ಕುಮಾರಸ್ವಾಮಿ ವೆಸ್ಟ್ಎಂಡ್ ಹೋಟೆಲ್ನಲ್ಲಿ ಕುಳಿತು ಅಧಿಕಾರ ಕಳೆದುಕೊಂಡರು: ಸಿದ್ದರಾಮಯ್ಯ
ಮೈಸೂರು, ಆಗಸ್ಟ್, 08: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ಕ್ಷೇತ್ರದ ಇಲವಾಲ ಮತ್ತು ಜಯಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಈ ದೇಶಕ್ಕೆ ಬಿಜೆಪಿಯಂತಹ ಭ್ರಷ್ಟ ಕೋಮುವಾದಿ ಪಕ್ಷದ ಕೊಡುಗೆ ಏನು? ಎಂದು ಪ್ರಶ್ನಿಸುವುದರ ಮೂಲಕ ಕಿಡಿಕಾರಿದರು.
ಜೆಡಿಎಸ್ ಅಧಿಕಾರ ಕಳೆದುಕೊಂಡಿದ್ದು ಹೇಗೆ?:
ಸ್ವಾತಂತ್ರ್ಯಕ್ಕೆ ಎಲ್ಲಾ ಧರ್ಮದವರು ಹೋರಾಟ ಮಾಡಿದರು. ಆದರೆ ಬಿಜೆಪಿ ಆಗಲಿ, ಜೆಡಿಎಸ್ ಆಗಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ. ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು, ನಮ್ಮನ್ನೆಲ್ಲ ಸ್ವಾತಂತ್ರರನ್ನಾಗಿ ಮಾಡಿದೆ ಎಂದು ಹೇಳಿದರು. ಜೆಡಿಎಸ್ನವರು ಯಾವುದಕ್ಕೂ ಹೋರಾಟ ಮಾಡಿಲ್ಲ, ಅವರಿಗೆ ಸ್ವಾತಂತ್ರವಾಗಿ ಅಧಿಕಾರಕ್ಕೆ ಬರಲು ಶಕ್ತಿ ಇಲ್ಲ. ಬೇರೆಯವರ ಮನೆಯ ಬೆಂಕಿಯಲ್ಲಿ ಕೈ ಕಾಯಿಸಿಕೊಳ್ಳುವುದೇ ಅವರ ಕೆಲಸವಾಗಿದೆ. ನಾವು ಕಳೆದ ಚುನಾವಣೆಯಲ್ಲಿ 80 ಜನ ಗೆದ್ದು, ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದೆಂದು ಜೆಡಿಎಸ್ನವರಿಗೆ ಬೆಂಬಲ ನೀಡಿದ್ದೆವು. ಕುಮಾರಸ್ವಾಮಿ ಯಾವಾಗಲೂ ವೆಸ್ಟೆಂಡ್ ಹೋಟೆಲ್ನಲ್ಲಿ ಕುಳಿತಿರುತ್ತಿದ್ದರು. ಇತ್ತ ಆಡಳಿತ ನಿರ್ವಹಣೆ ಮಾಡಲು ಸಾಧ್ಯವಾಗದೆ ಅಧಿಕಾರ ಕಳೆದುಕೊಂಡರು ಎಂದರು.
ರಾಷ್ಟ್ರಧ್ವಜದ ಬಗ್ಗೆ ವಿವರಣೆ:
ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. 62 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಹೋರಾಟ ಮಾಡಿ ನಮಗೆ ಸ್ವಾತಂತ್ರ್ಯ ಕೊಡಿಸಿದೆ. ಹಲವಾರು ಜನ ಈ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಇಂದು ನಾವೆಲ್ಲರು ಸ್ವತಂತ್ರರಾಗಿದ್ದೇವೆ ಎಂದರೆ ಅದಕ್ಕೆ ಕಾಂಗ್ರೆಸ್ ಪಕ್ಷ ಮುಖ್ಯ ಕಾರಣ ಎಂದು ಹೇಳಿದರು. ರಾಷ್ಟ್ರಗೀತೆ, ಸಂವಿಧಾನ ರಚನೆಯಾಗಿದ್ದು ಕಾಂಗ್ರೆಸ್ನಿಂದ. ರಾಷ್ಟ್ರಧ್ವಜ ಎಂದರೆ ನಮಗೆ ಹೆಮ್ಮೆಯ ವಿಚಾರ. ಇದೇ ಧ್ವಜವನ್ನು ಸಾವರ್ಕರ್, ಗೋಳ್ವಾಲ್ಕರ್ ವಿರೋಧಿಸಿದ್ದರು. ಯಾರಾದರು ಒಬ್ಬ ಬಿಜೆಪಿಯವರು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಸತ್ತಿದ್ದಾರಾ? ಆಸ್ತಿ ಕಳೆದುಕೊಂಡಿದ್ದಾರಾ? ಎಂದು ಪ್ರಶ್ನಿಸಿದರು. ಆದರೂ ಬಿಜೆಪಿಯವರು ದೇಶಭಕ್ತಿ ಬಗ್ಗೆ ಹೇಳಲು ಬರುತ್ತಾರೆ ಎಂದು ವ್ಯಂಗ್ಯವಾಡಿದರು.
ಕಾರ್ಯಕರ್ತರಿಗೆ ಕಿವಿಮಾತು:
ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭಿನ್ನಾಭಿಪ್ರಾಯಗಳನ್ನು ಬಿಟ್ಟು ಬದ್ಧತೆಯಿಂದ ಪಕ್ಷದಲ್ಲೆ ಇರಬೇಕು. ನಾವು ಅಧಿಕಾರದಲ್ಲಿದ್ದಾಗ ಮಾಡಿದಂತಹ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಬೇಕು. ನಮ್ಮ ಸರಕಾರಕ್ಕೆ ಇಂದಿನ 40% ಸರ್ಕಾರಕ್ಕೂ ಹೋಲಿಕೆ ಮಾಡಿ ಈ ಸರ್ಕಾರವನ್ನು ಕಿತ್ತೊಗೆಯಬೇಕು. ನಂತರ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಶಪತ ಮಾಡಬೇಕು ಎಂದರು.
Recommended Video
ಸಮಾರಂಭದಲ್ಲಿ ಮಾಜಿ ಸಂಸದ ಆರ್. ಧ್ರುವನಾರಾಯಣ್, ಕೆಪಿಸಿಸಿ ಸದಸ್ಯರಾದ ಕೆ.ಮರೀಗೌಡ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.