ವಿಡಿಯೋ; ನನ್ನ ಸೋಲಿಸಿ ಬಿಟ್ಟು ಇಲ್ಲಿ ಬಂದಿದ್ದೀರಿ; ಸಿದ್ದರಾಮಯ್ಯ ಗರಂ
ಮೈಸೂರು, ನವೆಂಬರ್ 19; ಅದೇಕೋ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಹತಾಶೆ ಇಂದಿಗೂ ಕಡಿಮೆಯಾದಂತೆ ಕಾಣುತ್ತಿಲ್ಲ. ಪ್ರತಿಬಾರಿ ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಬಗ್ಗೆ ಮಾತನಾಡುವಾಗಲೂ ತಮ್ಮ ಆಕ್ರೋಶ ವ್ಯಕ್ತಪಡಿಸುವ ಅವರು, ಮತ್ತೊಮ್ಮೆ ತಮ್ಮ ಹತಾಶೆ ಹೊರ ಹಾಕಿದರು.
ವಿಧಾನ ಪರಿಷತ್ ಚುನಾವಣಾ ಕಣ ದಿನ ಕಳೆದಂತೆ ರಂಗೇರುತ್ತಿದೆ. ಚುನಾವಣೆ ಹತ್ತಿರ ಆಗುತ್ತಿದ್ದಂತೆ ಆಕಾಂಕ್ಷಿಗಳ ಎದೆಯಲ್ಲಿ ಡವ ಡವ ಶುರುವಾಗಿದೆ. ಇದೆಲ್ಲದರ ನಡುವೆ ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ ಮುಂದೆ ಟಿಕೆಟ್ಗಾಗಿ ತೀವ್ರ ಒತ್ತಡ ಹೇರಲಾಗಿದೆ.
ಶುಕ್ರವಾರ ಮೈಸೂರಿನ ಸಿದ್ದರಾಮಯ್ಯ ನಿವಾಸದ ಎದುರು ಹೈಡ್ರಾಮಾ ನಡೆದಿದೆ. ವಿಧಾನ ಪರಿಷತ್ ಚುನಾವಣೆ ಕಾವು ಸರಿಯಾಗಿಯೇ ಸಿದ್ದರಾಮಯ್ಯಗೆ ತಟ್ಟಿತು. ನಿವಾಸದ ಮುಂಭಾಗ ಜಮಾಯಿಸಿದ ಸಿದ್ದರಾಮಯ್ಯ ಆಪ್ತ ಮರಿಗೌಡ ಬೆಂಬಲಿಗರು ಮರಿಗೌಡಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದರು.
ಅಲ್ಲದೆ ಹಾಲಿ ಪರಿಷತ್ ಸದಸ್ಯರಾಗಿರುವ ಧರ್ಮಸೇನಾರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡದಂತೆ ಒತ್ತಾಯಿಸಿದರು. ಈ ಬಾರಿ ಮರಿಗೌಡರಿಗೆ ಟಿಕೆಟ್ ಕೊಡಬೇಕು ಕಾರ್ಯಕರ್ತರ ಮಾತಿಗೆ ಮಣೆ ಹಾಕುವಂತೆ ಸಿದ್ದರಾಮಯ್ಯ ಎದುರು ಕಾರ್ಯಕರ್ತರು ಘೋಷಣೆ ಕೂಗಿದರು.
ಸಿದ್ದರಾಮಯ್ಯ ಗರಂ; ಹೆಜ್ಜೆ ಹೆಜ್ಜೆಗೂ ಸಿದ್ದರಾಮಯ್ಯಗೆ 2018ರ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಸೋಲು ಕಾಡುತ್ತಿದೆ ಅನ್ನೋದು ಮತ್ತೊಮ್ಮೆ ಸಾಬೀತಾಯಿತು. ಶುಕ್ರವಾರ ನಿವಾಸಕ್ಕೆ ಆಗಮಿಸಿದ ಕಾರ್ಯಕರ್ತರು ಮರಿಗೌಡಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದರು.
ಸಿದ್ದರಾಮಯ್ಯ ಕಾರನ್ನು ಅಡ್ಡಗಟ್ಟಿ ಘೋಷಣೆ ಕೂಗಿದರು. ಈ ಸಂದರ್ಭ ಕೋಪಗೊಂಡ ಸಿದ್ದಾರಾಮಯ್ಯ ಮಾಸ್ಕ್ ತೆಗೆದು, "ಎಲ್ಲಾ ನನ್ನ ಸೋಲಿಸಿ ಬಿಟ್ಟು ಇಲ್ಲಿ ಬಂದಿದ್ದೀರಿ. ನಾಚಿಕೆ ಆಗೋದಿಲ್ವಾ ನಿಮಗೆ?" ಎಂದು ಬೈದರು.
Recommended Video
ಸಿದ್ದರಾಮಯ್ಯ ಗದರಿದ್ದರಿಂದ ಕಾರ್ಯಕರ್ತರು ತಬ್ಬಿಬಾದರು. ಸಿದ್ದರಾಮಯ್ಯ ಕಾರ್ಯಕರ್ತರ ವಿರುದ್ಧ ಆಕ್ರೋಶಗೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.