ಪೇಜಾವರ ಶ್ರೀಗಳು ರಾಮ್ದಾಸ್ ಕುರಿತು ಸಿಎಂಗೆ ಮಾಡಿದ ಶಿಫಾರಸ್ಸೇನು?
ಮೈಸೂರು, ಆಗಸ್ಟ್ 28: ಶಾಸಕ ಎಸ್ಎ ರಾಮ್ದಾಸ್ ಕುರಿತು ಪೇಜಾವರ ಶ್ರೀಗಳು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಶಿಫಾರಸು ಮಾಡಿದ್ದಾರೆ.
ಈಗಾಗಲೇ ಖಾತೆ ಹಂಚಿಕೆ ಹಾಗೂ ಡಿಸಿಎಂ ಹುದ್ದೆ ಕುರಿತು ಶಾಸಕ, ಸಚಿವರಲ್ಲಿ ಭಿನ್ನಾಭಿಪ್ರಾಯ ಮೂಡಿದೆ.ಕೆಎಸ್ ಈಶ್ವರಪ್ಪ ಹಾಗೂ ಶ್ರೀರಾಮುಲು ಬೆಂಬಲಿಗರು ಟ್ವೀಟ್ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. ಯಾರು ಡಿಸಿಎಂ ಹುದ್ದೆ ಬೇಕು ಎಂದು ಅಪೇಕ್ಷೆ ಪಟ್ಟಿದ್ದರೋ ಅವರಿಗೆ ಡಿಸಿಎಂ ಹುದ್ದೆ ನೀಡಿಲ್ಲ, ಯಾರು ಕೇಳಿಲ್ಲವೋ ಅವರಿಗೆ ನೀಡಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಸಚಿವ ಸ್ಥಾನ ವಂಚಿತ ಮೈಸೂರಿನ ರಾಮದಾಸ್ ಮಾಡಿದ ಪ್ರಮಾಣವೇನು?
ಹಾಗೆಯೇ ಎಸ್ಎ ರಾಮ್ದಾಸ್ ಅವರನ್ನು ಉಪಮುಖ್ಯಮಂತ್ರಿ ಮಾಡಿ ಎಂದು ಪೇಜಾವರ ಶ್ರೀಗಳು ಮುಖ್ಯಮಂತ್ರಿ ಬಳಿ ಮನವಿ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಿಎಂ ಯಡಿಯೂರಪ್ಪ ಅಥವಾ ಅಮಿತ್ ಶಾ ಜೊತೆ ದೂರವಾಣಿಯಲ್ಲಿ ಮಾತನಾಡಿಲ್ಲ. ಆದರೆ ಸೂಕ್ತ ಸಂದರ್ಭ ನೋಡಿ ಡಿಸಿಎಂ ಸ್ಥಾನಕ್ಕೆ ಶಿಫಾರಸು ಮಾಡುತ್ತೇನೆ ಎಂದು ರಾಮದಾಸ್ ಪರ ಪೇಜಾವರ ಶ್ರೀಗಳು ಬ್ಯಾಟಿಂಗ್ ಮಾಡಿದ್ದಾರೆ.
ಒಟ್ಟಿನಲ್ಲಿ ಖಾತೆ ಹಂಚಿಕೆಯಾದ ಬೆನ್ನಲ್ಲೇ ಪಕ್ಷದ ನಾಯಕರಲ್ಲಿ ಅಸಮಾಧಾನದ ಹೊಗೆಯಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದೇ ಎನ್ನುವ ಪ್ರಶ್ನೆ ಮೂಡಿದೆ.
ತಾನು ಜಾತಿ ಆಧಾರದಲ್ಲಿ ಯಾರ ಪರವೂ ಸ್ಥಾನ ಕೇಳುವುದಿಲ್ಲ ಎಂದಿದ್ದ ಪೇಜಾವರ ಶ್ರೀಗಳು ಈಗ ಸೂಕ್ತ ಸಂದರ್ಭ ನೋಡಿ ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಅವರನ್ನು ಡಿಸಿಎಂ ಸ್ಥಾನಕ್ಕೆ ಮಾತುಕತೆ ನಡೆಸುವುದಾಗಿ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.