ಕೊರೊನಾ ವಾರಿಯರ್ಸ್ ಸೇವೆಗೆ ವಿಕ್ರಮ್ ಜೇಷ್ಟ ಆಸ್ಪತ್ರೆ ಮೀಸಲು
ಮೈಸೂರು, ಜುಲೈ 22: ಕೊರೊನಾ ಸೋಂಕಿನ ವಿರುದ್ಧ ಹೋರಾಟದಲ್ಲಿ ಹಗಲಿರುಳೂ ದುಡಿಯುತ್ತಿರುವ ಕೊರೊನಾ ವಾರಿಯರ್ಸ್ ಗಳ ಆರೋಗ್ಯ ಕಾಪಾಡಲು ಇಲ್ಲಿನ ವಿಕ್ರಮ್ ಜೇಷ್ಟ ಆಸ್ಪತ್ರೆ ಸಜ್ಜಾಗಿದೆ.
ಇಂದಿನಿಂದ ಕೊರೊನಾ ಫ್ರೆಂಟ್ ಲೈನ್ ನಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆ ಸಜ್ಜುಗೊಂಡಿದೆ. ಪೌರಕರ್ಮಿಕರು, ವೈದ್ಯರು, ನರ್ಸ್ ಗಳು, ಪೊಲೀಸ್ ಸಿಬ್ಬಂದಿಗಾಗಿ ಈ ಪ್ರತ್ಯೇಕ ಆಸ್ಪತ್ರೆಯನ್ನು ಸಿದ್ಧಪಡಿಸಲಾಗಿದೆ. 97 ಬೆಡ್ ವ್ಯವಸ್ಥೆ ಇರುವ ಈ ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಆಕ್ಸಿಜನ್, ಹಾಸಿಗೆ, ಪಿಪಿಇ ಕಿಟ್ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ.
ಮೈಸೂರಿನಲ್ಲಿ ಸಾವಿರದ ಗಡಿ ದಾಟಿದ ಸಕ್ರಿಯ ಸೋಂಕಿನ ಪ್ರಕರಣ
ಆಸ್ಪತ್ರೆಗೆ ನರ್ಸ್ ವ್ಯವಸ್ಥೆ ಮತ್ತು ಆಸ್ಪತ್ರೆಯ ಸಿಬ್ಬಂದಿ ವ್ಯವಸ್ಥೆಯನ್ನು ಮೈಸೂರು ಅಸೋಸಿಯೇಶನ್ ಆಫ್ ಹಾಸ್ಪಿಟಲ್ಸ್, ನರ್ಸಿಂಗ್ ಹೋಮ್ಸ್ ಕ್ಲಿನಿಕ್ ಅಂಡ್ ಡಯಾಗ್ನಸ್ಟಿಕ್ ಸೆಂಟರ್ಸ್ ಮಾಡಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ, "ಇಂದು ವಿಕ್ರಂ ಆಸ್ಪತ್ರೆಯನ್ನು ಕೊರೊನಾ ವಾರಿಯರ್ಸ್ ಸೇವೆಗೆ ನೀಡಲಾಗಿದೆ. ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಮುಂಚೂಣಿ ಕೆಲಸಗಾರರಿಗೆ ಸೋಂಕು ತಗುಲಿದರೆ ಅವರಿಗೆ ಚಿಕಿತ್ಸೆ ನೀಡಲು ಎಲ್ಲ ರೀತಿಯ ಸೌಲಭ್ಯವನ್ನೂ ಕಲ್ಪಿಸಿಕೊಡಲಾಗಿದೆ" ಎಂದರು.
ಜನರಿಗೆ ಕೆಲಸಕ್ಕೆ ತೊಂದರೆಯಾಗಬಾರದೆಂದು ಈಗ ಚಿಕ್ಕ ಚಿಕ್ಕ ಕಂಟೈನ್ ಮೆಂಟ್ ಜೋನ್ ಮಾಡಲಾಗುತ್ತಿದೆ. ಜಿಲ್ಲೆಯ ಪ್ರತೀ ತಾಲ್ಲೂಕಿನಲ್ಲೂ ಕೋವಿಡ್ ಕೇರ್ ಸೆಂಟರ್ ಇದೆ. ಟೆಸ್ಟಿಂಗ್ ಫೆಸಿಲಿಟಿ ಇದೆ. ಜನರು ಮೈಸೂರಿಗೆ ಬರುವ ಅವಶ್ಯಕತೆ ಇಲ್ಲ, ಅಲ್ಲೆ ಟೆಸ್ಟ್ ಮಾಡಿಸಿಕೊಳ್ಳಬಹುದು. ಸ್ವಾಬ್, ರಾಪಿಡ್ ಟೆಸ್ಟ್ ಕೂಡ ಅಲ್ಲಿ ಲಭ್ಯವಿರುತ್ತದೆ ಎಂದು ತಿಳಿಸಿದರು.
ಇಂದು ಮೈಸೂರು ಜಿಲ್ಲೆಯಲ್ಲಿ 135 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 1908ಕ್ಕೇರಿದೆ. ಇಂದು 49 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಬಿಡುಗಡೆಯಾದವರ ಸಂಖ್ಯೆ 674ಕ್ಕೇರಿದೆ. ಒಟ್ಟು 1154 ಸಕ್ರಿಯ ಪ್ರಕರಣಗಳಿದ್ದು, ಇಂದು ಕೂಡ ಐದು ಮಂದಿ ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ 80ಕ್ಕೇರಿದೆ.