"ವಿಶ್ವನಾಥ್ ಪುಸ್ತಕ ಬ್ಲಾಕ್ ಮೇಲ್ ತಂತ್ರ" ಎಂದ ಮಾಜಿ ಸಂಸದ
ಮೈಸೂರು, ಫೆಬ್ರುವರಿ 1: ಮೈತ್ರಿ ಸರ್ಕಾರದ ಪತನದ ಕುರಿತು ಪುಸ್ತಕ ಬರೆಯುತ್ತೇನೆ ಎಂಬ ವಿಶ್ವನಾಥ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಂಸದ ಆರ್.ಧ್ರುವ ನಾರಾಯಣ್, "ನಾನು ಈಗಾಗಲೇ ಹೇಳಿದ್ದೇನೆ, ವಿಶ್ವನಾಥ್ ಹಳ್ಳಿ ಹಕ್ಕಿಯಲ್ಲ. ಅವರು ಪಕ್ಷದಿಂದ ಪಕ್ಷಕ್ಕೆ ಹಾರುವ ಹಕ್ಕಿ. ಇದೆಲ್ಲ ಅವರ ಬ್ಲಾಕ್ ಮೇಲ್ ತಂತ್ರ" ಎಂದು ವಾಗ್ದಾಳಿ ನಡೆಸಿದ್ದಾರೆ.
"ವಿಶ್ವನಾಥ್ ಅವರಿಗೆ ಪುಸ್ತಕ ಬರೆಯಲು ಯಾವುದೇ ನೈತಿಕತೆಯಿಲ್ಲ. ಇದೊಂದು ಬ್ಲಾಕ್ ಮೇಲ್ ಮಾಡುವ ತಂತ್ರ. ಕಾಂಗ್ರೆಸ್ ಪಕ್ಷ ಅವರಿಗೆ ಎಲ್ಲವನ್ನು ಕೊಟ್ಟಿತ್ತು. ಸಚಿವರನ್ನಾಗಿಯೂ ಮಾಡಿದ್ದರು. ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ ಜೆಡಿಎಸ್ ಗೆ ಹೋಗಿದ್ದರು. ಜೆಡಿಎಸ್ ಪಕ್ಷ ಕೂಡ ಶಾಸಕರಾಗಿ, ಪಕ್ಷದ ರಾಜ್ಯಾಧ್ಯಕ್ಷರಾಗಿ ಮಾಡಿದ್ದರು. ಆದರೆ ಅವರಿಗೂ ಮೋಸ ಮಾಡಿ ಬಿಜೆಪಿಗೆ ಹೋದರು. ಈಗ ಬಿಜೆಪಿಯಿಂದ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಬ್ಲಾಕ್ ಮೇಲ್ ತಂತ್ರ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.
"ನನ್ನ ಗುರಿ ಇದ್ದಿದ್ದು ಸಮ್ಮಿಶ್ರ ಸರ್ಕಾರ ಪತನ"; ಎಚ್ ವಿಶ್ವನಾಥ್
"ಬಿಜೆಪಿಯವರಿಗೂ ಯಾವುದೇ ಸಿದ್ಧಾಂತಗಳಿಲ್ಲ. ಯಡಿಯೂರಪ್ಪರವರಿಗೆ ಉತ್ತಮ ಆಡಳಿತ ನೀಡಲು ಸುವರ್ಣ ಅವಕಾಶವಿದೆ. ಆದರೆ ಬಿಜೆಪಿ ಹೈಕಮಾಂಡ್ ಅದಕ್ಕೆ ಅವಕಾಶ ನೀಡುತ್ತಿಲ್ಲ. ಸಚಿವ ಸಂಪುಟ ವಿಸ್ತರಣೆ ಮಾಡಲು ಕೂಡ ಅವರಿಗೆ ಸ್ವತಂತ್ರ ನೀಡುತ್ತಿಲ್ಲ" ಎಂದರು.
ಸಂಪುಟ ವಿಸ್ತರಣೆಯ ಹೊಸ್ತಿಲಲ್ಲಿ ವಿಶ್ವನಾಥ್ ಸಿಡಿಸಿದ ಹೊಸ ಬಾಂಬ್
ಇಂದು ಬಜೆಟ್ ಮಂಡನೆಯಾಗುತ್ತಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, "ಅಭಿವೃದ್ದಿ ಪರ ಬಜೆಟ್ ಮಂಡನೆ ಮಾಡಲು ಬಿಜೆಪಿಗೆ ಇದು ಸುವರ್ಣ ಅವಕಾಶ. ಈ ಹಿಂದೆ ನೋಟು ಬ್ಯಾನ್ ನಿಂದ ಜಿಡಿಪಿ ಕುಸಿದಿದೆ. ಸಿ.ಎ.ಎ, ಎನ್.ಆರ್.ಸಿ. ಯಂತಹ ಕಾಯ್ದೆ ಜಾರಿಗೆ ತಂದು ಗೊಂದಲ ಸೃಷ್ಟಿಸಿದ್ದಾರೆ. ಈ ಬಾರಿ ಅಭಿವೃದ್ಧಿ ಪರ ಬಜೆಟ್ ಅನ್ನು ನಿರೀಕ್ಷೆ ಮಾಡುತ್ತಿದ್ದೇವೆ" ಎಂದರು.