ಏಷಿಯನ್ ಪೇಂಟ್ಸ್ ವಿರುದ್ಧದ ರೈತರ ಹೋರಾಟಕ್ಕೆ ಜಯ; ಉದ್ಯೋಗ ನೀಡಲು ಕಾರ್ಖಾನೆ ಸಮ್ಮತಿ
ಮೈಸೂರು, ಜನವರಿ 15: ಸತತ 55 ದಿನಗಳ ಕಾಲ ಏಷಿಯನ್ ಪೇಂಟ್ಸ್ ಕಾರ್ಖಾನೆ ಮುಂದೆ ರೈತರು ನಡೆಸುತ್ತಿರುವ ಪ್ರತಿಭಟನೆಯು ಅಂತ್ಯ ಕಾಣುವ ಸೂಚನೆ ದೊರೆತಿದೆ.
ಪ್ರತಿಭಟನಾ ಸ್ಥಳಕ್ಕೆ ಶುಕ್ರವಾರ ಆಗಮಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ʻಭೂಮಿ ಕಳೆದುಕೊಂಡವರಿಗೆ ಇದೇ ಘಟಕದಲ್ಲಿ ಉದ್ಯೋಗ ನೀಡಲು ಮಾಲೀಕರು ಸಮ್ಮತಿ ಸೂಚಿಸಿದ್ದಾರೆʼ ಎಂದು ರೈತರಿಗೆ ತಿಳಿಸಿದರು.
ʻಇಷ್ಟು ತಾಳ್ಮೆಯಿಂದ 54 ದಿನ ಪ್ರತಿಭಟನೆ ನಡೆಸಿರುವುದಕ್ಕೆ ನಿಮಗೆ ಪ್ರತಿಫಲ ಸಿಕ್ಕಿದೆ. ಇಲ್ಲೇ ಪ್ಲಾಂಟ್ ಮಾಡಿ ಎಲ್ಲರಿಗೂ ಉದ್ಯೋಗ ನೀಡುತ್ತೇವೆ ಎಂದು ಕಾರ್ಖಾನೆ ಮಾಲೀಕರು ಹೇಳಿದ್ದಾರೆ ನೀವು ಪ್ರತಿಭಟನೆ ಕೈಬಿಡಿʼ ಎಂದು ಜಿಲ್ಲಾಧಿಕಾರಿ ರೈತರಲ್ಲಿ ಮನವಿ ಮಾಡಿದರು.
ʻಉದ್ಯೋಗ ನೀಡುವ ಸಂಬಂಧ ಅಧಿಕೃತ ಆದೇಶ ಪ್ರತಿ ನಮ್ಮ ಕೈ ಸೇರುವವರೆಗೂ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲʼ ಎಂದು ರೈತರು ಪಟ್ಟುಹಿಡಿದಿದ್ದಾರೆ. ಇದರಿಂದ ಜಿಲ್ಲಾಧಿಕಾರಿ ಮನವೊಲಿಕೆ ಪ್ರಯತ್ನ ವಿಫಲವಾಗಿದ್ದು, ಶೀಘ್ರವೇ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನಂಜನಗೂಡಿನ ಸಮೀಪದ ಹಿಮ್ಮಾವು ಗ್ರಾಮದಲ್ಲಿ ಏಷಿಯನ್ ಪೇಂಟ್ಸ್ಗೆ ಕಾರ್ಖಾನೆ ನಿರ್ಮಾಣಕ್ಕೆ ಜಾಗ ನೀಡಿದ್ದ ರೈತರಿಗೆ ಮೊದಲು ನೀಡಿದ್ದ ಭರವಸೆಯಂತೆ ಅದೇ ಘಟಕದಲ್ಲಿ ಉದ್ಯೋಗ ನೀಡಲು ಕಾರ್ಖಾನೆಯವರು ನಿರಾಕರಿಸಿದ್ದರು. ಇದನ್ನು ವಿರೋಧಿಸಿ ರೈತರು ಕಾರ್ಖಾನೆ ಎದುರು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದರು.