ಮೈಸೂರು; ವಸ್ತುಪ್ರದರ್ಶನ ಆವರಣಕ್ಕೆ ತರಕಾರಿ ಮಾರುಕಟ್ಟೆ ಶಿಫ್ಟ್, ಚಿಲ್ಲರೆ ಮಾರಾಟಕ್ಕಿಲ್ಲ ಅವಕಾಶ
ಮೈಸೂರು, ಜುಲೈ 31: ಕೋವಿಡ್-19 ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮವಾಗಿ ಮೈಸೂರು ನಗರದ ಎಂಜಿ ರಸ್ತೆಯ ತರಕಾರಿ ಮಾರುಕಟ್ಟೆಯನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ವಸ್ತು ಪ್ರದರ್ಶನ ಆವರಣಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ.
ಆ ಸ್ಥಳದಲ್ಲಿ ರೈತರು/ಸಗಟು ವ್ಯಾಪಾರಸ್ಥರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ತರಕಾರಿಯ ಚಿಲ್ಲರೆ ಮಾರಾಟಕ್ಕೆ ಅವಕಾಶವಿಲ್ಲ ಎಂದು ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಸ್ಪಷ್ಟಪಡಿಸಿದ್ದಾರೆ.
ಮೈಸೂರು ದೇವರಾಜ ಮಾರುಕಟ್ಟೆ ಹೂವಿನ ಅಂಗಡಿಗಳು ಬಂದ್
ಈ ಕುರಿತು ಹೇಳಿಕೆ ನೀಡಿರುವ ಅವರು, "ವಸ್ತು ಪ್ರದರ್ಶನ ಆವರಣದಲ್ಲಿ ಚಿಲ್ಲರೆ ಮಾರಾಟಗಾರರು ಸಹ ಹೆಚ್ಚಿನ ಸಂಖ್ಯೆಯಲ್ಲಿ ತರಕಾರಿ ವ್ಯಾಪಾರ ವಹಿವಾಟು ನಡೆಸುತ್ತಿರುವುದರಿಂದ ಹೆಚ್ಚಿನ ಜನಸಂದಣಿ ಉಂಟಾಗುತ್ತಿದೆ. ಸಾಮಾಜಿಕ ಅಂತರದ ಉಲ್ಲಂಘನೆ ಹೆಚ್ಚಾಗುತ್ತಿದೆ. ಆದ್ದರಿಂದ ಚಿಲ್ಲರೆ ಮಾರಾಟಗಾರರು ಅವರವರ ಸ್ಥಳೀಯ ಪ್ರದೇಶಗಳಲ್ಲಿ ತರಕಾರಿ ಮಾರಾಟ ಮಾಡಿಕೊಳ್ಳಲು ಆದೇಶಿಸಿ, ವಸ್ತುಪ್ರದರ್ಶನ ಅವರಣದಲ್ಲಿ ರೈತರಿಗೆ ಸಗಟು ವ್ಯಾಪಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಆದೇಶ ಉಲ್ಲಂಘಿಸಿ ಸದರಿ ಸ್ಥಳದಲ್ಲಿಯೇ ಚಿಲ್ಲರೆ ವ್ಯಾಪಾರ ಮಾಡಿದಲ್ಲಿ ಅಂತಹ ವ್ಯಾಪಾರಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಕೆ ನೀಡಿದ್ದಾರೆ.