ರಸ್ತೆ ನಟ್ಟನಡುವೆ ಜನರ ಮಧ್ಯೆಯೇ ಆರಾಮಾಗಿ ನಡೆದಾಡಿದ ಚಿರತೆ
ಮೈಸೂರು, ಜನವರಿ 6: ಕಾಡಾನೆಗಳ ಹಾವಳಿ ಜತೆಗೇ ಇದೀಗ ಚಿರತೆ ಹಾವಳಿ ಕೂಡ ಶುರುವಾಗಿದೆ. ಪ್ರತಿದಿನ ಅನೇಕ ಗ್ರಾಮೀಣ ಭಾಗ ಹಾಗೂ ನಗರಗಳ ಹೊರವಲಯದಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿವೆ.
ಹೀಗೆ ಚಿರತೆ ಮರಿಯೊಂದು ಹುಣಸೂರು-ಗೋಣಿಗೊಪ್ಪ ಮುಖ್ಯರಸ್ತೆ ಮಧ್ಯೆ ಕಾಣಿಸಿಕೊಂಡಿದ್ದು, ಆ ವೀಡಿಯೋ ಈಗ ವೈರಲ್ ಆಗಿದೆ. ಹಾಡುಹಗಲೇ ಚಿರತೆ ಮರಿಯೊಂದು ಜನರಿಗೆ ದರ್ಶನ ಕೊಟ್ಟಿದೆ. ಅದರೆ ಜನರು ಹೆದರಿ ಓಡದೇ ಅಲ್ಲೇ ಚಿರತೆಯನ್ನು ನೋಡುತ್ತಾ ನಿಂತಿದ್ದಾರೆ. ಸುಮಾರು ಎರಡು ವರ್ಷ ಪ್ರಾಯದ್ದೆನ್ನಲಾದ ಈ ಚಿರತೆ ಏಕಾಏಕಿ ಮುಖ್ಯ ರಸ್ತೆಯಲ್ಲಿ ವಾಹನಗಳ ಮಧ್ಯೆಯೇ ಆರಾಮವಾಗಿ ತಿರುಗಾಡಿಕೊಂಡು ಕಾಡಿಗೆ ಹೋಗಿದೆ.
ದಾರಿ ಮಧ್ಯೆ ಚಿರತೆಗಳ ಮಿಲನ; ವೈರಲ್ ಆಯ್ತು ವೀಡಿಯೋ
ಹುಣಸೂರು - ಗೋಣಿಗೊಪ್ಪ ಮುಖ್ಯರಸ್ತೆಯ ತಿತಿಮತಿ ಅರಣ್ಯ ಪ್ರದೇಶದ ಆನೆಚೌಕೂರು ಮುಂದೆ ಇರುವ ಮಾರಮ್ಮ ದೇವಸ್ಥಾನದ ಬಳಿ ಚಿರತೆ ಮರಿಯೊಂದು ತಾಯಿಯಿಂದ ಬೇರ್ಪಟ್ಟು ಮುಖ್ಯರಸ್ತೆಗೆ ಬಂದು ತಿರುಗಾಡುತ್ತಿತ್ತು. ಈ ದೃಶ್ಯವನ್ನು ಜನರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.