ಜಯಾ ವಿಧಿವಶ: ಡಾ. ವಿಷ್ಣು ಸ್ಮಾರಕದ ಶಂಕುಸ್ಥಾಪನೆ ಮುಂದೂಡಿಕೆ
ಜಯಲಲಿತಾ ಅಸ್ತಂಗತರಾಗಿದ್ದರಿಂದ ಮೈಸೂರಿನಲ್ಲಿ ಡಿ.6ರಂದು ನಡೆಯಬೇಕಿದ್ದ ಡಾ. ವಿಷ್ಣುವರ್ಧನ್ ಸ್ಮಾರಕ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಮೈಸೂರಿನ ಉದ್ಬೂರು ಸಮೀಪದ ಹಾಲಾಳು ಗ್ರಾಮದಲ್ಲಿ ಕಾರ್ಯಕ್ರಮ ನಿಗದಿಯಾಗಿತ್ತು.
ಮೈಸೂರು, ಡಿಸೆಂಬರ್ 6 : ಸಾಹಸಸಿಂಹ ಡಾ.ವಿಷ್ಣುವರ್ಧನ್ ಕಣ್ಮರೆಯಾಗಿ 7 ವರ್ಷದ ಬಳಿಕ ಅವರ ಸ್ಮಾರಕ ಸ್ಥಾಪನೆಗೆ ಕಂಕಣ ಕೂಡಿ ಬಂದಿತ್ತಾದರೂ ಜಯಲಲಿತಾ ನಿಧನದಿಂದ ಮಂಗಳವಾರ ಡಿಸೆಂಬರ್ 6ರಂದು ನಡೆಯಬೇಕಿದ್ದ ವಿಷ್ಣು ಸ್ಮಾರಕ ಶಂಕುಸ್ಥಾಪನೆ ಸಮಾರಂಭ ಮುಂದೂಡಲಾಗಿದೆ.
[ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]
ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಿಂದ ಮೈಸೂರಿಗೆ ಸ್ಥಳಾಂತಗೊಂಡಿದ್ದ ಡಾ.ವಿಷ್ಣು ಸ್ಮಾರಕ ಮೈಸೂರಿನ ಉದ್ಬೂರು ಸಮೀಪದ ಹಾಲಾಳು ಗ್ರಾಮದಲ್ಲಿ ಮಂಗಳವಾರ(ಡಿ.06) ವಿಷ್ಣುವರ್ಧನ್ ಸ್ಮಾರಕ ಶಂಕುಸ್ಥಾಪನೆ ಕಾರ್ಯಕ್ರಮ ನಿಗದಿಯಾಗಿತ್ತು.
ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ವಿಧಿವಶರಾದ ಹಿನ್ನೆಲೆಯಲ್ಲಿ ಜಯಲಲಿತಾ ಅಂತಿಮ ದರ್ಶನ ಪಡೆಯಲು ಸಿಎಂ ಸಿದ್ದರಾಮಯ್ಯ ತಮಿಳುನಾಡಿಗೆ ತೆರಳಿದ್ದಾರೆ. ಈ ಹಿನ್ನಲೆಯಲ್ಲಿ ಶಂಕುಸ್ಥಾಪನೆ ಸಮಾರಂಭವನ್ನು ಮುಂದೂಡಲಾಗಿದೆ ಎಂದು ಪತ್ನಿ ಭಾರತಿ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ.
ಇನ್ನು ಭಾರತಿ ವಿಷ್ಣುವರ್ಧನ್ ಅವರು ಜಯಲಲಿತಾ ವಿಧಿವಶರಾಗಿರೋದಕ್ಕೆ ಸಂತಾಪ ಸೂಚಿಸಿದರು. ತಮಿಳುನಾಡಿನ ಸಿಎಂ ಜಯಲಲಿತಾ ಒಂದು ದೊಡ್ಡ ಶಕ್ತಿ, ವ್ಯಕ್ತಿ ಯಾವತ್ತು ಶಾಶ್ವತವಲ್ಲ, ಆದರೆ, ಅವರು ಮಾಡಿದ ಒಳ್ಳೆಯ ಕಾರ್ಯಗಳೇ ಶಾಶ್ವತ ಎಂದರು.
ಜಯಲಲಿತಾ ವಿಧಿವಶರಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಂದು ದಿನ ಶೋಕಾಚರಣೆ ಆಚರಿಸಲಾಗುತಿದ್ದು, ವಿಷ್ಣು ಸ್ಮಾರಕ ಶಿಲಾನ್ಯಾಸ ವೇದಿಕೆ ಕಾರ್ಯಕ್ರಮ ರದ್ದು ಮಾಡಲಾಗಿದೆ.
ಇನ್ನು ಉದ್ದೇಶಿತ ಸ್ಥಳದಲ್ಲಿ ಹೋಮ ಮತ್ತು ಪೂಜೆ ಮಾತ್ರ ನೆರವೇರಿಸಿದ ಭಾರತಿ ವಿಷ್ಣುವರ್ಧನ್, ಇಷ್ಟರಲ್ಲೇ ಮತ್ತೆ ಕಾರ್ಯಕ್ರಮ ನಿಗದಿಯಾಗಲಿದೆ ಎಂದು ತಿಳಿಸಿದ್ದಾರೆ.