ವಿಷಪ್ರಸಾದ ಸೇವಿಸಿ ಇಂದಿಗೆ 7 ದಿನ: ಸುಳ್ವಾಡಿ ಜನರ ಸ್ಥಿತಿ ಹೇಗಿದೆ?
ಮೈಸೂರು, ಡಿಸೆಂಬರ್ 20 : ಸುಳ್ವಾಡಿ ಗ್ರಾಮದ ಜನರು ಮಾರಮ್ಮನ ದೇವಸ್ಥಾನದಲ್ಲಿ ವಿಷಪ್ರಸಾದ ಸೇವಿಸಿ ಇಂದಿಗೆ ಬರೋಬ್ಬರಿ 7 ದಿನಗಳು ಕಳೆದಿದೆ. ಆದರೆ ಸುತ್ತಮುತ್ತ ತಮ್ಮವರನ್ನು ಕಳೆದುಕೊಂಡವರ ಮನೆಯಲ್ಲಿ ಸೂತಕದ ಛಾಯೆ ಇನ್ನೂಇದೆ.
ಪ್ರಸಾದ ಸೇವಿಸಿ ಅಸ್ವಸ್ಥಗೊಂಡವರಲ್ಲಿ ಸುಳ್ವಾಡಿಯ ನೆರೆಹೊರೆಯ ಗ್ರಾಮದವರೇ ಹೆಚ್ಚಾಗಿದ್ದಾರೆ. ಈಗಾಗಲೇ 15 ಜನ ಮೃತಪಟ್ಟಿದ್ದು, ಮೈಸೂರು ಹಾಗೂ ತಮಿಳುನಾಡಿನ ವಿವಿಧ ಆಸ್ಪತ್ರೆಗಳಲ್ಲಿ 100ಕ್ಕೂ ಹೆಚ್ಚು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಇನ್ನೂ ಗಂಭೀರವಾಗಿರುವುದರಿಂದ ಮುಂದೆ ಏನಾಗುವುದೋ ಎನ್ನುವ ಆತಂಕದಲ್ಲೇ ಗ್ರಾಮಸ್ಥರು ದಿನ ಕಳೆಯುತ್ತಿದ್ದಾರೆ.
ಮನೆಗೆ ಆಧಾರವಾಗಿದ್ದ ತಾಯಿ, ತಂದೆ, ತಾಯಿಯನ್ನು ಕಳೆದುಕೊಂಡು ಅನಾಥವಾದ ಮಕ್ಕಳು, ಜನ್ಮದಿನದಂದೇ ಮೃತಪಟ್ಟ ಮುಗ್ಧ ಬಾಲಕ, ಹರಕೆ ತೀರಿಸಲು ಹೋಗಿ ಹೆಣವಾದ ತಂದೆ. ಹೀಗೆ ಮೃತಪಟ್ಟವರ ಒಂದೊಂದು ಕುಟುಂಬದ ಕಥೆಯೂ ಕರಳು ಹಿಂಡುವಂತದ್ದು. ಅಲ್ಲದೇ, ಇದುವರೆಗೆ ಮೃತಪಟ್ಟಿರುವರಲ್ಲಿ ಪರಿಶಿಷ್ಟ ಜಾತಿಗೆ ಸೇರಿರುವವರೇ ಅಧಿಕವಾಗಿದ್ದಾರೆ.
ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ ದ್ವೇಷಕ್ಕೆ 15 ಅಮಾಯಕ ಜೀವ ಬಲಿ
ಅಕ್ಕಪಕ್ಕದ 23ಕ್ಕೂ ಹೆಚ್ಚು ಗ್ರಾಮಗಳ ಜನರು ಈ ದೇವಾಲಯಲ್ಲಿ ಪ್ರಸಾದ ಸೇವಿಸಿದ್ದರು. ಅವರಲ್ಲಿ ಪ್ರಸಾದ ಸೇವಿಸಿದವರ ಪೈಕಿ ಬಿದರಹಳ್ಳಿ ಗ್ರಾಮದವರೇ ಅಧಿಕವಾಗಿದ್ದು, ಈಗಾಗಲೇ ಇದೇ ಗ್ರಾಮದ ನಾಲ್ಕು ಜನರು ಮೃತಪಟ್ಟಿರುವುದು ಗ್ರಾಮದ ಜನತೆಯನ್ನು ತಲ್ಲಣಗೊಳಿಸಿದೆ.
ಮೈಸೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ
ಎಂ.ಜಿ ದೊಡ್ಡಿ ಗ್ರಾಮದ 25 ಜನರು ಪ್ರಸಾದ ಸೇವಿಸಿದ್ದು, ಅವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಲೆಮಹದೇಶ್ವರ ಬೆಟ್ಟದ ಹಳೆಯೂರು, ಕೊಕ್ಬರೆ, ದೊಡ್ಡಾಣೆ, ನೆರೆಯ ವಡ್ಡರದೊಡ್ಡಿ, ತಾಂಡಾಮೇಡು, ದೊರೆಸ್ವಾಮಿ ಮೇಡು, ಮಾರ್ಟಳ್ಳಿ, ಹಳೇ ಮಾರ್ಟಳ್ಳಿ ಸುಳ್ವಾಡಿ, ಪೊನ್ನಾಚಿ, ದಿನ್ನಳ್ಳಿ, ದೊಡ್ಡಿಂದುವಾಡಿ, ನಾಲರೋಡ್, ಎಲ್ಲೇಮಾಳ ಕೆಂಪಯ್ಯನಹಟ್ಟಿ, ತೋಮಿಯಾರ್ ಪಾಳ್ಯ ಮುಂತಾದ ಗ್ರಾಮಗಳ ಸುಮಾರು 40ಕ್ಕೂ ಹೆಚ್ಚು ಜನರು ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಸಾದಕ್ಕೆ ವಿಷ ಬೆರೆಸಿದ ಆರೋಪಿಗಳನ್ನು ಪೊಲೀಸರು ಹಿಡಿದ ರೋಚಕ ಕತೆ
ಮಕ್ಕಳು ಬೀದಿ ಪಾಲಾಗಿದ್ದಾರೆ
ದೇವಸ್ಥಾನದ ಪ್ರಸಾದವೇ ವಿಷವಾದರೆ ನಾವು ಯಾರನ್ನು ನಂಬುವುದು, ಏನನ್ನು ತಿನ್ನುವುದು ಎಂಬ ಪ್ರಶ್ನೆ ಮೂಡಿದೆ. ತನ್ನವರನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ಗೋಳು ಈ ಗ್ರಾಮಗಳಲ್ಲಿ ಮುಗಿಲು ಮುಟ್ಟಿದೆ. ಸರ್ಕಾರ ಮೃತರ ಕುಟುಂಬಗಳಿಗೆ ಪರಿಹಾರವನ್ನೇನೋ ವಿತರಿಸಿದೆ. ಆದರೆ ಕುಟುಂಬಕ್ಕೆ ಆಧಾರವಾಗಿ ಸಂಸಾರ ನಿಭಾಯಿಸುತ್ತಿದ್ದ ತಂದೆ ತಾಯಿಗಳಿಗಳಲ್ಲಿದೇ ಮಕ್ಕಳು ಬೀದಿ ಪಾಲಾಗಿದ್ದಾರೆ. ಮುಂದೆ ನಮ್ಮ ಜೀವನ ಹೇಗೆ ಎಂಬ ಆತಂಕ ಮೃತ ಕುಟುಂಬದ ಮಕ್ಕಳಲ್ಲಿ ಮನೆ ಮಾಡಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸಂತ್ರಸ್ಥರ ಕುಟುಂಬವರ್ಗದ ಜನರು.
ವಿಷಪ್ರಸಾದ ಪ್ರಕರಣದ ಸಂಪೂರ್ಣ ಮಾಹಿತಿ: ಇದು ಮೂವರ ದ್ವೇಷದ ಕತೆ
ಬಿದರಹಳ್ಳಿಯಲ್ಲಿ ಗಂಜಿ ಕೇಂದ್ರ
ಮೃತಪಟ್ಟ ಕುಟುಂಬಗಳಿಗೆ ಉಪಹಾರ ನೀಡುವ ಸಲುವಾಗಿ ಬಿದರಹಳ್ಳಿ ಗ್ರಾಮದಲ್ಲಿ ಸ್ಥಳೀಯರು ಗಂಜಿ ಕೇಂದ್ರ ತೆರೆದಿದ್ದಾರೆ. ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಎರಡು ದಿನಗಳಿಂದ ಮನೆಯೊಂದರಲ್ಲಿ ಆಹಾರ ತಯಾರಿಸಿ ಮೃತಪಟ್ಟವರ ಮನೆಗಳಿಗೆ ಸರಬರಾಜು ಮಾಡುತ್ತಿದ್ದಾರೆ.
ಜಿಲ್ಲಾಡಳಿತದಿಂದ ಪ್ರೋತ್ಸಾಹ
ಇದೆಲ್ಲದರ ಜೊತೆಗೆ ಮಲೆಮಹದೇಶ್ವರ ಬೆಟ್ಟದ ಅರ್ಚಕ ಕೆ.ವಿ. ಮಾದೇಶ್ ನೇತೃತ್ವದ ತಂಡವೂ ಗಂಜಿ ಕೇಂದ್ರಕ್ಕೆ ಆಹಾರ ಪದಾರ್ಥ ಪೂರೈಸುತ್ತಿದೆ. ಇದಕ್ಕೆ ಜಿಲ್ಲಾಡಳಿತವೂ ಪ್ರೋತ್ಸಾಹ ನೀಡುತ್ತಿರುವುದು ಪ್ರಶಂಸನಾರ್ಹ.