ಅಂಬಾರಿ ಹೊರುವ ಅಭಿಮನ್ಯುಗೆ ತಾಲೀಮು; ಗೋಪಿ, ವಿಕ್ರಮನ ಸಾಥ್
ಮೈಸೂರು, ಅಕ್ಟೋಬರ್ 13: ವಿಶ್ವ ವಿಖ್ಯಾತ ಮೈಸೂರು ದಸರಾಗೆ ನಾಲ್ಕು ದಿನಗಳಷ್ಟೇ ಬಾಕಿ ಉಳಿದಿವೆ. ಈ ಬಾರಿ ಸರಳವಾಗಿ ಹಾಗೂ ಸಾಂಪ್ರದಾಯಕವಾಗಿ ದಸರಾ ಆಚರಣೆ ಮಾಡಲು ಸರ್ಕಾರ ತೀರ್ಮಾನ ಮಾಡಿದ್ದು, ಕೇವಲ 5 ಆನೆಗಳನ್ನು ಬಳಸಿಕೊಂಡು ದಸರಾ ಜಂಬೂ ಸವಾರಿ ನಡೆಸಲು ಈಗಾಗಲೇ ನಿರ್ಧರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಅಭಿಮನ್ಯು ನೇತೃತ್ವದ ಐದು ಆನೆಗಳಿಗೆ ಜಂಬೂ ಸವಾರಿ ತಾಲೀಮು ಆರಂಭಿಸಿದ್ದು, ಮರಳು ಮೂಟೆ ಹೊರಿಸಿ ತಾಲೀಮು ಮಾಡಿಸಲಾಗುತ್ತಿದೆ.
ಮೈಸೂರು ದಸರಾ: ಅಂಬಾರಿ ಹೊರಲು ಅಭಿಮನ್ಯುಗೆ ತಾಲೀಮು ಆರಂಭ
ಮೊದಲ ದಿನ ಅಭಿಮನ್ಯು, ಎರಡನೇ ದಿನ ವಿಕ್ರಮ, ಗೋಪಿ ಎಲ್ಲಾ ಆನೆಗಳಿಗೂ 350 ಕೆ.ಜಿ ತೂಕವನ್ನು ಹೊರಿಸಿ ತಾಲೀಮು ಮಾಡಿಸಲಾಗುತ್ತಿದೆ. ರೊಟೀನ್ ಮೂಲಕ ದಿನವೂ ಒಂದೊಂದು ಆನೆಗೆ ಮರಳು ಮೂಟೆ ಹೊರಿಸಿ ತಾಲೀಮು ಮಾಡಿಸಲಾಗುತ್ತಿತ್ತು. ಪ್ರತಿ ನಿತ್ಯ ಮರಳು ಮೂಟೆಯ ತೂಕವನ್ನು ಸಹ ಹೆಚ್ಚಳ ಮಾಡಲಾಗುತ್ತಿತ್ತು.
ಇಂದಿಗೆ ಮರಳು ಮೂಟೆ ತಾಲೀಮು ಅಂತ್ಯವಾಗಿದ್ದು, ನಾಳೆಯಿಂದ ಎಲ್ಲ ಆನೆಗಳಿಗೂ ಮರದ ಅಂಬಾರಿ ಹೊರಿಸಿ ತಾಲೀಮು ಮಾಡಿಸಲಾಗುತ್ತದೆ. ಕ್ಯಾಪ್ಟನ್ ಅಭಿಮನ್ಯು ಸೇರಿ ಗೋಪಿ, ವಿಕ್ರಮನಿಗೂ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಗುತ್ತಿದೆ.
ಅಭಿಮನ್ಯು ಈ ಚಿನ್ನದ ಅಂಬಾರಿ ಹೊರುವುದು ಖಚಿತ. ಒಂದು ವೇಳೆ ಕಡೆ ಘಳಿಗೆಯಲ್ಲಿ ಅನಾರೋಗ್ಯ ಸೇರಿದಂತೆ ಯಾವುದಾದರೂ ಸಮಸ್ಯೆಯಿಂದ ಅಭಿಮನ್ಯುವಿಗೆ ಚಿನ್ನದ ಅಂಬಾರಿ ಹೊರಲು ಸಾಧ್ಯವಾಗದ ಪಕ್ಷದಲ್ಲಿ ಮತ್ತೊಂದು ಆನೆಯನ್ನು ಚಿನ್ನದ ಅಂಬಾರಿ ಹೊರಲು ಪರ್ಯಾಯವಾಗಿ ತಯಾರು ಮಾಡಲಾಗಿರುತ್ತದೆ. ಅದಕ್ಕಾಗಿ ಗೋಪಿಯನ್ನು ಪರ್ಯಾಯವಾಗಿ ತಯಾರು ಮಾಡಲಾಗಿದ್ದು ವಿಕ್ರಮನಿಗೂ ಭಾರ ಹೊರುವ ತಾಲೀಮು ನೀಡಲಾಗುತ್ತಿದೆ.