ಸಚಿವ ಸ್ಥಾನ ವಂಚಿತ ಮೈಸೂರಿನ ರಾಮದಾಸ್ ಮಾಡಿದ ಪ್ರಮಾಣವೇನು?
ಮೈಸೂರು, ಆಗಸ್ಟ್ 22: ಈ ಬಾರಿಯ ದಸರಾ ತನ್ನ ಉಸ್ತುವಾರಿಯಲ್ಲಿಯೇ ನಡೆಯುತ್ತದೆ ಎಂದು ನಿರೀಕ್ಷಿಸಿದ್ದ ಮಾಜಿ ಸಚಿವ, ಹಾಲಿ ಶಾಸಕ ರಾಮದಾಸ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗದೆ ಇರುವುದಕ್ಕೆ ನಿರಾಸೆಯಾಗಿದೆ. ರಾಮದಾಸ್ ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು ಎಂಬ ಮಾತುಗಳನ್ನು ಅವರ ಅಭಿಮಾನಿಗಳು ಮಾತ್ರವಲ್ಲದೆ, ಮೈಸೂರಿನ ಬಹಳಷ್ಟು ಜನರು ಹೇಳುತ್ತಿದ್ದಾರೆ.
ಏಕೆಂದರೆ ಈ ಹಿಂದೆ ಸಚಿವರಾಗಿದ್ದಾಗ ಅವರ ನೇತೃತ್ವದಲ್ಲಿ ದಸರಾ ಯಶಸ್ವಿಯಾಗಿ ನಡೆದಿದ್ದನ್ನು ಮರೆಯುವಂತಿಲ್ಲ. ಅವರ ಅಧಿಕಾರಾವಧಿಯಲ್ಲಿ ದಸರಾದಲ್ಲಿ ಒಂದಷ್ಟು ಹೊಸ ಕಾರ್ಯಕ್ರಮಗಳು ಸೇರ್ಪಡೆಯಾಗಿದ್ದನ್ನು ನಾವು ಸ್ಮರಿಸಬಹುದಾಗಿದೆ. ಆಷಾಢ ಶುಕ್ರವಾರದ ವೇಳೆಗಳಲ್ಲಿ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿತ್ತು.
ಹಳೆ ಮೈಸೂರಿನ ಒಬ್ಬರಿಗೂ ದಕ್ಕಿಲ್ಲ ಸಚಿವ ಸ್ಥಾನ; ಕಾರಣವೇನು?
ಎಲ್ಲರೂ ವಾಹನಗಳಲ್ಲೇ ಬರುತ್ತಿದ್ದರಿಂದ ಚಾಮುಂಡಿ ಬೆಟ್ಟದಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗುತ್ತಿತ್ತು. ಈ ಸಮಸ್ಯೆಯನ್ನು ತಪ್ಪಿಸುವ ಸಲುವಾಗಿ ಖಾಸಗಿ ವಾಹನ ಸಂಚಾರವನ್ನು ಆಷಾಢ ಶುಕ್ರವಾರಗಳಲ್ಲಿ ನಿರ್ಬಂಧಿಸಿ, ಭಕ್ತರು ಸಿಟಿ ಬಸ್ನಲ್ಲೇ ಪ್ರಯಾಣಿಸುವ ವ್ಯವಸ್ಥೆ ಕಲ್ಪಿಸಿದರು. ಇದು ಇಂದಿಗೂ ಮುಂದುವರಿದಿದೆ.
ಸಮಾಜಮುಖಿ ಕಾರ್ಯಗಳಿಂದ ಜನಪ್ರಿಯರಾಗರುವ ರಾಮದಾಸ್
ಹಾಗೆ ನೋಡಿದರೆ ರಾಮದಾಸ್ ಅವರ ವೈಯಕ್ತಿಕ ವಿಚಾರಗಳು ಏನೇ ಇರಲಿ, ಅದನ್ನು ಹೊರತುಪಡಿಸಿ ಸಮಾಜಮುಖಿ ಕಾರ್ಯಗಳು ಅವರ ಜನಪ್ರಿಯತೆಗೆ ಸಾಕ್ಷಿಯಾಗಿವೆ. ಇದೀಗ ಅವರು ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡು, ಬಂಡಾಯ ಏಳಬಹುದು ಎಂಬ ಮಾತುಗಳು ಕೇಳಿ ಬಂದಿದ್ದವು. ಜತೆಗೆ ಅವರ ಕಾರ್ಯಕರ್ತರ ಪಡೆ ಕೂಡ ಪಕ್ಷದ ಹಿರಿಯ ನಾಯಕರ ವಿರುದ್ಧ ಗರಂ ಆಗಿದ್ದರು. ಆದರೆ ರಾಮದಾಸ್ ಇದೀಗ ಕೂಲ್ ಆಗಿದ್ದಾರೆ. ಕೊನೆ ಕ್ಷಣದವರೆಗೂ ತಮಗೆ ಸ್ಥಾನ ಸಿಗಬಹುದು ಎಂದೇ ನಂಬಿದ್ದ ಅವರಿಗೆ ಬಿಗ್ ಶಾಕ್ ಆಗಿದೆ. ಆದರೆ ಎಲ್ಲಿಯೂ ಆ ಬಗ್ಗೆ ತಮ್ಮ ಅಸಮಾಧಾನವನ್ನು ಹೊರ ಹಾಕದೆ ಇರುವ ಅವರು, ತಮ್ಮ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದರೂ ಸಮಾಧಾನವಾಗಿರುವಂತೆ ನೋಡಿಕೊಂಡಿದ್ದಾರೆ. ಇದೊಂದು ರೀತಿಯ ಕಾದು ನೋಡುವ ತಂತ್ರವಾಗಿರಬಹುದಾ ಅಥವಾ ಪಕ್ಷನಿಷ್ಠೆಯಾ? ಅದು ಗೊತ್ತಿಲ್ಲ. ಆದರೆ ಅವರು ಹೇಳುತ್ತಿರುವುದೇ ಬೇರೆ.
ಮಾತೃ ಸ್ಥಾನದಲ್ಲಿ ಪಕ್ಷಕ್ಕೆ ಪೂಜನೀಯ ಸ್ಥಾನ
ಅದೇನೆಂದರೆ, ನಾನು 1992ರಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಲ್ಲಿಂದ ಇಲ್ಲಿವರೆಗೂ ಪಕ್ಷವನ್ನು ಮಾತೃ ಸ್ಥಾನದಲ್ಲಿ ಪೂಜಿಸುತ್ತಾ ಬಂದಿದ್ದೇನೆ. ರಾಜಕೀಯ ಇತಿಹಾಸದ ಬೆಳವಣಿಗೆಯಲ್ಲಿ ಹಲವಾರು ಏರಿಳಿತವನ್ನು ಕಂಡಿದ್ದು, ಎಲ್ಲವನ್ನೂ ಧೈರ್ಯದಿಂದಲೇ ನಿಭಾಯಿಸಿದ್ದೇನೆ ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ವಿಚಲಿತನಾಗಿಲ್ಲ. ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಒಂದೇ ಕಾರಣಕ್ಕೆ ನಮ್ಮ ನಡವಳಿಕೆಗಳು ಮತ್ತು ಹೇಳಿಕೆಗಳು ವ್ಯತಿರಿಕ್ತವಾಗಿರಬಾರದು. ಅಲ್ಲದೆ ನನಗೆ ಸಚಿವ ಸ್ಥಾನ ದೊರಕಲಿಲ್ಲವೆಂದು ಯಾರೂ ಪಕ್ಷಕ್ಕಾಗಲಿ, ಮತ ನೀಡಿ ಚುನಾಯಿಸಿದ ಜನತೆಗಾಗಲಿ ಅಥವಾ ಸರಕಾರಕ್ಕಾಗಲಿ ಮುಜುಗರ ತರುವಂತಹ ಸನ್ನಿವೇಶಗಳನ್ನು ಉಂಟು ಮಾಡಬಾರದು ಎನ್ನುತ್ತಾರೆ.
ಯಡಿಯೂರಪ್ಪ ಸಂಪುಟ: ಸಚಿವ ಸ್ಥಾನ ವಂಚಿತ ಶಾಸಕರ ಪಟ್ಟಿ
ನಾಡ ಹಬ್ಬ ದಸರಾಕ್ಕೆ ತೊಂದರೆ ಆಗಬಾರದು
ಇನ್ನು ಅದಕ್ಕೆ ಅವರು ನೀಡುವ ಕಾರಣ ಏನೆಂದರೆ, ಮುಂದೆ ದಸರಾ ಬರುತ್ತಿದೆ. ನಮ್ಮಿಂದ ನಾಡ ಹಬ್ಬ ದಸರಾಕ್ಕೆ ತೊಂದರೆ ಆಗಬಾರದು. ಎಲ್ಲರೂ ಸೇರಿ ದಸರಾವನ್ನು ಯಶಸ್ವಿಗೊಳಿಸಲು ಶ್ರಮಿಸೋಣ ಎಂದು ಕಾರ್ಯಕರ್ತರು ಹಾಗೂ ಹಿಂಬಾಲಕರಿಗೆ ಕರೆ ನೀಡಿದ್ದಾರೆ. ಈಗಾಗಲೇ ತಮ್ಮ ಕ್ಷೇತ್ರದ ಬೆಂಬಲಿಗರ ಮತ್ತು ಕಾರ್ಯಕರ್ತರ ಸಭೆ ನಡೆಸಿರುವ ಅವರು ಯಾರು ಕೂಡ ಅನಗತ್ಯ ಹೇಳಿಕೆ ನೀಡದಂತೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ವಿಶ್ವ ವಿಖ್ಯಾತ ನಾಡ ಹಬ್ಬ ದಸರಾ ಮತ್ತು ಆರಾಧ್ಯ ದೇವತೆ ಚಾಮುಂಡಿ ಮಾತೆಯ ಸೇವಾ ಕಾರ್ಯ ನಮ್ಮೆಲ್ಲರ ಹೊಣೆ ಎಂದಿದ್ದಾರೆ.
ದಸರಾ ಉಸ್ತುವಾರಿ ಅಶೋಕ್ ಹೆಗಲಿಗೆ
ನಾವೆಲ್ಲರೂ ಈ ಕಾರ್ಯದಲ್ಲಿ ಕಾಯಾ, ವಾಚಾ, ಮನಸಾ ಪ್ರಾಮಾಣಿಕವಾಗಿ ದುಡಿಯುತ್ತೇವೆಂದು ಮತ್ತು ವಿಶ್ವದ ಬೇರೆ ಬೇರೆ ದೇಶ, ರಾಜ್ಯಗಳಿಂದ ಮತ್ತು ನಮ್ಮದೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬರುವ ಪ್ರವಾಸಿ ಅತಿಥಿಗಳನ್ನು ಸತ್ಕರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡು ಮೈಸೂರಿನ ಕೀರ್ತಿಯನ್ನು ಹೆಚ್ಚಿಸುತ್ತೇವೆ ಎಂಬ ಪ್ರಮಾಣವನ್ನು ಮಾಡಿಸಿದ್ದಾರೆ. ಈ ಬಾರಿ ದಸರಾ ಉಸ್ತುವಾರಿಯನ್ನು ಸಚಿವ ಆರ್. ಅಶೋಕ್ ವಹಿಸಿಕೊಂಡು, ದಸರಾವನ್ನು ನಡೆಸುತ್ತಿದ್ದಾರೆ. ಅವರಿಗೆ ಇದು ಹೊಸತಾಗಿದೆ. ಅವರ ನೇತೃತ್ವದಲ್ಲಿ ಈ ಬಾರಿಯ ದಸರಾ ಹೇಗೆ ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.