ಬಿಷಪ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಉಲ್ಟಾ ಹೊಡೆದ ಸಂತ್ರಸ್ತೆ
ಮೈಸೂರು, ಡಿಸೆಂಬರ್ 14: ಮೈಸೂರಿನ ಬಿಷಪ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಸಂತ್ರಸ್ತೆ ಇದೀಗ ಏಕಾಏಕಿ ಯು ಟರ್ನ್ ಆಗಿದ್ದಾರೆ.
ನನ್ನ ಮೇಲೆ ನಿರಂತರವಾಗಿ ಕಿರುಕುಳವಾಗಿದೆ. ಜೀವ ಬೆದರಿಕೆ ಇದೆ ಎಂದು ಮೈಸೂರಿನ ಬಿಷಪ್ ವಿಲಿಯಂ ವಿರುದ್ಧ ಸಂತ್ರಸ್ತೆ ಆರೋಪಿಸಿ ಕಣ್ಣೀರು ಹಾಕಿದ್ದರು. ಈ ಬಗ್ಗೆ ಸೆಲ್ಫಿ ವಿಡಿಯೋ ದಾಖಲು ಮಾಡಿದ್ದ ಸಂತ್ರಸ್ತೆ ಸ್ವತಃ ದೂರು ನೀಡಿದ್ದರು. ಆದರೆ ಈಗ ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಉಲ್ಟಾ ಹೊಡೆದಿದ್ದಾರೆ.
ಬಿಷಪ್ ಕಡೆಯಿಂದ ಯಾವುದೇ ತೊಂದರೆ ಇಲ್ಲ
ನನಗೆ ಬಿಷಪ್ ಕಡೆಯಿಂದ ತೊಂದರೆ ಆಗಿಲ್ಲ. ಯಾರೋ ಬಲವಂತವಾಗಿ ವಿಡಿಯೋ ಮಾಡಿಸಿಕೊಂಡು, ದೂರು ಬರೆಸಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಸಂತ್ರಸ್ತೆ ಉಲ್ಟಾ ಹೊಡೆದಿದ್ದಾರೆ. ಇಂದು ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸಂತ್ರಸ್ತೆ, "ನನಗೆ ಬಿಷಪ್ ಕಡೆಯಿಂದ ಕಿರುಕುಳ ಆಗಿಲ್ಲ. ಯಾರೋ ಬಲವಂತವಾಗಿ ವಿಡಿಯೋ ಮಾಡಿಸಿಕೊಂಡು, ದೂರು ಬರೆಸಿಕೊಂಡಿದ್ದಾರೆ" ಎಂದು ಹೇಳಿದ್ದಾರೆ.
ಲೈಂಗಿಕ ದೌರ್ಜನ್ಯ ಆರೋಪದ ಸುಳಿಯಲ್ಲಿ ಮೈಸೂರಿನ ಬಿಷಪ್; ತನಿಖೆಗೆ ಆಗ್ರಹ
ಹೆಸರು ಹೇಳದ ಸಂತ್ರಸ್ತೆ
"ಈ ರೀತಿ ವೀಡಿಯೋ ಮಾಡಿ, ನನ್ನ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ" ಎಂದು ಹೇಳಿಕೆ ನೀಡಿರುವ ಸಂತ್ರಸ್ತೆ, ಹೀಗೆ ಬಲವಂತವಾಗಿ ವಿಡಿಯೋ ಮಾಡಿಸಿಕೊಂಡವರ ಹೆಸರನ್ನು ಹೇಳಿಲ್ಲ. ಹೀಗಾಗಿ ಸಂತ್ರಸ್ತೆಯ ನಡೆಯಿಂದ ಅನುಮಾನ ಉಂಟಾಗಿದ್ದು ಇದೀಗ ಸಂತ್ರಸ್ತೆ ಸ್ಪಷ್ಟನೆ ನೀಡಲು ಬಂದು ಪೇಚಿಗೆ ಸಿಲುಕಿದ್ದಾರೆ.
ಬಿಷಪ್ ಕೆ.ಎ. ವಿಲಿಯಂ ಮೇಲೆ ದಾಖಲಾಗಿದ್ದ ದೂರು
ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಮೈಸೂರು ಪ್ರಾಂತ್ಯದ ಧರ್ಮಗುರು ಬಿಷಪ್ ಕೆ.ಎ.ವಿಲಿಯಂ ಹಾಗೂ ಇತರರ ವಿರುದ್ಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಮೈಸೂರಿನ ಸಾಮಾಜಿಕ ಕಾರ್ಯಕರ್ತ ರಾಬರ್ಟ್ ರೊಸಾರಿಯೋ ಎಂಬುವರು ಆರೋಪಿಸಿ, ಬಿಷಪ್ ಹಾಗೂ ಇತರರು ಅವರ ನಿವಾಸದಲ್ಲಿ ನೌಕರಿ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಮಾನಸಿಕ, ಲೈಂಗಿಕ ಕಿರುಕುಳ ನೀಡಿ ದೌರ್ಜನ್ಯವೆಸಗಿದ್ದಾರೆ. ಆ ಕಾರಣದಿಂದ ನೌಕರಿ ಬಿಟ್ಟು ಮಹಿಳೆ ಬೇರೆ ಕಡೆ ಕೆಲಸಕ್ಕೆ ಸೇರಿಕೊಂಡಿದ್ದು, ಆಕೆಗೆ ಬಿಷಪ್ ಬಗ್ಗೆ ಇನ್ನೂ ಹಲವು ವಿಷಯಗಳ ಕುರಿತು ಗೊತ್ತಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಅಪಹರಣ ಮಾಡಿ ತಮ್ಮ ವಿಚಾರ ಬಾಯಿ ಬಿಡದಂತೆ ಕೊಲೆ ಬೆದರಿಕೆ ಒಡ್ಡಿದ್ದಾರೆ. ಅದೇ ರೀತಿ ಹಲವು ಮಹಿಳೆಯರಿಗೂ ದೌರ್ಜನ್ಯವೆಸಗಿದ್ದು, ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು.
ಮೈಸೂರು ಬಿಷಪ್ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲು
ಆರೋಪ ಅಲ್ಲಗಳೆದಿದ್ದ ಬಿಷಪ್
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಬಿಷಪ್ ಡಾ.ಕೆ.ಎಂ.ವಿಲಿಯಂ, ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ಅಲ್ಲಗಳೆದಿದ್ದರು. ನನ್ನ ಏಳಿಗೆ ಸಹಿಸದವರು ಈ ರೀತಿ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಮೈಸೂರಿನ ಬಿಷಪ್ ಆದ ಬಳಿಕ ನಾನು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಆದರೆ ಒಂದು ಗುಂಪಿಗೆ ನನ್ನ ಕೆಲಸಗಳನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ನನ್ನ ವಿರುದ್ಧ ಆರೋಪ ಮಾಡಿದವರು ಒಮ್ಮೆಯೂ ನನ್ನನ್ನು ಭೇಟಿಯಾಗಿಲ್ಲ. ಯಾವುದೇ ಆರೋಪಗಳಿದ್ದರೆ ಧರ್ಮ ಸಭೆಯಲ್ಲಿ ಚರ್ಚಿಸಿ ಸಲಹಾ ಸಮಿತಿಗೆ ತಿಳಿಸಬೇಕು. ಅವರು ಆ ಕೆಲಸ ಮಾಡಿಲ್ಲ. ಸ್ವಾರ್ಥ ಸಾಧನೆಗಾಗಿ ಆರೋಪ ಮಾಡುತ್ತಿದ್ದಾರೆ. ಅವರು ಬಂದು ನೇರ ಮಾತನಾಡಲಿ ಎಂದು ಸವಾಲು ಹಾಕಿದ್ದರು.