ಕಾಂಗ್ರೆಸ್ ನಾಯಕರ ವಿಡಿಯೋಗಳು ಪ್ರೀ ವೆಡ್ಡಿಂಗ್ ಶೂಟ್ ರೀತಿಯಲ್ಲಿದೆ; ಎಚ್ಡಿಕೆ
ಮೈಸೂರು, ಜನವರಿ 3: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪಾದಯಾತ್ರೆ ಬಗ್ಗೆ ಲೇವಡಿ ಮಾಡಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, "ಕಾಂಗ್ರೆಸ್ ನಾಯಕರ ಕೆಲವು ವಿಡಿಯೋಗಳನ್ನು ನೋಡಿದರೆ ಅದು ಮದುವೆಗೂ ಮುನ್ನ ಗಂಡು- ಹೆಣ್ಣು ಮಾಡಿಸುವ ಪ್ರೀ ವೆಡ್ಡಿಂಗ್ ಶೂಟ್ ರೀತಿಯಲ್ಲಿದೆ," ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ಡಿಕೆ, "ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡಿಸಿದವನು ನಾನು. ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಡಿಪಿಆರ್ ಸಲ್ಲಿಸಿ ಅನುಮೋದನೆ ಪಡೆದವನು ನಾನು. ಆಗ ನೀವು ನನ್ನೊಟ್ಟಿಗೆ ದೆಹಲಿಗೆ ಬಂದಿದ್ರಾ?," ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು.
ಕೇವಲ ರಾಜಕೀಯ ಲಾಭಕ್ಕಾಗಿ ಮೇಕೆದಾಟು ಪಾದಯಾತ್ರೆ ಹೊರಟ್ಟಿದ್ದೀರಿ. ನಾನು ನಿಮ್ಮ ವಿಡಿಯೋಗಳನ್ನು ನೋಡಿದ್ದೇನೆ. ಅದು ಮದುವೆಗೂ ಮುನ್ನ ಗಂಡು- ಹೆಣ್ಣು ಮಾಡಿಸುವ ಪ್ರೀ ವೆಡ್ಡಿಂಗ್ ಶೂಟ್ ಇದ್ದಂತಿದೆ ಎಂದು ಮಾಜಿ ಸಿಎಂ ಎಚ್ಡಿಕೆ ಲೇವಡಿ ಮಾಡಿದರು.
ಅಲ್ಲದೇ ಇವರ ಪಾದಯಾತ್ರೆಗೆ ಚಾಮರಾಜನಗರದಿಂದ ಕಬ್ಬಿನ ಜ್ಯೂಸ್ ಬರಬೇಕಂತೆ, ಜೊತೆಗೆ ಭಾಗವಹಿಸಿದವರಿಗೆ ಸರ್ಟಿಫಿಕೇಟ್ ಕೊಡ್ತಾರಂತೆ. ಆದರೆ ರಾಜ್ಯದ ಜನರು ನಿಮ್ಮ ಹೈಟೆಕ್ ಪಾದಯಾತ್ರೆಯನ್ನು ಜನರು ಗಮನಿಸುತ್ತಿದ್ದಾರೆ ಎಂದ ಕುಮಾರಸ್ವಾಮಿ, ಕೇಂದ್ರ ಹಾಗೂ ರಾಜ್ಯದಲ್ಲೀಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ನಮ್ಮ ಪಾದಯಾತ್ರೆಯಿಂದ ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಅನುಮೋದನೆ ನೀಡಿತು ಎಂದು ತೋರಿಸಿಕೊಳ್ಳಲು ಕಾಂಗ್ರೆಸ್ ಪಾದಯಾತ್ರೆ ಕೈಗೊಂಡಿದೆ. ಆದರೆ ಇವರ ಈ ಪಾದಯಾತ್ರೆಯಿಂದ ಆಗುವ ಕೆಲಸವೂ ಆಗಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.
ಇದೇ ವೇಳೆ 'ಬಾನಿಗೊಂದು ಎಲ್ಲೆ ಎಲ್ಲಿದೆ' ಎಂಬ ಹಾಡಿನ ಮೂಲಕ ಡಿ.ಕೆ. ಶಿವಕುಮಾರ್ಗೆ ಟಾಂಗ್ ಕೊಟ್ಟ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಇದೆ. ಈಗಾಗಲೇ ನಾವು ಗೆದ್ದೇ ಬಿಟ್ಟಿದ್ದೇವೆ. ಆ ಬಿಲ್ ತೆಗೆಯುತ್ತೇವೆ, ಈ ಬಿಲ್ ತೆಗೆಯುತ್ತೇವೆ ಅಂತ ಹೇಳುತ್ತಿದ್ದಾರೆ. ಚುನಾವಣೆಗೆ ಇನ್ನೂ ಟೈಮ್ ಇದೆ, ಯಾಕಿಷ್ಟು ಆತುರ? ಮೇಕೆದಾಟು ಪಾದಯಾತ್ರೆಯಂತಹ ನೂರು ಯಾತ್ರೆ ಮಾಡಲಿ. ನನಗೇನೂ ಆತಂಕ ಇಲ್ಲ. ಆದರೆ ಓಮಿಕ್ರಾನ್ನಂತಹ ಪರಿಸ್ಥಿತಿಯಲ್ಲಿ ಇದೆಲ್ಲ ಬೇಕಿತ್ತಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನವರು ಪಾದಯಾತ್ರೆ ಸಕ್ಸಸ್ ಮಾಡ್ತಾರೋ, ಸರ್ಕಾರದವರು ತಡೀತಾರೋ ಗೊತ್ತಿಲ್ಲ. ಇದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಬಿಟ್ಟ ವಿಚಾರ. ಆದರೆ ಜನ ಸಾಮಾನ್ಯರ ಬಗ್ಗೆ ಕಾಳಜಿ ತೋರಿಸಿ, ನಿಮ್ಮ ಪ್ರತಿಷ್ಠೆಗಳಿಗೆ ಜನರನ್ನು ಬಲಿ ಕೊಡಬೇಡಿ ಎಂದು ಬಿಜೆಪಿ, ಕಾಂಗ್ರೆಸ್ ನಾಯಕರಿಗೆ ಎಚ್ಡಿಕೆ ಕಿವಿಮಾತು ಹೇಳಿದರು.
ಇನ್ನು ಟೀಕೆಗಳನ್ನು ಜೀರ್ಣಿಸಿಕೊಳ್ಳುತ್ತೇವೆ ಎಂಬ ಡಿಕಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಬಂಡೆಗಳನ್ನೇ ಜೀರ್ಣಿಸಿಕೊಂಡವರಿಗೆ ಟೀಕೆಗಳನ್ನು ಜೀರ್ಣಿಸಿಕೊಳ್ಳುವುದು ಯಾವ ಲೆಕ್ಕ, ನೀವು ರಾಮನಗರ ಜಿಲ್ಲೆಯ ಕಲ್ಲು ಬಂಡೆಗಳನ್ನೇ ಜೀರ್ಣಿಸಿಕೊಂಡವರು ಎಂದು ಟಾಂಗ್ ನೀಡಿದರು.
ಅಂತೆಯೇ ರಾಮನಗರ ಜಿಲ್ಲೆ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಡಿ.ಕೆ. ಸುರೇಶ್- ಸಚಿವ ಅಶ್ವತ್ಥ ನಾರಾಯಣ ಕಿತ್ತಾಟ ವಿಚಾರದ ಕುರಿತು ಮಾತನಾಡಿದ ಅವರು, ರಾಮನಗರ ಜಿಲ್ಲೆ ಮಾಡಿದವನು, ಜಿಲ್ಲೆಯ ಅಭಿವೃದ್ಧಿ ಮಾಡಿದವನು ನಾನು ಇಲ್ಲಿದ್ದೀನಿ, ಅವರು ವೇದಿಕೆ ಮೇಲೆ ಕಿತ್ತಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ 2016ರಲ್ಲಿ ರಾಜೀವ್ ಗಾಂಧಿ ಹೆಲ್ತ್ ಯೂನಿವರ್ಸಿಟಿ ಅನುಮೋದನೆ ಮಾಡಿದ್ದೆ. ರಾಮನಗರ ಜಿಲ್ಲೆಗೆ ನರ್ಸಿಂಗ್ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದೆ. 360 ಕೋಟಿ ರೂ. ಅನುದಾನವನ್ನೂ ಬಿಡುಗಡೆ ಮಾಡಿದ್ದೆ. ಆದರೆ ನಮ್ಮ ಸರ್ಕಾರ ಇಳಿಯುತ್ತಿದ್ದಂತೆಯೇ ಎಲ್ಲವನ್ನೂ ನಿಲ್ಲಿಸಿಬಿಟ್ಟರು. 8 ವರ್ಷ ಬಿಜೆಪಿ ಸರ್ಕಾರ ಅಧಿಕಾರ ಮಾಡಿದೆ, 5 ವರ್ಷ ಕಾಂಗ್ರೆಸ್ ಸರ್ಕಾರ ಇತ್ತು. ಅವರಿಬ್ಬರೂ ಏನು ಮಾಡಿದರು? ನಾನು ಅನುಮೋದನೆ ಮಾಡಿದ್ದ ಆಸ್ಪತ್ರೆ ಕಟ್ಟಿಸಿದ್ದರೆ ಕೋವಿಡ್ ಸಂದರ್ಭದಲ್ಲಿ ಎಷ್ಟು ಪ್ರಾಣ ಉಳಿಸಬಹುದಿತ್ತು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.