ಮೈಸೂರಿನಲ್ಲಿ ಇನ್ಮುಂದೆ ಸ್ಕಾಡಾ ಮೂಲಕ ನೀರು ಸರಬರಾಜು
ಮೈಸೂರು, ಸೆಪ್ಟೆಂಬರ್ 11: ಸಾಂಸ್ಕೃತಿಕ ನಗರಿ ಮೈಸೂರಿನ ನಾಗರಿಕರಿಗೆ ಇನ್ಮುಂದೆ ನೂತನ ತಂತ್ರಜ್ಞಾನದ ಮೂಲಕ ನೀರು ಸರಬರಾಜು ಮಾಡಲು ವಾಣಿ ವಿಲಾಸ ನೀರು ಸರಬರಾಜು ಮಂಡಳಿ ಸಜ್ಜಾಗುತ್ತಿದೆ.
ನಗರದ ಸಾರ್ವಜನಿಕರ ಬಳಕೆಗೆಂದು ಬರುವ ನೀರು ಎಲ್ಲಿ ಪೋಲಾಗುತ್ತಿದೆ, ಏನೇನು ಅವ್ಯವಹಾರ ನಡೆಯುತ್ತಿದೆ, ಎಲ್ಲೆಲ್ಲಿ ಏನೇನು ಸಮಸ್ಯೆಗಳಿವೆ ಎಂಬುದರ ಬಗ್ಗೆ ನಿಗಾ ಇಡಲು ಸ್ಕಾಡಾ (ಸೂಪರ್ವೈಸರಿ ಕಂಟ್ರೋಲ್ ಎಂಡ್ ಡೇಟಾ ಅನಾಲಿಟಿಕ್ಸ್ ಆಕ್ವಿಸಿಷನ್) ಎಂಬ ಹೊಸ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಲು ವಾಣಿ ವಿಲಾಸ ನೀರು ಸರಬರಾಜು ಮಂಡಳಿಯು ಮುಂದಾಗಿದೆ.
2011 ರ ಜನಗಣತಿಯ ಪ್ರಕಾರ ಮೈಸೂರಿನ ಜನಸಂಖ್ಯೆ ಇರುವುದು 9 ಲಕ್ಷ, ಈಗ ಹತ್ತು ಲಕ್ಷದ ಆಸುಪಾಸಿನಲ್ಲಿ ಇರಬಹುದು. ಇಷ್ಟು ಜನಸಂಖ್ಯೆಗೆ ನಿತ್ಯ ಅವಶ್ಯಕತೆ ಇರುವುದು 170 ಎಂಎಲ್ಡಿ ನೀರು. ಆದರೆ ಇಲ್ಲಿಗೆ ಸರಬರಾಜು ಅಗುತ್ತಿರುವುದು 260 ಎಂಎಲ್ಡಿ ನೀರು. ಆದರೂ ಕೂಡ ಎಷ್ಟೋ ಕಡೆಗಳಲ್ಲಿ ಇಂದಿಗೂ ಕುಡಿಯುವ ನೀರಿನ ತೀವ್ರ ಕೊರತೆ ಇದೆ.
ಅವ್ಯವಹಾರಗಳು ನಿಯಂತ್ರಣಕ್ಕೆ
ಇದನ್ನು ಸಮಸ್ಯೆಯನ್ನು ಬಗೆಹರಿಸಲು ಈ ಹೊಸ ತಂತ್ರಜ್ಞಾನ ರೂಪಿಸಲಾಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಈಗ ನೀರು ಸರಬರಾಜು ಮಂಡಳಿಯು ಅಭಿವೃದ್ದಿ ಕೆಲಸದ ಗುತ್ತಿಗೆಯನ್ನು ಐಎಲ್ ಅಂಡ್ ಎಫ್ಎಸ್ ಕಂಪನಿಗೆ ನೀಡಿದ್ದು, ಗುತ್ತಿಗೆಯಲ್ಲಿ ಸ್ಕಾಡಾ ತಂತ್ರಜ್ಞಾನ ಅಳವಡಿಕೆ ಕೂಡ ಸೇರಿದೆ.
ಸಾಂಸ್ಕೃತಿಕ ನಗರಿಗೆ ಹೆಚ್ಚಾದ ಪ್ರವಾಸಿಗರು; ಪುಟಿದೆದ್ದ ಪ್ರವಾಸೋದ್ಯಮ
ಇನ್ನು 24 ತಿಂಗಳೊಳಗೆ ಎಲ್ಲವೂ ಸಿದ್ಧವಾಗಲಿದ್ದು, ಈ ಮೂಲಕ ನೀರು ಸರಬರಾಜಿನಲ್ಲಿ ಆಗುತ್ತಿದ್ದ ಅವ್ಯವಹಾರಗಳು ನಿಯಂತ್ರಣಕ್ಕೆ ಬರಲಿವೆ. ಇಂತಹ ಯೋಜನೆಗಳು ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚನೆಗೆ ಪೂರಕವಾಗಿರಲಿದೆ ಎಂದರು.
ನೀರು ಸರಬರಾಜು ವ್ಯವಸ್ಥೆಯ ಮೇಲೆ ನಿಗಾ
ನಗರದ ಅಂಚಿನಲ್ಲಿರುವ ಗ್ರಾಮಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಂಡರೆ ನೀರು ಸರಬರಾಜು ಹೆಚ್ಚು ಬೇಕಾಗುತ್ತದೆ. ಈ ಪ್ರಕ್ರಿಯೆಗೆ ಸ್ಕಾಡಾ ಪೂರಕವಾಗಲಿದೆ ಎಂದರು. ಸ್ಕಾಡಾ ಬಗ್ಗೆ ವಿವರಿಸಿ ಮಾತನಾಡಿದ ವಾಣಿವಿಲಾಸ ನೀರು ಸರಬರಾಜು ಮಂಡಳಿಯ ಎಇಇ ಆಸಿಫ್, ವಾಣಿ ವಿಲಾಸ ನೀರು ಸರಬರಾಜು ಕೇಂದ್ರದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಿ ಇಡೀ ನಗರದ ನೀರು ಸರಬರಾಜು ವ್ಯವಸ್ಥೆಯ ಮೇಲೆ ನಿಗಾ ಇಡಲಾಗುತ್ತದೆ ಎಂದರು.
ಗ್ರಾಮಗಳನ್ನು ನಗರ ಪಾಲಿಕೆಗೆ ಸೇರಿಸುವ ಪ್ರಕ್ರಿಯೆ
ಸೋಲಾರ್ ಮತ್ತು ಎಲೆಕ್ಟ್ರಿಕಲ್ ಆ್ಯಕ್ಚುಯೇಟರ್ ಗಳು, ಫ್ಲೋ ಮೀಟರ್, ಕ್ಯಾಮರಾಗಳು, ಸೆನ್ಸಾರ್ ಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ. ಎಲ್ಲಿಗೆ ಎಷ್ಟು ನೀರು ಸರಬರಾಜಾಗುತ್ತಿದೆ, ಎಲ್ಲಿ ನೀರು ಸೋರಿಕೆಯಾಗುತ್ತಿದೆ, ಎಲ್ಲಿ ಕಳ್ಳತನ ಆಗುತ್ತಿದೆ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಎಂಬ ಮಾಹಿತಿ ನೀಡಿದರು. ಕೆಲವು ಸಣ್ಣ ಪಟ್ಟಣಗಳಲ್ಲಿ ನೀರು ಸರಬರಾಜಿನ ಮೇಲ್ವಿಚಾರಣೆ ಇದ್ದರೂ ನಿಯಂತ್ರಣ ವ್ಯವಸ್ಥೆ ಇಲ್ಲ. ಇದು ಸುಮಾರು 50 ಕೋಟಿ ರೂ. ವೆಚ್ಚದ ಯೋಜನೆ ಎಂದು ಹೇಳಿದ ಸಂಸದರು, ಈ ಬಾರಿಯ ಗ್ರಾ.ಪಂ ಚುನಾವಣೆ ನಡೆಯುವ ಮುನ್ನವೇ ಗ್ರಾಮಗಳನ್ನು ನಗರಪಾಲಿಕೆಗೆ ಸೇರಿಸುವ ಪ್ರಕ್ರಿಯೆ ಚುರುಕಾಗಬೇಕು ಎಂದು ಒತ್ತಾಯಿಸಿದರು.
ಮೊನೊ ರೈಲು, ಮೆಟ್ರೋ ರೈಲು ತರಬಹುದು
ಒಮ್ಮೆ ಚುನಾವಣೆ ಸುತ್ತೋಲೆ ಹೊರಡಿಸಿದರೆ ಮತ್ತೆ ಪ್ರಕ್ರಿಯೆ ಮುಂದೂಡಲ್ಪಡುತ್ತದೆ. ಗ್ರಾಮಗಳನ್ನು ನಗರ ವ್ಯಾಪ್ತಿಗೆ ಸೇರಿಸಿ 15 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಆದರೆ ಮೊನೊ ರೈಲು, ಮೆಟ್ರೋ ರೈಲು ಸೇರಿದಂತೆ ಸಾಕಷ್ಟು ಯೋಜನೆಗಳನ್ನು ತರಬಹುದು. ಹಾಗಾಗಿ ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚನೆ ಬಗ್ಗೆ ಸಾಕಷ್ಟು ಗಮನ ಹರಿಸಲಾಗುತ್ತಿದೆ ಎಂದು ತಿಳಿಸಿದರು.