ಭಗವದ್ಗೀತೆ ಸುಡಲೆತ್ನಿಸಿದ ಪ್ರೊ. ಭಗವಾನ್ ವಿರುದ್ಧ ದೂರು
ಮೈಸೂರು, ಫೆ. 18: ಭಗವದ್ಗೀತೆ ಸುಡಲು ಯತ್ನಿಸಿದ ಪ್ರೊ. ಕೆ.ಎಸ್. ಭಗವಾನ್ ವಿರುದ್ಧ ವಿಶ್ವ ಹಿಂದೂ ಪರಿಷತ್ ಮುಖಂಡ ಮನೋಜ್ಕುಮಾರ್ ಅವರು ನಗರದ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರೊ. ಭಗವಾನ್ ಅವರು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದ್ದಾರೆ. ಧರ್ಮಗ್ರಂಥಗಳ ಕುರಿತು ಹಗುರವಾಗಿ ಮಾತನಾಡಿದ್ದಾರೆ. ಹಿಂದೂ ಧರ್ಮದ ವಿರುದ್ಧ ಹಲವು ಬಾರಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಮಾತನಾಡಿದ್ದಾರೆ. ಆದ್ದರಿಂದ ಅವರನ್ನು ಬಂಧಿಸಬೇಕೆಂದು ವಿಶ್ವಹಿಂದೂ ಪರಿಷತ್ ಸದಸ್ಯರು ಪೊಲೀಸ್ ದೂರಿನಲ್ಲಿ ಆಗ್ರಹಿಸಿದ್ದಾರೆ.
ಮೈಸೂರಿನ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರೊ. ಕೆ.ಎಸ್. ಭಗವಾನ್ ಭಗವದ್ಗೀತೆಯನ್ನು ಟೀಕಿಸಿದ್ದರು. ಅಲ್ಲದೆ, ಅದೇ ಕಾರ್ಯಕ್ರಮದಲ್ಲಿ ಪುಸ್ತಕವನ್ನು ಸುಡಲು ಯತ್ನಿಸಿದ್ದರು. ಇದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿತ್ತು.
ಇದೇ ಮೊದಲಲ್ಲ : ಈ ಮೊದಲು ಪ್ರೊ. ಭಗವಾನ್ ಅವರು ಹಿಂದೂ ದೇವರನ್ನು ಪೂಜಿಸಬೇಡಿ ಎಂದು ಹೇಳಿಕೆ ನೀಡಿದ್ದರು. ಹಿಂದೂ ದೇವರುಗಳು ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿದಿರುತ್ತಾರೆ. ಇದು ಹಿಂಸೆಯ ಸಂಕೇತ ಎಂದು ಅವರು ಆರೋಪಿಸಿದ್ದರು.