ರೈತರ ಟ್ರಾಕ್ಟರ್ ಜಪ್ತಿ ಮಾಡಲಿ ಬಿಡಿಸಿಕೊಡಲು ನಾನೇ ಹೋಗ್ತಿನಿ!
ಮೈಸೂರು, ಜನವರಿ 25 : "ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ನಾನು ಕಾಂಗ್ರೆಸ್ನ ರೈತ ವಿಭಾಗಕ್ಕೆ ಸೂಚನೆ ಕೊಟ್ಟಿದ್ದೇನೆ. ರೈತರಿಗೆ ಬೇಕಾದ ಎಲ್ಲಾ ನೆರವನ್ನೂ ಕೊಡುತ್ತೇವೆ. ಟ್ರಾಕ್ಟರ್ ಪರೇಡ್ಗೆ ನಮ್ಮ ಸಂಪೂರ್ಣ ಬೆಂಬಲವಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದರು.
ಸೋಮವಾರ ಮೈಸೂರಿನಲ್ಲಿ ಮಾತನಾಡಿದ ಡಿ. ಕೆ. ಶಿವಕುಮಾರ್, "ಟ್ರಾಕ್ಟರ್ ಪರೇಡ್ನಿಂದ ಜನಸಾಮಾನ್ಯರಿಗೆ ತೊಂದರೆಯಾಗಬಹುದು. ಅದು ಒಂದೆರಡು ಗಂಟೆಗಳು ಮಾತ್ರ. ರೈತ ನಮ್ಮೆಲ್ಲರಿಗೂ ಅನ್ನ ನೀಡುತ್ತಿರುವವನು, ಅದಕ್ಕಾಗಿ ಎಲ್ಲವನ್ನು ಸಹಿಸಿಕೊಳ್ಳಿ" ಎಂದರು.
"ಸರ್ಕಾರ ರೈತರ ಪ್ರತಿಭಟನೆಯನ್ನು ಬೆಂಬಲಿಸಬೇಕು ಹತ್ತಿಕ್ಕುವುದಲ್ಲ. ಬಿಜೆಪಿಯವರಿಗೆ ತೊಂದರೆಯಾದಾಗ ಪ್ರತಿಭಟಿಸಿಲ್ಲವಾ?. ಒಂದು ವೇಳೆ ಟ್ರಾಕ್ಟರ್ ಜಪ್ತಿ ಮಾಡಿ ಕೇಸ್ ಹಾಕಿದರೆ ಜೈಲಿಗೆ ಹೋಗಲು ನಾವು ಸಿದ್ದ. ಅಲ್ಲಿಂದಲೇ ಜೈಲ್ ಬರೋ ಶುರು ಮಾಡುತ್ತೇವೆ" ಎಂದು ಡಿ. ಕೆ. ಶಿವಕುಮಾರ್ ತಿಳಿಸಿದರು.
"ರೈತರ ಟ್ರಾಕ್ಟರ್ ಜಪ್ತಿ ಮಾಡಿದರೆ ಅದನ್ನು ನಾವೇ ಬಿಡಿಸಿಕೊಡಲು ಹೋಗುತ್ತೇವೆ. ಎಲ್ಲರಿಗೂ ನೋವು ಹೇಳಿಕೊಳ್ಳುವ ಹಕ್ಕಿದೆ. ರೈತರ ಬಾಯಿ ಮುಚ್ಚಿಸುವ ಕೆಲಸ ಮಾಡಬಾರದು. ನಮ್ಮ ಕಾಂಗ್ರೆಸ್ ಪಕ್ಷದ ಪ್ರತಿಭಟನೆಯನ್ನು ತಡೆದಿದ್ದರೂ. ನಮ್ಮದು ಪಕ್ಷದ ಪ್ರತಿಭಟನೆ ಆಗಿತ್ತು. ರೈತರ ಪ್ರತಿಭಟನೆ ಪರವಾಗಿ ಸರ್ಕಾರವೇ ನಿಂತುಕೊಳ್ಳಬೇಕು" ಎಂದು ಹೇಳಿದರು.
"ಪೊಲೀಸರೇ ನೀವು ಸರ್ಕಾರದ ಕೈಗೊಂಬೆಯಾಬೇಡಿ. ನೀವು ಎಲ್ಲರಿಗು ಒಂದೇ ನ್ಯಾಯ ಕೊಡಿ. ಸುಪ್ರೀಂಕೋರ್ಟ್ ಸಹ ಪ್ರತಿಭಟನೆ ಮಾಡಬೇಡಿ ಎಂದು ಹೇಳಿಲ್ಲ. ಮಂಗಳವಾರ ರಜೆ ಇದೆ, ಯಾವ ಸಂಚಾರ ಸಮಸ್ಯೆಯೂ ಆಗಲ್ಲ" ಎಂದು ಡಿ. ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
"ಅನ್ನದಾತ ಅನ್ನ ಕೊಟ್ಟರೇನೆ ನಾವು ಇರೋದು. ಜಿಲ್ಲೆಗಳಲ್ಲಿ ರೈತರನ್ನ ತಡೆಯುತ್ತಿದ್ದಾರೆ. ಡ್ರೈವರ್ಗಳಿಗೆ ಹೆದರಿಸುತ್ತಿದ್ದಾರೆ. ಕಾಂಗ್ರೆಸ್ ರೈತರ ಬೆಂಬಲವಾಗಿ ನಿಂತುಕೊಳ್ಳುತ್ತದೆ" ಎಂದು ಡಿ. ಕೆ. ಶಿವಕುಮಾರ್ ರೈತರ ಪ್ರತಿಭಟನೆಗೆ ಬೆಂಬಲ ಘೋಷಣೆ ಮಾಡಿದರು.
ಸರ್ಕಾರದ ಬಗ್ಗೆ ಲೇವಡಿ; ಬಿಜೆಪಿ ಸರ್ಕಾರವನ್ನು ಲೇವಡಿ ಮಾಡಿದ ಡಿ. ಕೆ. ಶಿವಕುಮಾರ್, "ಈ ಸರ್ಕಾರ ಬಲಿಷ್ಠವಾಗಿದೆ. ಸರ್ಕಾರಕ್ಕೆ ಬಹಳಷ್ಟು ಸಂಖ್ಯಾ ಬಲವಿದೆ. ಸರ್ಕಾರದಲ್ಲಿರುವವರು ಎಲ್ಲರೂ ತುಂಬಾ ಒಗ್ಗಟ್ಟಾಗಿದ್ದಾರೆ. ಸರ್ಕಾರದಲ್ಲಿ ಏನೇನು ಗೊಂದಲವಿಲ್ಲ. ಇನ್ನು ಮುಖ್ಯಮಂತ್ರಿಗಳೋ ಬಹಳ ದೊಡ್ಡವರು" ಎಂದರು.