ಮತ್ತೆ ಮುಡಿಗೇರಲಿ ಮೈಸೂರಿಗೆ ಸ್ವಚ್ಛನಗರಿ ಪಟ್ಟ: ಜಾವಗಲ್ ಶ್ರೀನಾಥ್
ಮೈಸೂರು, ಜೂನ್ 5 : ವಿಶ್ವ ಪರಿಸರ ದಿನಾಚರಣೆ(ಜೂನ್ 5)ಯ ಅಂಗವಾಗಿ ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇಗುಲದ ಮುಂಭಾಗದ ಗಿಡಕ್ಕೆ ನೀರು ಹಾಕುವ ಮೂಲಕ ಮೈಸೂರು ಸ್ವಚ್ಛತಾ ಅಭಿಯಾನದ ರಾಯಭಾರಿ, ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್, ಪರಿಸರ ರಕ್ಷಿಸುವ ಕುರಿತಾದ ಅಭಿಯಾನಕ್ಕೆ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಜಾವಗಲ್ ಶ್ರೀನಾಥ್, ಜನರಿಗೆ ಸ್ವಚ್ಚತೆ ಬಗ್ಗೆ ಇನ್ನಷ್ಟು ಅರಿವು ಬೇಕಾಗಿದೆ. ನಮ್ಮ ಮನೆ ಹೇಗೆ ಸ್ವಚ್ಛವಾಗಿ ಇಡುತ್ತೇವೊ, ಹಾಗೆ ನಮ್ಮ ಸುತ್ತಮುತ್ತಲಿನ ಪರಿಸರ ಕೂಡ ಸ್ವಚ್ಛವಾಗಿಟ್ಟುಕೊಳ್ಳಬೇಕು. ನಮ್ಮ ಮನೆಯ ಬೀದಿಯನ್ನು ನಾವೇ ಸ್ವಚ್ಛಗೊಳಿಸಿದರೂ ಅದೇನು ಅವಮಾನದ ಸಂಗತಿಯಲ್ಲ ಎಂದರು.[ಕ್ಲೀನ್ ಸಿಟಿ ಅಭಿಯಾನಕ್ಕೆ ಜಾವಗಲ್ ಶ್ರೀನಾಥ್ ರಾಯಭಾರಿ]
ಒಂದು ಯೋಜನೆ ರೂಪಿಸಿ ಮೈಸೂರು ಮತ್ತಷ್ಟು ಕ್ಲೀನ್ ಆಗಲು ಶ್ರಮಿಸಬೇಕು. ಹಾಗೆ, ಅದನ್ನ ಅನುಷ್ಠಾನಕ್ಕೆ ತರಬೇಕು. ಮೈಸೂರು ಸತತ ಎರಡು ಬಾರಿ ಸ್ವಚ್ಛನಗರಿ ಬಿರುದು ಪಡೆದಿದೆ. ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು ಲಕ್ಷಾಂತರ ಪ್ರವಾಸಿಗರು ಪ್ರತಿದಿನ ನಗರಕ್ಕೆ ಆಗಮಿಸುತ್ತಾರೆ. ಹಾಗಾಗಿ ನಗರದ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮೂಲದಲ್ಲಿಯೇ ತ್ಯಾಜ್ಯವನ್ನು ವಿಂಗಡಿಸಿ ನೀಡಿದರೆ ಕಸದ ಸಮಸ್ಯೆ ಉಲ್ಬಣವಾಗುವುದಿಲ್ಲ ಎಂದು ಮೈಸೂರಿನ ಕುರಿತು ಕಾಳಜಿ ವ್ಯಕ್ತಪಡಿಸಿದರು.
ನಮ್ಮ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿದ್ದರೆ ಆರೋಗ್ಯವೂ ಉತ್ತಮವಾಗಿರುತ್ತದೆ. ಮೈಸೂರು ಮತ್ತೆ ಸ್ವಚ್ಛ ನಗರಿ ಬಿರುದು ಪಡೆಯುವ ನಿಟ್ಟಿನಲ್ಲಿ ಎಲ್ಲರೂ ಪಾಲಿಕೆಯೊಂದಿಗೆ ಕೈಜೋಡಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್, ಪಾಲಿಕೆ ಆಯುಕ್ತ ಜಗದೀಶ್ ಹಾಗೂ ಕೆ.ವಿ ಮಲ್ಲೇಶ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿರಿದ್ದರು.