ಕಬಿನಿಯಿಂದ ನೀರು ಬಿಡುಗಡೆ; ಹೆದ್ದಾರಿಗೇ ಹರಿದ ನೀರು
ಮೈಸೂರು, ಆಗಸ್ಟ್ 08: ಕೇರಳದ ವೈನಾಡಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದಿಂದ 75 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದ್ದು ಕಪಿಲೆ ಮೈದುಂಬಿ ಹರಿಯುತ್ತಿದ್ದಾಳೆ. ಇದರಿಂದ ರಾಷ್ಟ್ರೀಯ ಹೆದ್ದಾರಿಗೆ ಕಪಿಲಾ ನದಿ ನೀರು ನುಗ್ಗಿದೆ.
ಕಪಿಲಾ ನದಿಗೆ 75 ಸಾವಿರ ಕ್ಯೂಸೆಕ್ ಗೂ ಅಧಿಕ ನೀರು ಬಿಟ್ಟ ಪರಿಣಾಮ ಮೈಸೂರು ಊಟಿ ರಸ್ತೆಗೆ ಕಪಿಲಾ ನದಿ ನೀರು ನುಗ್ಗಿದೆ. ಹರಿಯುವ ನೀರಿನಲ್ಲೇ ವಾಹನಗಳು ಸಂಚರಿಸುತ್ತಿವೆ. ನಂಜನಗೂಡು ತಾಲೂಕು ಮಲ್ಲನ ಮೂಲೆ ಮಠದ ಬಳಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ವಾಹನಗಳು ಅಪಾಯದಲ್ಲಿಯೇ ಸಂಚರಿಸುತ್ತಿವೆ. ಸರ್ಕಸ್ ನಡೆಸಿ ಜನರು ವಾಹನ ಚಲಾಯಿಸುತ್ತ ಇದ್ದರೂ ಸ್ಥಳದಲ್ಲಿ ಯಾವುದೇ ಭದ್ರತೆ ಇಲ್ಲ. ಸ್ಥಳದಲ್ಲಿ ಇಂದು ಬೆಳಿಗ್ಗೆ ಹತ್ತರವರೆಗೂ ಪೊಲೀಸ್ ಸಿಬ್ಬಂದಿಯೂ ಕಾಣಿಸುತ್ತಿಲ್ಲ.
ತುಂಬಿ ಹರಿದ ಕಬಿನಿ; ನಂಜನಗೂಡಿನ ಸುತ್ತೂರು ಸೇತುವೆ ಮುಳುಗಡೆ
ಮೈಸೂರು ಜಿಲ್ಲೆ ನಂಜನಗೂಡಿನ ಮಲ್ಲನಮೂಲೆ ಮಠದ ಬಳಿಯ ಬಸವೇಶ್ವರ ದೇವಾಲಯ ಜಲಾವೃತವಾಗಿದೆ. ಕಪಿಲಾ ನದಿ ಉಕ್ಕಿ ಹರಿಯುತ್ತಿರುವುದರಿಂದ ದೇವಾಲಯಕ್ಕೆ ನೀರು ನುಗ್ಗಿದೆ. ಹೆಚ್ಚಿನ ಪ್ರಮಾಣದ ನೀರು ಬಿಟ್ಟರೆ ಮತ್ತಷ್ಟು ಮುಳುಗಡೆಯಾಗುವ ಸಾಧ್ಯತೆ ಇದೆ. ಮಲ್ಲನಮೂಲೆ ಮಠದಲ್ಲಿರುವವರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ ಎನ್ನಲಾಗಿದೆ.
ಮೈಸೂರು-ಸುತ್ತೂರು ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ. ಸುತ್ತೂರಿನಿಂದ ಮೈಸೂರು ಸೇರಿದಂತೆ ವಿವಿಧೆಡೆ ಪ್ರಯಾಣಿಸುವ ಪ್ರಯಾಣಿಕರಿಗೆ ತಾಯೂರು ಮಾರ್ಗದಿಂದ ಕುಪ್ಪೇಗಾಲ ಸೇತುವೆ ಮೂಲಕ ಸಾಗುವಂತೆ ಪೊಲೀಸರು ತಿಳಿಸಿದ್ದಾರೆ. ಶ್ರೀಕಂಠೇಶ್ವರ ದೇವಾಲಯದ ಮುಡಿಕಟ್ಟೆ ಅರ್ಧಭಾಗ, ಹೆಜ್ಜಿಗೆ ಸೇತುವೆ, ಸೋಪಾನಕಟ್ಟೆ ಮುಳುಗಿದೆ.