ಗ್ರಾಮ ವ್ಯಾಸ್ತವ್ಯಕ್ಕೆ ಅರ್ಥ ನೀಡಿದ ಮಹೇಶ್ಗೆ ಶಭಾಶ್!
ಮೈಸೂರು, ಜುಲೈ 15 : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪ್ರೇರಣೆಯಿಂದ ಹಲವರು ಗ್ರಾಮ ವಾಸ್ತವ್ಯ ಹೂಡಿದ್ದಾರೆ. ಕೆಲವರದು ಪ್ರಚಾರಕ್ಕಷ್ಟೇ ಸೀಮಿತವಾಗಿ ನೀಡಿದ ಭರವಸೆಯನ್ನು ಮರೆತಿದ್ದಾರೆ. ಆದರೆ ಇವರ ನಡುವೆ ಬಡ ಮುಸ್ಲಿಂ ಕುಟುಂಬದ ಗುಡಿಸಿಲಲ್ಲಿ ವಾಸ್ತವ್ಯ ಹೂಡಿದ ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಗ್ರಾಮ ವಾಸ್ತವ್ಯಕ್ಕೊಂದು ಗೌರವ ತಂದಿದ್ದಾರೆ.
2012 ಆಗಸ್ಟ್ 10ರಂದು ತಮ್ಮ ಹುಟ್ಟುಹಬ್ಬದ ಸಂದರ್ಭ ಸಾ.ರಾ. ಮಹೇಶ್ ಅವರು ಕೆ.ಆರ್.ನಗರ ತಾಲೂಕಿನ ಗಡಿಗ್ರಾಮ ಎರೆಮನುಗನಹಳ್ಳಿಯ ಅಬ್ಬಾಸ್ ಖಾನ್ ಮತ್ತು ಖತೀಜಾಬೀ ದಂಪತಿಯ ಮುರುಕಲು ಗುಡಿಸಲಲ್ಲಿ ಗ್ರಾಮವಾಸ್ತವ್ಯ ಮಾಡಿದ್ದರು.
ಅವತ್ತು ಆ ದಂಪತಿಗಳಿಗೆ ಒಂದು ಸುಸಜ್ಜಿತ ಪುಟ್ಟ ಮನೆಯೊಂದನ್ನು ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಅದರಂತೆ ತಮ್ಮ ಗ್ರಾಮ ವಾಸ್ತವ್ಯಕ್ಕೆ ಅವಕಾಶ ನೀಡಿದ ಅಬ್ಬಾಸ್ ಖಾನ್ ಕುಟುಂಬಕ್ಕೆ ಸುಮಾರು 1.5 ಲಕ್ಷ ರು.ಗಳ ಸ್ವಂತ ವೆಚ್ಚದಿಂದ ಮನೆ ನಿರ್ಮಿಸಿಕೊಡುವ ಮೂಲಕ ನೀಡಿದ ಭರವಸೆ ಈಡೇರಿಸಿದ್ದಾರೆ. [ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಲಿ - ಸ್ವಾಮೀಜಿ]
ವಾಸ್ತವ್ಯದ ಸಂದರ್ಭ ಅವರ ಮನೆ ಸಂಪೂರ್ಣವಾಗಿ ಶಿಥಿಲಗೊಂಡಿತ್ತು. ಆಗ ತಾವು ವೈಯಕ್ತಿಕ ಆರ್ಥಿಕ ಅನುದಾನ ನೀಡುವ ಬಗ್ಗೆ ಹೇಳಿದ್ದರಲ್ಲದೆ, ಅದೇ ಗ್ರಾಮದ ಗುತ್ತಿಗೆದಾರ ತನ್ವೀರ್ ಎಂಬುವರಿಗೆ ಮನೆ ನಿರ್ಮಿಸಲು ಸೂಚನೆ ನೀಡಿದ್ದರು. ಅದರಂತೆ ಮನೆ ನಿರ್ಮಾಣ ಮಾಡಿಕೊಡಲಾಗಿದೆ. ಮನೆಯನ್ನು ಸ್ವತಃ ಶಾಸಕರೇ ಉದ್ಘಾಟನೆ ಮಾಡಿದರು. [ರಾಜಕಾರಣಿಯ ಗ್ರಾಮ ವಾಸ್ತವ್ಯದ ಗುಟ್ಟು]
ಅಬ್ಬಾಸ್ ಖಾನ್ ಅವರಿಗೆ ಸುಮಾರು 70 ವರ್ಷ ವಯಸ್ಸಾಗಿದ್ದು, ವಿಕಲಚೇತನರಾಗಿದ್ದಾರೆ. ಇವರಿಗೆ ಇರುವ 4 ಮಕ್ಕಳು ಊರು ಬಿಟ್ಟು ಹಲವು ವರ್ಷಗಳೇ ಕಳೆದಿದ್ದು, ದೂರದ ಊರುಗಳಲ್ಲಿ ನೆಲೆಸಿದ್ದಾರೆ. ಮತ್ತು ಹೆತ್ತವರ ಬಗ್ಗೆ ಕಾಳಜಿ ವಹಿಸುತ್ತಿಲ್ಲವಂತೆ. ಹೀಗಾಗಿ ವೃದ್ಧಾಪ್ಯದ ಕಾಲದಲ್ಲಿ ನೆಮ್ಮದಿಯಾಗಿ ಕಾಲ ಕಳೆಯಲು ಸೂರು ಸಿಕ್ಕಿದ್ದಕ್ಕೆ ಸಂತಸ ಪಡುತ್ತಿದ್ದಾರೆ ವೃದ್ಧ ದಂಪತಿ. [ರಾಹುಲ್ ಗಾಂಧಿ ಪಿಎಂ ಆಗ್ಬೇಕು : ಎಸ್ ಎಂ ಕೃಷ್ಣ]