ವಿಜಯದಶಮಿ; ಅರಮನೆಯಲ್ಲಿ ಸಂಪನ್ನವಾದ ಶರನ್ನವರಾತ್ರಿ ಪೂಜೆ
ಮೈಸೂರು, ಅಕ್ಟೋಬರ್ 26: ಶರನ್ನವರಾತ್ರಿಯ 10ನೇ ದಿನ ಅರಮನೆಯಲ್ಲಿ ವಿಜಯ ದಶಮಿಯನ್ನು ವಿಜಯಯಾತ್ರೆ ಮೂಲಕ ಯದುವೀರ್ ನೆರವೇರಿಸಿದ್ದು, ಶರನ್ನವರಾತ್ರಿಯ ಉತ್ಸವವು ಮುಕ್ತಾಯವಾಯಿತು.
ಬೆಳಗ್ಗೆ 9:30ಕ್ಕೆ ಪಟ್ಟದ ಕುದುರೆ, ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಒಂಟೆ ಆನೆ ಬಾಗಿಲಿಗೆ ಬಂದು ಪೂಜೆ ನಡೆಯಿತು. ಬೆಳಗ್ಗೆ 9:45ಕ್ಕೆ ಉತ್ತರ ಪೂಜೆಯಲ್ಲಿ ಆಯುಧಗಳಿಗೆ ಕಲ್ಯಾಣ ಮಂಟಪದಲ್ಲಿ ಪೂಜೆ ಸಲ್ಲಿಸಿ ನಂತರ 10:20ಕ್ಕೆ ರಾಜರ ಆಯುಧಗಳಿಗೆ ಪೂಜೆ ನಡೆಯಿತು. ಭುವನೇಶ್ವರಿ ದೇವಾಲಯದ ಬಳಿ ಆಯುಧಗಳನ್ನು ವಿಜಯ ಯಾತ್ರೆಯ ಮೂಲಕ ತಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಮಿ ಮರದ ಪೂಜೆ ನೆರವೇರಿಸಿದರು.
ರಾಜರ ಕಾಲದ ದಸರಾ ಜಂಬೂ ಸವಾರಿ ಹೇಗೆ ನಡೆಯುತ್ತಿತ್ತು?
ಶಮಿ ಪೂಜೆ ಮುಗಿದ ನಂತರ ಕನ್ನಡಿ ತೊಟ್ಟಿಯಲ್ಲಿರುವ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ವಿಜಯ ದಶಮಿ ಆಚರಿಸಿದರು. ಆ ಮೂಲಕ ವಿಜಯ ದಶಮಿ ದಿನ ರಾಜಮನೆತನದಲ್ಲಿ ನಡೆಯುವ ವಿಜಯ ದಶಮಿಯ ಪೂಜಾ ಕಾರ್ಯಕ್ರಮಗಳು ಅಂತ್ಯಗೊಂಡವು.
ಇದೇ ಸಂದರ್ಭ, ಸಾಂಪ್ರದಾಯಿಕ ಬನ್ನಿ ಪೂಜೆ ಮಹತ್ವದ ಬಗ್ಗೆ ಮಹಾರಾಜ ಯದುವೀರ್ ವಿವರಣೆ ನೀಡಿದರು. ವಿಜಯ ಯಾತ್ರೆ ಬನ್ನಿ ಪೂಜೆ ಬಗ್ಗೆ ಮಹಾಭಾರತ ತಿಳಿದವರಿಗೆ ಗೊತ್ತಿರುತ್ತದೆ. ಅರ್ಜುನ ಯುದ್ಧಕ್ಕೆ ಹೊರಡುವ ಮುನ್ನ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಹೋಗುತ್ತಾನೆ. ಅದೇ ರೀತಿ ಸಂಪ್ರದಾಯ ಮುಂದುವರಿದು ಸಮಾಪ್ತಿಯಾಗಿದೆ ಎಂದರು.