ಪ್ರಸಿದ್ಧ ಭಾಷಾ ವಿಜ್ಞಾನಿ ಡಾ.ಕಿಕ್ಕೇರಿ ನಾರಾಯಣ ನಿಧನ
ಮೈಸೂರು, ಜನವರಿ 11: ನಾಡಿನ ಪ್ರಸಿದ್ಧ ಭಾಷಾವಿಜ್ಞಾನಿ ಡಾ.ಕಿಕ್ಕೇರಿ ನಾರಾಯಣ ಹೃದಯಾಘಾತದಿಂದ ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಿಕ್ಕೇರಿ ನಾರಾಯಣ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ ಬಿಪಿ, ಸಕ್ಕರೆ ಕಾಯಿಲೆ ಇತ್ತು ಎನ್ನಲಾಗಿದೆ. ಮೃತರು ಪತ್ನಿ ಗಿರಿಜಾ, ಮಕ್ಕಳಾದ ಚೇತನ್ ಮತ್ತು ಹರ್ಷ ಅವರನ್ನು ಅಗಲಿದ್ದಾರೆ.[ಪ್ರತಿಕ್ರಿಯೆ: ಕನ್ನಡಿಗರ ಮಾತಿನಲ್ಲಿ 'ಮಹಾಪ್ರಾಣ' ಇಲ್ಲ]
ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಡಾ. ನಾರಾಯಣ ಜನಿಸಿದ್ದರು. ನಾರಾಯಣ ಅವರು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ದೀರ್ಘಕಾಲ ಸಂಶೋಧನೆಯ ಸೇವೆಯಲ್ಲಿದ್ದರು. ಸಾಹಿತ್ಯ ಕೃತಿಗಳ ರಾಚನಿಕ ಮತ್ತು ರಾಚನಿಕೋತ್ತರ ಅಧ್ಯಯನವನ್ನು ಮಾಡಿದ್ದರು. ಅವರ ಭಾಷಾವಿಜ್ಞಾನ ಮತ್ತು ಜಾನಪದ ವಿದ್ವತ್ತನ್ನು ವಿದೇಶಗಳ ವಿಶ್ವವಿದ್ಯಾಲಯಗಳು ಗೌರವಿಸಿವೆ.['ಇಜ್ಞಾನ ಡಾಟ್ ಕಾಮ್' ಗೆ 10ನೇ ವರ್ಷಾಚರಣೆ ಸಂಭ್ರಮ]
ಪದವಿ ತರಗತಿಯಲ್ಲಿರುವಾಗಲೇ ಸಹಪಾಠಿ ವಿ.ಎನ್. ಲಕ್ಷ್ಮೀನಾರಾಯಣರ ಜೊತೆಗೂಡಿ ಕ್ಷೇತ್ರಕಾರ್ಯ ಮಾಡಿ 'ತುಂಬೆ ಹೂವಿಟ್ಟು ಶರಣೆನ್ನಿ' ಎಂಬ ಜನಪದ ಗೀತೆಗಳ ಸಂಕಲನವನ್ನು ಸಂಪಾದಿಸಿ ಪ್ರಕಟಿಸಿದ್ದರು. ಅವರು ಜೇನು ಕುರುಬರ ಕನ್ನಡವನ್ನು ಅಧ್ಯಯನ ಮಾಡಿ ಅದರ ನಿಘಂಟು ಮತ್ತು ಆ ಭಾಷೆಯಲ್ಲಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿದ್ದರು. 11ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ 'ಬಿದಿರು ಮಂಡಲ' ನಾಟಕ ತುಂಬ ಜನಪ್ರಿಯತೆಯನ್ನು ಪಡೆದಿದೆ. ಅದರಲ್ಲಿ ಜೇನು ಕುರುಬ ಯುವಕರೇ ಅಭಿನಯಿಸಿರುವುದು ವಿಶೇಷ.
ಮೈಸೂರಿನ ವೈಚಾರಿಕ ಲೋಕದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ನಾರಾಯಣ ಅವರು ಕೆಲ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ನಿಧನದಿಂದ ಮೈಸೂರಿನ ವಿದ್ವತ್ತಿನ ಲೋಕ ಬಡವಾಗಿದೆ. ಜನವರಿ 11 ರಂದು (ಇಂದು)ಅಂತ್ಯಕ್ರಿಯೆ ನಡೆಯಲಿದೆ.