ಕಬಿನಿಯಿಂದ ತಮಿಳುನಾಡಿಗೆ ನೀರು: ರೈತರಲ್ಲಿ ತುಂಬಿದೆ ಆತಂಕ
ಮೈಸೂರು, ಜುಲೈ 26: ಮುಂಗಾರು ಮಳೆ ವೈಫಲ್ಯದ ನಡುವೆಯೂ ರಾಜ್ಯದ ಪ್ರಮುಖ ಜಲಾಶಯ ಕಬಿನಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಜಲಾಶಯ ಭರ್ತಿಯಾಗಲು 10 ಅಡಿ ಬಾಕಿ ಇದ್ದರೂ ರೈತರ ಜಮೀನಿಗೆ ಮಾತ್ರ ಸಮರ್ಕವಾಗಿ ನೀರು ಹರಿಸುತ್ತಿಲ್ಲ. ಜೊತೆಗೆ ತಮಿಳುನಾಡಿಗೆ ನೀರು ಬಿಡಬೇಕಿರುವುದು ರೈತರಲ್ಲಿ ಆತಂಕ ಉಂಟು ಮಾಡಿದೆ.
ಕೇರಳದ ವೈನಾಡು ಹಾಗೂ ಕಬಿನಿ ಹಿನ್ನೀರು ಪ್ರದೇಶದಲ್ಲಿ ಕಳೆದ 20 ದಿನಗಳಿಂದ ಪುನರ್ವಸು ಮಳೆ ಸಾಧಾರಣವಾಗಿ ಸುರಿದಿದೆ. ಈ ಕಾರಣದಿಂದ ಕಬಿನಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದಿದೆ. ನಾಲ್ಕು ದಿನದ ಹಿಂದೆ ಮಳೆಯೂ ಆಗುತ್ತಿರುವುದರಿಂದ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಿದೆ.
ರಾತ್ರೋರಾತ್ರಿ ಕಾವೇರಿ, ಕಬಿನಿಯಿಂದ ತಮಿಳುನಾಡಿಗೆ ನೀರು; ಮಂಡ್ಯದಲ್ಲಿ ರೈತರ ಪ್ರತಿಭಟನೆ
ಜಲಾಶಯದ ಗರಿಷ್ಠ ಮಟ್ಟ 84 ಅಡಿ ಇದ್ದು, ಒಂಬತ್ತು ಸಾವಿರ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿರುವುದರಿಂದ 74 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 83 ಅಡಿಗಳಷ್ಟಿತ್ತು. ವಿದ್ಯುತ್ ಉತ್ಪಾದನಾ ಘಟಕದಿಂದ 5 ಸಾವಿರ ಕ್ಯುಸೆಕ್ ನೀರನ್ನು ಹಾಗೂ ಜಲಾಶಯದ ಎರಡು ಕ್ರಸ್ಟ್ ಗೇಟ್ ಗಳಿಂದ 2 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಈ ವರ್ಷದಲ್ಲಿ ಕ್ರಸ್ಟ್ ಗೇಟ್ ತೆರೆದು ಇದೇ ಮೊದಲ ಬಾರಿಗೆ ನೀರು ಬಿಡಲಾಗಿದೆ.
ಇತ್ತ ಮಳೆಯ ಪ್ರಮಾಣ ಸಾಧಾರಣವಾಗಿರುವುದರಿಂದ ಮುಂದಿನ ದಿನಗಳಲ್ಲಿ ಜಲಾಶಯ ಭರ್ತಿಯಾಗುವ ಕುರಿತು ರೈತರಲ್ಲಿ ಅನುಮಾನ ಮೂಡಿದೆ.
ಏರಿದೆ ಕಬಿನಿ ಒಳಹರಿವು: ರೈತರ ಮೊಗದಲ್ಲೀಗ ಸಂತಸ
ತಮಿಳುನಾಡಿಗೆ ನೀರು ಬಿಟ್ಟ ಅಧಿಕಾರಿಗಳು ಕೆರೆ-ಕಟ್ಟೆಗಳಿಗೆ ನೀರು ಹರಿಸುವ ಕೆಲಸಕ್ಕೆ ಮುಂದಾಗಿಲ್ಲ. ಕಳೆದ ಬೇಸಿಗೆಯಲ್ಲೂ ಜಲಾಶಯದ ನೀರು ರೈತರು ಮತ್ತು ಜಾನುವಾರುಗಳಿಗೆ ಸಿಗದೇ ಕಷ್ಟದ ಸ್ಥಿತಿ ಎದುರಾಗಿತ್ತು.
ಮೈಸೂರು ಜಿಲ್ಲೆಯಲ್ಲೂ ಮಳೆಗೆ ಕೃಷಿ ಭೂಮಿ ಮುಳುಗಡೆ, ರೈತರ ಬದುಕು ಅತಂತ್ರ
ನುಗು, ತಾರಕ, ಹೆಬ್ಬಾಳ ಜಲಾಶಯಗಳಿಂದಲೂ ರೈತರ ಜಮೀನಿಗೆ ನೀರು ಹರಿಸುತ್ತಿಲ್ಲ. ಟಿ ನರಸೀಪುರ, ಚಾಮರಾಜನಗರ, ನಂಜನಗೂಡು, ಕೊಳ್ಳೇಗಾಲ, ಎಚ್ ಡಿ ಕೋಟೆ ವ್ಯಾಪ್ತಿಯ ಜಮೀನಿಗೆ ಸಮರ್ಪಕವಾಗಿ ಒದಗಿಸಿ ರೈತರನ್ನು ರಕ್ಷಿಸಲು ಮುಂದಾಗುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ ಅಷ್ಟೆ.