ಮೈಸೂರು ದಸರಾ: ಅಂಬಾರಿ ಹೊರಲು ಅಭಿಮನ್ಯುಗೆ ತಾಲೀಮು ಆರಂಭ
ಮೈಸೂರು, ಅಕ್ಟೋಬರ್ 8: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2020ರ ಹಿನ್ನೆಲೆಯಲ್ಲಿ ಗಜಪಡೆಗೆ ಭಾರ ಹೊರುವ ತಾಲೀಮು ಆರಂಭವಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಮೈಸೂರು ಅರಮನೆಯ ಆವರಣದಲ್ಲೇ ಆನೆಗಳಿಗೆ ತಾಲೀಮು ನಡೆಸಲಾಗುತ್ತಿದೆ. ಇಂದಿನಿಂದ ಭಾರ ಹೊರುವ ತಾಲೀಮು ಆರಂಭವಾಗಿದ್ದು, ಅರಣ್ಯ ಇಲಾಖೆ ಕ್ಯಾಪ್ಟನ್ ಅಭಿಮನ್ಯುವಿಗೆ ಭಾರ ಹೊರಿಸಲಾಗಿದೆ.
ಮೈಸೂರು ದಸರಾ: ಅರಮನೆಗೆ ಆಗಮಿಸಿದ ಗಜಪಡೆಗೆ ಸಂಭ್ರಮದ ಸ್ವಾಗತ!
ಸುಮಾರು 350 ಕೆ.ಜಿ. ತೂಕದ ಮರಳು ಮೂಟೆ ಹೊತ್ತು ಅಭಿಮನ್ಯು ಮುಂದೆ ಸಾಗಿದ್ದು, ಹಿಂದಿನಿಂದ ಉಳಿದ ಆನೆಗಳು ಸಾಗಿ ಸಾಥ್ ನೀಡಿವೆ. ದಿನೇ ದಿನೇ ಭಾರದ ಪ್ರಮಾಣ ಹೆಚ್ಚಾಗಲಿದ್ದು, ಅಂಬಾರಿ ಹೊರುವ ಆನೆಗೆ ತಾಲೀಮು ನೀಡುವುದು ಅಗತ್ಯವಾಗಿದೆ.
ಅಂಬಾರಿ ಅಂದಾಜು 750 ಕೆ.ಜಿ. ತೂಕ ಇದೆ. ಅಷ್ಟು ಭಾರವನ್ನು ಹೊರುವುದಕ್ಕೆ ಆನೆಯನ್ನು ಸಿದ್ಧಗೊಳಿಸಬೇಕಿದೆ. ಆ ಕಾರಣಕ್ಕಾಗಿ 350ರಿಂದ ಹಂತ ಹಂತವಾಗಿ ಭಾರ ಹೆಚ್ಚಿಸಿಕೊಂಡು 800ಕೆ.ಜಿ. ತೂಕದವರೆಗೂ ಹೊರುವ ಸಾಮರ್ಥ್ಯವನ್ನು ವೃದ್ಧಿಸಲಾಗುತ್ತದೆ. ಈ ಬಾರಿ ಜಂಬೂ ಸವಾರಿ ಅರಮನೆಯ ಆವರಣದೊಳಗಡೆಯೇ ಸೀಮಿತವಾದರೂ ಅಂಬಾರಿ ಹೊರಲು ಅಭಿಮನ್ಯುವಿಗೆ ಎಲ್ಲ ರೀತಿಯಿಂದಲೂ ಸಿದ್ಧಗೊಳಿಸಲಾಗುತ್ತಿದೆ.