'ಸಿಎಂ ಗ್ರಾಮ ವಾಸ್ತವ್ಯದ ಕ್ರೆಡಿಟ್ ಜೆಡಿಎಸ್ಗೆ ಅಲ್ಲ, ಮೈತ್ರಿ ಸರ್ಕಾರಕ್ಕೆ ಸಲ್ಲುತ್ತೆ'
ಮೈಸೂರು, ಜೂನ್ 24: ಮುಖ್ಯಮಂತ್ರಿ ಗ್ರಾಮ ವಾಸ್ತವ್ಯದ ಕ್ರೆಡಿಟ್ ಕೇವಲ ಜೆಡಿಎಸ್ಗೆ ಮಾತ್ರವಲ್ಲ ಅದು ಮೈತ್ರಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಹೇಳಿದ್ದಾರೆ.
ಸೋಮವಾರ ಮೈಸೂರಿನ ಸುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ, ಕುಮಾರಸ್ವಾಮಿಯವರು ಕೇವಲ ಜೆಡಿಎಸ್ಗೆ ಮಾತ್ರ ಮುಖ್ಯಮಂತ್ರಿಯಲ್ಲ ಅವರು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ. ಅವರು ಮುಖ್ಯಮಂತ್ರಿಯಾಗಿದ್ದುಕೊಂಡು ಮಾಡುವ ಕೆಲಸದ ಎಲ್ಲಾ ಕ್ರೆಡಿಟ್ ಮೈತ್ರಿ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.
ಗ್ರಾಮ ವಾಸ್ತವ್ಯ:ಬೆಂಗಳೂರಿಂದ ಯಾದಗಿರಿಗೆ ರೈಲು ಹತ್ತಿದ ಕುಮಾರಸ್ವಾಮಿ
ನಾನೂ ಗ್ರಾಮ ವಾಸ್ತವ್ಯ ಮಾಡಲು ನಿರ್ಧರಿಸಿದ್ದೇನೆ ಆದರೆ ಯಾವಾಗಿನಿಂದ ಆರಂಭ ಮಾಡುತ್ತೇನೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಮಾಹಿತಿ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ವಿರೋಧ ಪಕ್ಷದವರು ಎಲ್ಲವನ್ನೂ ಟೀಕೆ ಮಾಡುತ್ತಾರೆ. ಗ್ರಾಮ ವಾಸ್ತವ್ಯದಂಥ ವಿಚಾರವನ್ನು ಟೀಕೆ ಮಾಡುವುದು ಸರಿಯಲ್ಲ.ಒಬ್ಬ ಮುಖ್ಯಮಂತ್ರಿ ಗ್ರಾಮದಲ್ಲಿ ವಾಸ್ತವ್ಯ ಮಾಡುವುದರಿಂದ ಗ್ರಾಮದ ಅಭಿವೃದ್ಧಿಯೂ ಕೂಡ ಆಗುತ್ತದೆ.
ಒಂದು ಊರಿಗೆ ಸಿಎಂ ಬರುತ್ತಾರೆ ಅಂದ್ರೆ ಆ ಊರಿನ ರಸ್ತೆಗಳೆಲ್ಲ ಅಭಿವೃದ್ಧಿ ಆಗುತ್ತಿದ್ದನ್ನು ಕಂಡಿದ್ದೇವೆ.ಈಗ ಅದು ಕಡಿಮೆಯಾಗಿದೆ. ಆದ್ರೆ ಇದು ಒಂದು ಒಳ್ಳೆಯ ಯೋಜನೆ. ಇದನ್ನು ಟೀಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು.