ಪರಿಣಮಿಸಿದ್ದು, ಮೆಟ್ಟಿಲೇರುವುದಕ್ಕೆ ನಿರ್ಬಂಧ ಮುಂದುವರೆಸಿದ್ದೇ ಆದರೆ ಸರಿದಿರುವ ಬೇಲಿಯನ್ನು ದುರಸ್ತಿ ಪಡಿಸಿ ಜನ ಆ ಬೇಲಿಯ ಮೂಲಕ ದಾಟದಂತೆ ಕ್ರಮ ಕೈಗೊಳ್ಳಬೇಕಿದೆ.